ಶುಕ್ರವಾರ (ನವೆಂಬರ್ 8)ದಿಂದ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ 4 ಪಂದ್ಯಗಳ ಟಿ20ಐ ಸರಣಿಯಲ್ಲಿ ಟಿ20 ಸ್ಪೆಷಲಿಸ್ಟ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಇತ್ತೀಚೆಗೆ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ವೈಟ್ವಾಶ್ ನಂತರ ಟೀಮ್ ಇಂಡಿಯಾ ಗೆಲುವಿನ ನಿರೀಕ್ಷೆಯಲ್ಲಿದೆ. ಸೂರ್ಯಕುಮಾರ್ ಯಾದವ್ ನೇತೃತ್ವದಲ್ಲಿ ಭಾರತ ಸತತ ಎರಡು ಟಿ20 ಸರಣಿ ಗೆದ್ದು ಬೀಗಿದೆ. ಇದೀಗ ದಕ್ಷಿಣ ಆಫ್ರಿಕಾ ವಿರುದ್ಧ ಹ್ಯಾಟ್ರಿಕ್ ಟಿ20 ಸರಣಿ ಗೆಲುವಿನ ಮೇಲೆ ಸೂಯಕುಮಾರ್ ಯಾದವ್ ಪಡೆ ಕಣ್ಣಿಟ್ಟಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ ಆರಂಭಕ್ಕೂ ಮುನ್ನ ಮಾತನಾಡಿರುವ ಸೂರ್ಯಕುಮಾರ್ ಯಾದವ್, ಟೆಸ್ಟ್ ಕ್ರಿಕೆಟ್ ಆಡುವ ಬಗ್ಗೆ ತಮ್ಮ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಮೂರು ಮಾದರಿ ಕ್ರಿಕೆಟ್ನಲ್ಲಿಯೂ ಭಾರತವನ್ನು ಪ್ರತಿನಿಧಿಸುತ್ತೇನೆ ಎಂದಿದ್ದಾರೆ.

ಸಮಯ ಬಂದಾಗ ನಾನು ಟೆಸ್ಟ್ಗೆ ಮರಳುತ್ತೇನೆ. ಎಲ್ಲಾ ದೇಶೀಯ ಪಂದ್ಯಾವಳಿಗಳಲ್ಲಿ ನಾನು ಆಡುತ್ತಿದ್ದೇನೆ. ನಾನು ಯಾವುದೇ ಪಂದ್ಯವನ್ನು ತಪ್ಪಿಸಿಕೊಳ್ಳುವುದಿಲ್ಲ. ಭಾರತ ಪರ ಟೆಸ್ಟ್ ಕ್ರಿಕೆಟ್ ಆಡುವ ಅವಕಾಶ ಸಿಗಬಹುದು ಎಂದು ಸೂರ್ಯಕುಮಾರ್ ಹೇಳಿದ್ದಾರೆ. ಸೂರ್ಯಕುಮಾರ್ ಟಿ20 ಕ್ರಿಕೆಟ್ನಲ್ಲಿ ತನ್ನ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅಲ್ಲದೆ, ಭಾರತ ಟಿ20 ತಂಡದ ನಾಯಕನಾಗಿಯೂ ಮಿಂಚುತ್ತಿದ್ದಾರೆ. ಇದೀಗ ಟೆಸ್ಟ್ ಕ್ರಿಕೆಟ್ ಆಡಲು ಸ್ಕೈ ರೆಡಿಯಾಗಿರುವುದು ಅವರ ಅಭಿಮಾನಿಗಳಿಗೆ ಸಂತಸ ತಂದಿದೆ.
2023ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತದ ಪರ ಸೂರ್ಯಕುಮಾರ್ ಯಾದವ್ ಏಕೈಕ ಟೆಸ್ಟ್ ಪಂದ್ಯವನ್ನು ಆಡಿದ್ದಾರೆ. ಈ ಪಂದ್ಯದಲ್ಲಿ ಅವರು ತಮ್ಮ ಏಕೈಕ ಇನ್ನಿಂಗ್ಸ್ನಲ್ಲಿ 8 ರನ್ ಗಳಿಸಿದರು. ಅದೇ ವರ್ಷದಲ್ಲಿ, ಅವರು ಡಬ್ಲ್ಯೂಟಿಸಿ ಫೈನಲ್ನಲ್ಲಿ ಭಾರತ ತಂಡಕ್ಕೆ ಮೀಸಲು ಆಟಗಾರರಾಗಿ ಆಯ್ಕೆಯಾಗಿದ್ದರು.
ಸೂರ್ಯಕುಮಾರ್ 84 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ ಅವರು 140 ಇನ್ನಿಂಗ್ಸ್ಗಳಲ್ಲಿ 42.84 ಸರಾಸರಿಯಲ್ಲಿ 5656 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 14 ಶತಕಗಳು ಮತ್ತು 29 ಅರ್ಧ ಶತಕಗಳು ಸೇರಿವೆ. ದೇಶೀಯ ಕ್ರಿಕೆಟ್ನಲ್ಲಿ 200 ರನ್ ಅವರ ಗರಿಷ್ಠ ಸ್ಕೋರ್ ಆಗಿದೆ. 2014-15ರ ರಣಜಿ ಟ್ರೋಫಿ ಆವೃತ್ತಿಯಲ್ಲಿ ಸೂರ್ಯಕುಮಾರ್ ಅಲ್ಪಾವಧಿಗೆ ಮುಂಬೈ ತಂಡದ ನಾಯಕರಾಗಿದ್ದರು. ಈ ಟೂರ್ನಿಯಲ್ಲಿ 10 ಪಂದ್ಯಗಳಲ್ಲಿ 690 ರನ್ ಗಳಿಸಿದ್ದರು. ಅವರು 2015-16 ರ ರಣಜಿ ಟ್ರೋಫಿ ಪ್ರಶಸ್ತಿಯನ್ನು ಗೆದ್ದ ಮುಂಬೈ ತಂಡದ ಭಾಗವಾಗಿದ್ದರು.