ಯಂಗ್ ಟೀಮ್ ಇಂಡಿಯಾ ಸೂರ್ಯಕುಮಾರ್ ನಾಯಕತ್ವದಲ್ಲಿ ಸತತ ಎರಡನೇ ಬಾರಿಗೆ ಟಿ20 ಸರಣಿ ಗೆದ್ದು ಬೀಗಿದೆ. ಅದುವೇ ಕ್ಲೀನ್ ಸ್ವೀಪ್ ಸಾಧನೆ ಮಾಡುವ ಮೂಲಕ ಟಿ20 ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ಸಂಚಲನ ಮೂಡಿಸಿದೆ. ಭಾರತ ಶನಿವಾರ ಬಾಂಗ್ಲಾದೇಶ ವಿರುದ್ಧದ ಮೂರನೇ ಹಾಗೂ ಕೊನೆ ಟಿ20 ಪಂದ್ಯವನ್ನು 133 ರನ್ಗಳಿಂದ ಗೆದ್ದು ಸರಣಿಯನ್ನು 3-0ಯಿಂದ ವಶಪಡಿಸಿಕೊಂಡಿದೆ.
ಟೀಮ್ ಇಂಡಿಯಾದ 3-0 ಸರಣಿ ಜಯದ ನಂತರ ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಸಂತಸಗೊಂಡಿದ್ದಾರೆ. ಈ ಸರಣಿ ಗೆಲುವಿಗೆ ತಂಡದಲ್ಲಿರುವ ಒಗ್ಗಟ್ಟಿನ ಪ್ರದರ್ಶನದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಜೊತೆಗೆ ಹೆಡ್ ಕೋಚ್ ಗೌತಮ್ ಗಂಭೀರ್ ಅವರು ಹೇಳಿದ ಮಾತುಗಳನ್ನು ಪ್ರಸ್ತಾಪಿಸಿದ್ದಾರೆ.

ಪಂದ್ಯದ ನಂತರ ಅದ್ಭುತ ಪ್ರತಿಕ್ರಿಯೆ ನೀಡಿರುವ ಸೂರ್ಯಕುಮಾರ್ ಯಾದವ್, 'ನಾವು ತಂಡವಾಗಿ ಸಾಕಷ್ಟು ಸಾಧನೆ ಮಾಡಿದ್ದೇವೆ. ನನ್ನ ತಂಡದಲ್ಲಿ ನಿಸ್ವಾರ್ಥ ಕ್ರಿಕೆಟಿಗರನ್ನು ಸೇರಿಸಿಕೊಳ್ಳಲು ಬಯಸುತ್ತೇನೆ. ಜೊತೆಗೆ ನಾವು ನಿಸ್ವಾರ್ಥ ತಂಡವಾಗಲು ಬಯಸುತ್ತೇವೆ. ಹಾರ್ದಿಕ್ ಪಾಂಡ್ಯ ಹೇಳಿದಂತೆ, ನಾವು ಮೈದಾನದಲ್ಲಿ ಮತ್ತು ಹೊರಗೆ ಪರಸ್ಪರರ ಪ್ರದರ್ಶನವನ್ನು ಆನಂದಿಸಲು ಸಾಧ್ಯವಾದಷ್ಟು ಸಮಯವನ್ನು ಕಳೆಯಲು ಬಯಸುತ್ತೇವೆ ಎಂದು ಹೇಳಿದ್ದಾರೆ.
ಸರಣಿಯ ಆರಂಭದಲ್ಲಿ ಗೌತಿ ಭಾಯ್ ಅವರು ಶ್ರೀಲಂಕಾಕ್ಕೆ ಹೋದಾಗ ತಂಡಕ್ಕಿಂತ ಯಾರೂ ದೊಡ್ಡವರಲ್ಲ ಎಂದು ಹೇಳಿದ್ದರು. 'ನೀವು 99 ಅಥವಾ 49 ಅಥವಾ ಯಾವುದೇ ಸ್ಕೋರ್ನಲ್ಲಿದ್ದರೆ, ನೀವು ತಂಡಕ್ಕಾಗಿ ನೆಲದಿಂದ ಬೌಂಡರಿ, ಸಿಕ್ಸರ್ ಹೊಡೆಯಬೇಕು ಎಂದುಕೊಂಡರೆ, ನೀವು ಅದನ್ನು ಹೊಡೆಯಬೇಕು' ಎಂದಿದ್ದರು. ಇದೀಗ ಅದನ್ನು ಸಂಜು ಸ್ಯಾಮ್ಸನ್ ಅವರು ಮಾಡಿ ತೋರಿಸಿದ್ದಾರೆ. ನಾನು ಅವರ ಪ್ರದರ್ಶನದಿಂದ ನಿಜವಾಗಿಯೂ ಸಂತೋಷವಾಗಿದ್ದೇನೆ ಎಂದು ಗೌತಮ್ ಗಂಭೀರ್ ಹೇಳಿದ್ದೇನು ಸೂರ್ಯ ನೆನೆದಿದ್ದಾರೆ.
ತಂಡದಲ್ಲಿರುವ ನಾವು ತುಂಬಾ ಫ್ಲೆಕ್ಸಿಬಲ್ ಆಗಿರಬೇಕು. ಎಲ್ಲರೂ ಕೊಡುಗೆ ನೀಡಬೇಕು. ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಆಟಗಾರರು ತೋರಿದ ರೀತಿ ಶ್ಲಾಘನೀಯ ಎಂದು ಸೂರ್ಯಕುಮಾರ್ ಯಾದವ್ ತಿಳಿಸಿದ್ದಾರೆ.
ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರಿಯ ಸ್ಟೇಡಿಯಂನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧ ಮೂರನೇ ಟಿ20 ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಸಂಜು ಸ್ಯಾಮ್ಸನ್ ಅವರ ಮೊದಲ ಟಿ20 ಅಂತಾರಾಷ್ಟ್ರೀಯ ಶತಕದ ನೆರವಿನಿಂದ ಭಾರತ 6 ವಿಕೆಟ್ಗೆ 297 ರನ್ ಗಳಿಸಿತು. ಇದು ಟಿ20 ಕ್ರಿಕೆಟ್ನಲ್ಲಿ ಅತ್ಯುತ್ತಮ ಸ್ಕೋರ್ ಆಗಿತ್ತು. ದೊಡ್ಡ ಗುರಿಯ ಒತ್ತಡದಲ್ಲಿ ಬಾಂಗ್ಲಾದೇಶ ತಂಡ ಕುಸಿದುಬಿತ್ತು. ಬಾಂಗ್ಲಾದೇಶ 7 ವಿಕೆಟ್ಗೆ 164 ರನ್ ಗಳಿಸಲಷ್ಟೇ ಶಕ್ತವಾಯಿತು.
ಅಕ್ಟೋಬರ್ 16 ರಿಂದ ತವರಿನಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತದ ಟೆಸ್ಟ್ ತಂಡ ಮತ್ತೊಂದು ಸರಣಿ ಗೆಲುವಿನ ನಿರೀಕ್ಷೆಯಲ್ಲಿದೆ. ಇತ್ತೀಚೆಗೆ ಬಾಂಗ್ಲಾದೇಶ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ಗೆದ್ದಿದೆ.