
ಲಾಡರ್ಹಿಲ್, ಆಗಸ್ಟ್ 3: ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಶನಿವಾರ (ಆಗಸ್ಟ್ 3) ಆತಿಥೇಯರ ವಿರುದ್ಧ ಮೊದಲ ಟಿ20 ಪಂದ್ಯವನ್ನಾಡುತ್ತಿದೆ. ಈ ಪಂದ್ಯಕ್ಕೂ ಮುನ್ನ ಭಾರತದ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ವಿರಾಟ್ ಕೊಹ್ಲಿ ಬಳಗಕ್ಕೆ ವಿಶೇಷ ಸಲಹೆಯೊಂದನ್ನು ನೀಡಿದ್ದಾರೆ.
'ಗಾಯದಿಂದ ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್ ಚೇತರಿಸಿಕೊಂಡು ತಂಡ ಸೇರಿಕೊಂಡಿರುವ ರೋಹಿತ್ ಶರ್ಮಾ-ಧವನ್ ಜೋಡಿ ಬಲಿಷ್ಠಗೊಂಡಿದೆ. ಹೀಗಾಗಿ ಕೆಎಲ್ ರಾಹುಲ್ ವಿಶ್ವಕಪ್ ವೇಳೆ ತೋರಿಸಿದ್ದ ಫಾರ್ಮ್ ಹೆಚ್ಚಿಸಿಕೊಳ್ಳುವುದನ್ನು ಮತ್ತು 4ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬರುವುದನ್ನು ನೋಡಬಯಸಿದ್ದೇನೆ,' ಎಂದು ಲಕ್ಷ್ಮಣ್ ಹೇಳಿಕೊಂಡಿದ್ದಾರೆ.
ಭಾರತ vs ವೆಸ್ಟ್ ಇಂಡೀಸ್, ಮೊದಲ ಟಿ20, Live ಸ್ಕೋರ್ಕಾರ್ಡ್
ಮಾತು ಮುಂದುವರೆಸಿದ 'ವೆರಿ ವೆರಿ ಸ್ಪೆಷಲ್' ಲಕ್ಷ್ಮಣ್, 'ಇದರ ಜೊತೆಗೆ ರಿಷಬ್ ಪಂತ್ ಹೇಗೆ ಆಡುತ್ತಾರೆ ಎಂದು ನೋಡಲು ಆಸಕ್ತಿ ತಾಳಿದ್ದೇನೆ. ಎಲ್ಲಾ ಕ್ರಿಕೆಟ್ ಮಾದರಿಯಲ್ಲಿ ಪಂತ್ ಈಗ ನಿಶ್ಚಿತರಾಗುತ್ತಿದ್ದಾರೆ,' ಎಂದು ನುಡಿದರು. ವಿಂಡೀಸ್ ಪ್ರವಾಸ ಸರಣಿಯಲ್ಲಿ ಭಾರತ ಒಟ್ಟು 3 ಟಿ20 ಪಂದ್ಯಗಳನ್ನಾಡಲಿದೆ.
ಆದರೆ ವಿವಿಎಲ್ ಲಕ್ಷ್ಮಣ್ ಸಲಹೆಯನ್ನು ಟೀಮ್ ಇಂಡಿಯಾ ಗಣನೆಗೆ ತೆಗೆದುಕೊಂಡಂತೆ ಕಾಣುತ್ತಿಲ್ಲ. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತ ತಂಡದಲ್ಲಿ ಕೆಎಲ್ ರಾಹುಲ್ ಅವರನ್ನು ಆಡುವ 11 ಆಟಗಾರರಲ್ಲಿ ಹೆಸರಿಸಿಲ್ಲ. ರಾಹುಲ್ ಬದಲಿಗೆ ಮತ್ತೊಬ್ಬ ಕನ್ನಡಿಗ ಮನೀಶ್ ಪಾಂಡೆ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.