ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡ ಶುಭಾರಂಭ ಮಾಡಿದೆ. ಕೋಲ್ಕತ್ತಾದಲ್ಲಿ ಬುಧವಾರ ನಡೆದ ಮೊದಲ ಟಿ20 ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡವನ್ನು ಭಾರತ 7 ವಿಕೆಟ್ಗಳಿಂದ ಸೋಲಿಸಿತು. ಈ ಮೂಲಕ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ 1-0 ಮುನ್ನಡೆ ಸಾಧಿಸಿದೆ. ಮೊದಲ ಟಿ20 ಪಂದ್ಯಕ್ಕೆ ಮೂರು ಸ್ಪಿನ್ನರ್ಗಳೊಂದಿಗೆ ಟೀಮ್ ಇಂಡಿಯಾ ಕಣಕ್ಕಿಸಿತ್ತು. ವೇಗದ ಬೌಲರ್ ಮೊಹಮ್ಮದ್ ಶಮಿ ಗಾಯದಿಂದ ಚೇತರಿಸಿಕೊಂಡು ಆಡುವ ನಿರೀಕ್ಷೆಯಿತ್ತು. ಆದರೆ ಅವರನ್ನು ಆಡುವ ಹನ್ನೊಂದರ ಬಳಗದಿಂದ ಹೊರಗಿಡಲಾಗಿತ್ತು.
ಮೊಹಮ್ಮದ್ ಶಮಿ ಮೊದಲ ಟಿ20 ಪಂದ್ಯದಲ್ಲಿ ಆಡದೇ ಇರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಈ ಸ್ಟಾರ್ ವೇಗದ ಬೌಲರ್ ಅನ್ನು ಪ್ಲೇಯಿಂಗ್ ಹನ್ನೊಂದರಲ್ಲಿ ಏಕೆ ಆಯ್ಕೆ ಮಾಡಲಿಲ್ಲ ಎಂಬ ಪ್ರಶ್ನೆಗಳು ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಮೂಡಿದ್ದವು. ಇದೀಗ ಶಮಿ ಅವರನ್ನು ಕೈ ಬಿಟ್ಟಿದ್ದೇಕೆ ಎಂದು ನಾಯಕ ಸೂರ್ಯಕುಮಾರ್ ಯಾದವ್ ಪ್ರತಿಕ್ರಿಯಿಸಿದ್ದಾರೆ.

ಮೊದಲ ಟಿ20 ಪಂದ್ಯದ ಗೆಲುವಿನ ಬಳಿಕ ಮಾತನಾಡಿದ ಸೂರ್ಯಕುಮಾರ್ ಯಾದವ್, 'ತಂಡದಲ್ಲಿ ಅನುಭವಿ ಬೌಲರ್ ಇರುವುದು ಯಾವಾಗಲೂ ಒಳ್ಳೆಯದು. ನಾವು ನಮ್ಮ ಸಾಮರ್ಥ್ಯದ ಜೊತೆಗೆ ಆಡಲು ಬಯಸಿದ್ದೇವೆ. ದಕ್ಷಿಣ ಆಫ್ರಿಕಾದಲ್ಲೂ ನಾವು ಅದೇ ರೀತಿ ಮಾಡಿದ್ದೇವೆ. ಹೊಸ ಚೆಂಡಿನೊಂದಿಗೆ ಬೌಲಿಂಗ್ ಮಾಡುವ ಜವಾಬ್ದಾರಿಯನ್ನು ಹಾರ್ದಿಕ್ ಪಾಂಡ್ಯ ವಹಿಸಿಕೊಂಡರು. ಆದ್ದರಿಂದ ನಾನು ಹೆಚ್ಚುವರಿ ಸ್ಪಿನ್ನರ್ ಆಡಲು ನಿರ್ಧರಿಸಿದೆ. ಈ ಕಾರಣದಿಂದ ಮೊಹಮ್ಮದ್ ಶಮಿ ಅವರನ್ನು ಕೈ ಬಿಡಬೇಕಾಯಿತು ಎಂದಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ವರುಣ್ ಚಕ್ರವರ್ತಿ, ಅಕ್ಸರ್ ಪಟೇಲ್ ಮತ್ತು ರವಿ ಬಿಷ್ಣೋಯ್ ಉತ್ತಮ ಬೌಲಿಂಗ್ ನಿರ್ವಹಿಸಿದ್ದಾರೆ. ಏಕದಿನ ವಿಶ್ವಕಪ್ 2023ರ ಬಳಿಕ ಮೊಹಮ್ಮದ್ ಶಮಿ ಭಾರತದ ಪರ ಯಾವುದೇ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿಲ್ಲ. ಇಂಗ್ಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಅವರು ಆಡುತ್ತಾರೆ ಎಂದು ಭಾರತೀಯ ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ.

ವರುಣ್ ಚಕ್ರವರ್ತಿ ಅವರ ತಯಾರಿ ಚೆನ್ನಾಗಿದ್ದು, ಅರ್ಷದೀಪ್ ಹೆಚ್ಚುವರಿ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ನಾವು ಸ್ವಲ್ಪ ವಿಭಿನ್ನವಾಗಿ ಆಡಲು ಬಯಸಿದ್ದೇವೆ. ಬೌಲರ್ಗಳು ಯೋಜನೆ ರೂಪಿಸಿ ಮೈದಾನದಲ್ಲಿ ಚೆನ್ನಾಗಿ ಕಾರ್ಯರೂಪಕ್ಕೆ ತಂದರು. ನಾವು ಬ್ಯಾಟ್ ಮಾಡಿದ ರೀತಿಯೇ ಐಸಿಂಗ್ ಆನ್ ದಿ ಕೇಕ್ ಆಗಿತ್ತು. ದಕ್ಷಿಣ ಆಫ್ರಿಕಾದಲ್ಲಿ ನಾವು ಅದೇ ರೀತಿ ಮಾಡಿದ್ದೇವೆ ಎಂದು ಗೆಲುವಿನ ರಹಸ್ಯವನ್ನು ಸೂರ್ಯ ಬಿಚ್ಚಿಟ್ಟಿದ್ದಾರೆ.
ಟೀಮ್ ಇಂಡಿಯಾದ ಬೌಲರ್ಗಳು ಇಂಗ್ಲೆಂಡ್ ತಂಡವನ್ನು ಯಾವುದೇ ಹಂತದಲ್ಲೂ ಪುಟಿದೇಳಲು ಬಿಡಲಿಲ್ಲ.ಭಾರತದ ಪರ ಹಾರ್ದಿಕ್ ಪಾಂಡ್ಯ, ಅರ್ಷದೀಪ್ ಸಿಂಗ್ ಮತ್ತು ಅಕ್ಷರ್ ಪಟೇಲ್ ತಲಾ 2 ವಿಕೆಟ್ ಪಡೆದರೆ, ವರುಣ್ ಚಕ್ರವರ್ತಿ 3 ವಿಕೆಟ್ ಕಬಳಿಸಿ ಮಿಂಚಿದರು.