
ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(ಎನ್ಸಿಎ)ಯ ಮುಖ್ಯಸ್ಥರಾಗಿ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಅಧಿಕೃತವಾಗಿ ನೇಮಕವಾಗಿದ್ದು ಇಂದು ತಮ್ಮ ಮೊದಲ ದಿನದ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಈ ಬಗ್ಗೆ ಸ್ವತಃ ವಿವಿಎಸ್ ಲಕ್ಷ್ಮಣ್ ಸಾಮಾಜಿಕ ಜಾಲತಾಣದಲ್ಲಿ ಫೊಟೋ ಹಂಚಿಕೊಂಡಿದ್ದು ಹೊಸ ಜವಾಬ್ಧಾರಿಯನ್ನು ವಹಿಸಿಕೊಂಡ ಬಗ್ಗೆ ಸಂತಸವನ್ನು ವ್ಯಕ್ತಪಡಿಸಿದ್ದಾರೆ.
ಈ ಮುನ್ನ ಎನ್ಸಿಎ ಮುಖ್ಯಸ್ಥರಾಗಿ ರಾಹುಲ್ ದ್ರಾವಿಡ್ ಜವಾಬ್ಧಾರಿ ವಹಿಸಿಕೊಂಡಿದ್ದರು. ಆದರೆ ಅವರು ಇತ್ತೀಚೆಗಷ್ಟೇ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ನೇಮಕವಾಗಿದ್ದು ಎನ್ಸಿಎ ಮುಖ್ಯಸ್ಥ ಹುದ್ದೆ ತೆರವಾಗಿತ್ತು. ಈ ಹುದ್ದೆಗೆ ವಿವಿಎಸ್ ಲಕ್ಷ್ಮಣ್ ಅವರನ್ನೇ ನೇಮಕ ಮಾಡುವ ಬಗ್ಗೆ ಸಾಕಷ್ಟು ಮಾತುಗಳ ಕೇಳಿ ಬಂದಿತ್ತು. ಕಡೆಗೂ ಇದು ನಿಜವಾಗಿದ್ದು ಸಹ ಆಟಗಾರನೂ ಆಗಿದ್ದ ರಾಹುಲ್ ದ್ರಾವಿಡ್ ಅವರಿಂದ ವಿವಿಎಸ್ ಲಕ್ಷ್ಮಣ್ ಎನ್ಸಿಎ ಮುಖ್ಯಸ್ಥ ಹುದ್ದೆಯನ್ನು ವಹಿಸಿಕೊಂಡಿದ್ದಾರೆ.
47ರ ಹರೆಯದ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಜೊತೆಗೆ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ನ ಬೌಲಿಂಗ್ ಕೋಚ್ ಆಗಿ ಕರ್ತವ್ಯ ನಿರ್ವಹಿಸಿದ್ದ ಟ್ರಾಯ್ ಕೂಲಿ ಕೂಡ ಎನ್ಸಿಗೆ ಸೇರಿಕೊಂಡಿದ್ದಾರೆ. ಡಿಸೆಂಬರ್ 13ರಿಂದ ಇವರ ಅವಧಿ ಆರಂಭವಾಗಿದೆ.
ಇನ್ನು ಈ ನೇಮಕಕ್ಕೂ ಮುನ್ನ ಬಿಸಿಸಿಐ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿಯನ್ನು ನೀಡಿದ್ದರು. ಲಕ್ಷ್ಮಣ್ ನೇಮಕದ ಬಗ್ಗೆ ಮಾತನಾಡಿದ್ದ ಅವರು "ಒಪ್ಪಂದಕ್ಕೆ ಲಕ್ಷ್ಮಣ್ ಈಗಾಗಲೇ ಸಹಿ ಹಾಕಿದ್ದಾರೆ. ಭಾರತ ಹಾಗೂ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಅಂತಿಮ ಪಂದ್ಯದಲ್ಲಿ ಅವರ ಈ ಹಿಂದಿನ ಮಾಧ್ಯಮ ಅಸೈನ್ಮೆಂಟ್ ಕೂಡ ಪೂರ್ಣವಾಗಿದೆ. ಅವರು ಬೆಂಗಳೂರಿನಲ್ಲಿ ಡಿಸೆಂಬರ್ 13ರಿಂದ ಕರ್ತವ್ಯವನ್ನು ಆರಂಭಿಸಲಿದ್ದಾರೆ. ಅಂಡರ್19 ಐಸಿಸಿ ವಿಶ್ವಕಪ್ ಇರುವ ಕಾರಣದಿಂದಾಗಿ ಅವರು ವೆಸ್ಟ್ ಇಂಡೀಸ್ನಲ್ಲಿಯೂ ಇರಲಿದ್ದಾರೆ" ಎಮದು ಮಾಹಿತಿ ನೀಡಿದ್ದರು.
ಕಳೆದ ತಿಂಗಳು ವಿವಿಎಸ್ ಲಕ್ಷ್ಮಣ್ ಎನ್ಸಿಎ ಮುಖ್ಯಸ್ಥ ಹುದ್ದೆಯನ್ನು ವಹಿಸಿಕೊಳ್ಳಲು ಒಪ್ಪಿಗೆ ಸೂಚಿಸಿದ ನಂತರ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ವಿವಿಎಸ್ ಲಕ್ಷ್ಮಣ್ ಭಾರತೀಯ ಕ್ರಿಕೆಟ್ಗೆ ನೀಡಿದ ಕೊಡುಗೆಯ ಬಗ್ಗೆ ಭಾರೀ ಮೆಚ್ಚುಗೆಯ ಮಾತುಗಳನ್ನು ಆಡಿದ್ದರು. ಅಲ್ಲದೆ ಮಾಜಿ ಭಾರತೀಯ ಬ್ಯಾಟ್ಸ್ಮನ್ ಈ ಹಿದ್ದೆಯನ್ನು ವಹಿಸಿಕೊಳ್ಳಲು ಸಾಕಷ್ಟು ತ್ಯಾಗಗಳನ್ನು ಮಾಡುತ್ತಿದ್ದಾರೆ. ಇದು ಅವರ ಪ್ರಸ್ತುತ ಇರುವ ಸಂಬಳಕ್ಕಿಂತ ಕಡಿಮೆ ಸಂಬಳವನ್ನು ನೀಡುವ ಹುದ್ದೆಯಾಗಿದೆ ಎಂದಿದ್ದರು ಸೌರವ್ ಗಂಗೂಲಿ.
ವಿವಿಎಸ್ ಲಕ್ಷ್ಮಣ್ ಸ್ಟಾರ್ಸ್ಪೋರ್ಟ್ಸ್ಗೆ ಕಾಮೆಂಟೇಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು ಅದನ್ನು ತೊರೆದಿದ್ದಾರೆ. ಅಲ್ಲದೆ ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಮೆಂಟರ್ ಆಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದರು. ಅದರಿಂದ ಕೂಡ ಹೊರಬಂದಿದ್ದಾರೆ.
ಭಾರತೀಯ ಕ್ರಿಕೆಟ್ ತಂಡಕ್ಕೆ ಸೇವೆಯನ್ನು ಸಲ್ಲಿಸುವ ಸಲುವಾಗಿ ಅವರು ಮುಂದಿನ ಂಉರು ವರ್ಷಗಳ ಕಾಲ ಹೈದರಾಬಾದ್ನಿಂದ ಬೆಂಗಳೂರಿಗೆ ಸ್ಥಳಾಂತರವಾಗಬೇಕಿದೆ. ಇದು ಗಮನಾರ್ಹವಾದ ಸಂಗತಿಯಾಗಿದೆ. ಖಂಡಿತವಾಗಿಯೂ ಅವರ ಗಳಿಕೆಯಲ್ಲಿ ಕಡಿಮೆಯಾಗುತ್ತದೆ. ಆದರೆ ಅದಕ್ಕೆ ಅವರು ಒಪ್ಪಿಕೊಂಡಿದ್ದಾರೆ. ಅವರ ಪತ್ನಿ ಹಾಗೂ ಮಕ್ಕಳು ಕೂಡ ಬೆಂಗಳೂರಿಗೆ ಸ್ಥಳಾಂತರವಾಗುತ್ತಿದ್ದಾರೆ. ಅವರ ಮಕ್ಕಳು ಮುಂದೆ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ನಡೆಸಲಿದ್ದು ಕೌಟುಂಬಿಕವಾಗಿ ಇದು ಅವರಿಗೆ ದೊಡ್ಡ ಬದಲಾವಣೆಯಾಗಲಿದೆ. ನೀವು ಭಾರತೀಯ ಕ್ರಿಕೆಟ್ ತಂಡಕ್ಕೆ ನಿಷ್ಠರಾಗದೆ ಇಂತಾ ತ್ಯಾಗ ಮಾಡುವುದು ಸುಲಭವಿಲ್ಲ" ಎಂದಿದ್ದರು ಸೌರವ್ ಗಂಗೂಲಿ.