
ಹೊಸದಿಲ್ಲಿ, ಮೇ 24: ಭಾರತ ಮಹಿಳಾ ಟಿ20 ಕ್ರಿಕೆಟ್ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್, 2018ರಲ್ಲಿ ನಡೆದ ಐಸಿಸಿ ಮಹಿಳಾ ಟಿ20 ಕ್ರಿಕೆಟ್ ಟೂರ್ನಿ ವೇಳೆ ಭುಗಿಲೆದ್ದ ವಿವಾದ ಸಂದರ್ಭದಲ್ಲಿ ತಂಡವನ್ನು ತೊರೆಯುವ ಆಲೋಚನೆ ಮಾಡಿದ್ದಾಗಿ ಬಹಿರಂಗ ಪಡಿಸಿದ್ದಾರೆ.
ಬುಮ್ರಾ ಬೌಲಿಂಗ್ನಲ್ಲಿ ರನ್ ಗಳಿಸುವ ತಂತ್ರ ಬಿಚ್ಚಿಟ್ಟ ಬ್ರಿಯಾನ್ ಲಾರಾ
ಮಹಿಳಾ ಟಿ20 ವಿಶ್ವಕಪ್ ಟೂರ್ನಿ ವೇಳೆ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯಕ್ಕೆ ಅನುಭವಿ ಬ್ಯಾಟರ್ ಮತ್ತು ಮಾಜಿ ನಾಯಕಿ ಮಿಥಾಲಿ ರಾಜ್ ಅವರನ್ನು ಹೊರಗಿಟ್ಟಿದ್ದು, ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಈ ಸಂದರ್ಭದಲ್ಲಿ ಹಲವರು ತಂಡದ ಮ್ಯಾನೇಜ್ಮೆಂಟ್ ನಿರ್ಧಾರವನ್ನು ಪ್ರಶ್ನಿಸಿದ್ದರು.
ಇದೇ ವೇಳೆ ಭಾರತ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ಟೀಮ್ ಮ್ಯಾನೇಜ್ಮೆಂಟ್ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು. ಹಿಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆಲುವು ತಂದುಕೊಟ್ಟ ತಂಡವನ್ನೇ ಇಂಗ್ಲೆಂಡ್ ವಿರುದ್ಧ ಆಡಿಸಲು ನಿರ್ಧರಿಸಿದ್ದಾಗಿ ಹರ್ಮನ್ ಹೇಳಿದ್ದರು. ಇದು ಮಿಥಾಲಿ ರಾಜ್ ಮತ್ತು ಹರ್ಮನ್ಪ್ರೀತ್ ನಡುವಣ ಬಾಂಧ್ಯವ ಹದಗಟ್ಟಿರುವ ಸೂಚನೆ ನೀಡಿತ್ತು. ಅಂದಿನ ಕೋಚ್ ರಮೇಶ್ ಪೊವಾರ್ ಇದೇ ಕಾರಣಕ್ಕೆ ತಂಡ ತೊರೆಯುವಂತಾಯಿತು.
ಈ ಸಂಗತಿ ಕುರಿತಾಗಿ ಸಂದರ್ಶನವೊಂದರಲ್ಲಿ ತಮ್ಮ ಮಾನಸಿಕ ತೊಳಲಾಟವನ್ನು ಹೇಳಿಕೊಂಡಿರುವ 30 ವರ್ಷದ ಅನುಭವಿ ಬಲಗೈ ಬ್ಯಾಟರ್ ಹರ್ಮನ್ಪ್ರೀತ್, "ಈ ವಿವಾದ ತಮ್ಮನ್ನು ಬಹುವಾಗಿ ಕಾಡಿತು. ನನ್ನ ಬಗ್ಗೆ ಹೇಳಲಾದ ಹಲವು ಸಂಗತಿಗಳು ವಾಸ್ತವಕ್ಕೆ ಬಹಳ ದೂರವಿತ್ತು. ಹೀಗಾಗಿ ಇವೆಲ್ಲದರಿಂದಲೂ ಕೆಲ ಕಾಲ ದೂರ ಉಳಿಯ ಬೇಕೆನಿಸುತ್ತಿತ್ತು. ನಾನು ಇಲ್ಲಿರುವುದು ಕ್ರಿಕೆಟ್ ಆಡುವ ಸಲುವಾಗಿ. ಆದರೆ ಕೆಲವರು ನನ್ನನ್ನು ಅನಗತ್ಯ ವಿವಾದಗಳಿಗೆ ಎಳೆದರು. ತಂಡವನ್ನು ಅನಗತ್ಯ ವಿವಾದಕ್ಕೆ ಸಿಲುಕಿಸಿದರು. ಅವರೊಟ್ಟಿಗೆ ಚರ್ಚಿಸುವುದನ್ನು ನಾನು ಮೊದಲು ನಿಲ್ಲಿಸಬೇಕಿತ್ತು,'' ಎಂದು ಹೇಳಿಕೊಂಡಿದ್ದಾರೆ.
ಭಾರತ ತಂಡದ ಪರ 87 ಏಕದಿನ ಪಂದ್ಯಗಳನ್ನು ಆಡಿರುವ ಹರ್ಮನ್ಪ್ರೀತ್, ಪಾದದ ಗಾಯದ ಸಮಸ್ಯೆ ಕಾರಣ ಕಳೆದ ಫೆಬ್ರವರಿಯಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯಿಂದ ಹೊರಗುಳಿದಿದ್ದರು. 2010ರ ಬಳಿಕ ಇದೇ ಮೊದಲ ಬಾರಿ ಹರ್ಮನ್ ತಂಡದಿಂದ ಹೊರಗುಳಿದಿದ್ದರು ಎಂಬುದು ವಿಶೇಷ. ಈ ಸಂದರ್ಭದಲ್ಲಿ ಸಿಕ್ಕ ವಿರಾಮ ಅವರಿಗೆ ಟಿ20 ವಿಶ್ವಕಪ್ ವೇಳೆ ಎದುರಾದ ಎಲ್ಲ ನೋವನ್ನು ಮರೆತು ಅದರಿಂದ ಹೊರಬರಲು ಸಾಧ್ಯವನ್ನಾಗಿಸಿತು ಎಂದು ಹೇಳಿದ್ದಾರೆ.
"ಕ್ರಿಕೆಟ್ನಿಂದ ಕೆಲ ಕಾಲ ವಿರಾಮ ಪಡೆಯಬೇಕೆಂದು ಮನಸ್ಸು ಮಾಡಿದ್ದೆ ಇದನ್ನು ನನ್ನ ಪೋಷಕರಲ್ಲಿಯೂ ಹೇಳುವುದಿದ್ದೆ. ಕೇವಲ ನಾನು ಹಿರಿಯ ಆಟಗಾರ್ತಿ ಎಂದ ಮಾತ್ರಕ್ಕೆ ಭಾರತ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಬೇಕು ಎಂಬುದು ನನ್ನ ಮನಸ್ಥಿತಿಯಲ್ಲ. ಕ್ರಿಕೆಟ್ನಿಂದಲೂ ಹೊರನಡೆಯಬೇಕೆಂದಿದ್ದೆ,'' ಎಂದಿದ್ದಾರೆ.