
ಪೂಣೆ: ಇಂಗ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆರಂಭಿಕ ಪಂದ್ಯ ಗೆದ್ದು ಸರಣಿ ಮುನ್ನಡೆಯಲ್ಲಿದ್ದ ಟೀಮ್ ಇಂಡಿಯಾ ಸರಣಿಯನ್ನೂ ಸುಲಭವಾಗಿ ಗೆದ್ದುಕೊಳ್ಳುವ ವಿಶ್ವಾಸದಲ್ಲಿತ್ತು. ಆದರೆ ದ್ವಿತೀಯ ಪಂದ್ಯವನ್ನು ಅಧಿಕಾರಯುತವಾಗಿ ಗೆದ್ದು ಸರಣಿ ಸಮಬಲಗೊಳಿಸಿಕೊಂಡ ಇಂಗ್ಲೆಂಡ್, ನಮ್ಮದು ವಿಶ್ವ ರ್ಯಾಂಕಿಂಗ್ನ ನಂ.1 ತಂಡ ಅನ್ನೋದನ್ನು ಸಾರಿ ಹೇಳಿತ್ತು.
ಪೂಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ಶುಕ್ರವಾರ (ಮಾರ್ಚ್ 26) ನಡೆದಿದ್ದ ದ್ವಿತೀಯ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಭಾರತ 50 ಓವರ್ಗೆ 6 ವಿಕೆಟ್ ನಷ್ಟದಲ್ಲಿ 336 ರನ್ ಗಳಿಸಿತ್ತು. ಆದರೆ ಗುರಿ ಬೆನ್ನಟ್ಟಿದ ಇಂಗ್ಲೆಂಡ್ 43.3 ಓವರ್ಗೆ 6 ವಿಕೆಟ್ ಕಳೆದು 337 ರನ್ ಬಾರಿಸಿತ್ತು.
ಇಂಗ್ಲೆಂಡ್ ಇನ್ನಿಂಗ್ಸ್ನಲ್ಲಿ ಭಾರತದ ಭುವನೇಶ್ವರ್ ಕುಮಾರ್, ಪ್ರಸಿದ್ಧ್ ಕೃಷ್ಣ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಕೃನಾಲ್ ಪಾಂಡ್ಯ ಓವರ್ ಎಸೆದಿದ್ದರು. ಇದರಲ್ಲಿ ಯಾದವ್ 84 ರನ್ ನೀಡಿ ಒಂದೂ ವಿಕೆಟ್ ಪಡೆಯದೆ ದುಬಾರಿಯೆನಿಸಿದ್ದರು. ಇನ್ನು ಪ್ರಸಿದ್ಧ್ 2, ಭುವನೇಶ್ವರ್ ಕುಮಾರ್ 1 ವಿಕೆಟ್ ಪಡೆದಿದ್ದರು.
ಭಾರತೀಯ ಬೌಲರ್ಗಳ ಬಣದಲ್ಲಿ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಇದ್ದರಾದರೂ ಅವರಿಗೆ ಬೌಲಿಂಗ್ ನೀಡಿರಲಿಲ್ಲ. ಇದನ್ನು ಭಾರತದ ಮಾಜಿ ಬ್ಯಾಟ್ಸ್ಮನ್ ವಿವಿಎಸ್ ಲಕ್ಷ್ಮಣ್ ಪ್ರಶ್ನಿಸಿದ್ದಾರೆ. ಬೆನ್ನು ಮೂಳೆಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಪಾಂಡ್ಯ ಹಿಂದಿನ ಟಿ20ಐ ಸರಣಿಯಲ್ಲಿ ಮತ್ತೆ ಬೌಲಿಂಗ್ ಮಾಡಿದ್ದರು. ವಿಕೆಟ್ ಕೂಡ ಪಡೆದಿದ್ದರು.
'ಟಿ20ಐ ಸರಣಿಯಲ್ಲಿ ಉತ್ತಮ ರೀತಿಯಲ್ಲಿ ಕಂಡಿದ್ದರೂ ಹಾರ್ದಿಕ್ಗೆ ಬೌಲಿಂಗ್ ಯಾಕೆ ನೀಡಲಿಲ್ಲ ಅನ್ನೋದು ನನಗೆ ಅರ್ಥವಾಗಲಿಲ್ಲ. ಖಂಡಿತಾ ನೀವು ಹಾರ್ದಿಕ್ನನ್ನು 6ನೇ ಬೌಲಿಂಗ್ ಆಯ್ಕೆಯಾಗಿ ಬಳಸಿಕೊಳ್ಳಬೇಕು' ಎಂದು ವೆರಿ ವೆರಿ ಸ್ಪೆಷಲ್ ಲಕ್ಷ್ಮಣ್ ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.