
ಆಗಸ್ಟ್ 15, ಸ್ವಾತಂತ್ರ್ಯ ದಿನಾಚರಣೆಯಂದು ಕ್ರಿಕೆಟ್ ಜಗತ್ತಿನಲ್ಲಿ ಹಲವಾರು ಪ್ರಮುಖ ವಿದ್ಯಮಾನಗಳು ನಡೆದಿವೆ. ಒಂದೆಡೆ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯದ ನಾಲ್ಕನೇ ದಿನದಾಟ ನಡೆಯುತ್ತಿದೆ, ಮತ್ತೊಂದೆಡೆ ಮುಂದುವರೆಯಲಿರುವ ಐಪಿಎಲ್ನಲ್ಲಿ ಭಾಗವಹಿಸಲು ಶ್ರೇಯಸ್ ಐಯ್ಯರ್ ಮತ್ತು ಟಿ. ನಟರಾಜನ್ಗೆ ಅನುಮತಿ ನೀಡಲಾಗಿದೆ. ಹೀಗೆ ಆಗಸ್ಟ್ 15ರಂದು ಕ್ರಿಕೆಟ್ ಜಗತ್ತಿನಲ್ಲಿ ನಡೆದ ಪ್ರಮುಖ ಘಟನೆಗಳ ಒಂದು ಕಿರುನೋಟ ಈ ಕೆಳಕಂಡಂತಿದೆ ನೋಡಿ.
* ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದಂದು ಕೆಎಲ್ ರಾಹುಲ್ ಬೌಂಡರಿ ಲೈನ್ ಬಳಿ ಕ್ಷೇತ್ರ ರಕ್ಷಣೆ ಮಾಡುತ್ತಿದ್ದ ಸಂದರ್ಭದಲ್ಲಿ ಪಂದ್ಯ ವೀಕ್ಷಿಸಲು ಬಂದಿದ್ದ ಕೆಲ ಕಿಡಿಗೇಡಿ ಪ್ರೇಕ್ಷಕರು ಕೆಎಲ್ ರಾಹುಲ್ ಮೇಲೆ ಶಾಂಪೇನ್ ಬಾಟಲ್ ಮುಚ್ಚಳಗಳನ್ನು ಬಿಸಾಡಿ ದುರ್ವರ್ತನೆ ತೋರಿದ್ದಾರೆ.
* ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿ ನಿರತರಾಗಿರುವ ವಿರಾಟ್ ಕೊಹ್ಲಿ ಬಳಗ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಇಂಗ್ಲೆಂಡ್ನಲ್ಲಿಯೇ ಆಚರಿಸಿದೆ. ಇಂಗ್ಲೆಂಡ್ ನೆಲದಲ್ಲಿ ಭಾರತದ ಧ್ವಜವನ್ನು ಹಾರಿಸುವುದರ ಮೂಲಕ ವಿರಾಟ್ ಕೊಹ್ಲಿ ಪಡೆ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದೆ.
* ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿಯೂ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಫಲತೆ ಮುಂದುವರಿದಿದೆ. ಮೊದಲನೇ ಇನ್ನಿಂಗ್ಸ್ನಲ್ಲಿ 42 ರನ್ ಬಾರಿಸಿದ್ದ ವಿರಾಟ್ ಕೊಹ್ಲಿ ಎರಡನೇ ಇನ್ನಿಂಗ್ಸ್ನಲ್ಲಿ 20 ರನ್ ಕಲೆಹಾಕಿ ಔಟ್ ಆಗಿದ್ದಾರೆ.
* ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ಕೊನೆಯ ದಿನ ಟೀಮ್ ಇಂಡಿಯಾ ತಂಡಕ್ಕೆ ಮೊಹಮ್ಮದ್ ಸಿರಾಜ್ ಆಸ್ತಿಯಾಗಲಿದ್ದಾರೆ ಎಂದು ಇಂಗ್ಲೆಂಡ್ನ ಮಾಜಿ ಕ್ರಿಕೆಟಿಗ ಮೈಕಲ್ ವಾನ್ ಅಭಿಪ್ರಾಯಪಟ್ಟಿದ್ದಾರೆ.
* ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನ ಟೀಮ್ ಇಂಡಿಯಾದ ಅಭಿಮಾನಿಯೋರ್ವ ಮೈದಾನಕ್ಕೆ ನುಗ್ಗಿ ನಾನೂ ಕೂಡ ಟೀಮ್ ಇಂಡಿಯಾ ಪರ ಆಡುತ್ತೇನೆ ಎಂದು ಪಟ್ಟು ಹಿಡಿದಿದ್ದ. ಥೇಟ್ ಟೀಮ್ ಇಂಡಿಯಾ ಟೆಸ್ಟ್ ಜೆರ್ಸಿಯನ್ನೇ ಧರಿಸಿಕೊಂಡು ಬಂದಿದ್ದ ಜಾರ್ವೋ ಎಂಬಾತ ನಾನು ಭಾರತದ ಪರ ಕ್ರಿಕೆಟ್ ಆಡುತ್ತೇನೆ, ನಾನೂ ಕೂಡ ಜರ್ಸಿ ಧರಿಸಿದ್ದೇನೆ ಎಂದು ಕೆಲ ಕಾಲ ಗೊಂದಲ ಸೃಷ್ಟಿಸಿದ್ದ ವಿಡಿಯೋ ವೈರಲ್ ಆಗಿದೆ.
* ಮುಂದುವರೆಯಲಿರುವ ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸಲು ಶ್ರೇಯಸ್ ಐಯ್ಯರ್ ಮತ್ತು ಟಿ ನಟರಾಜನ್ ಇಬ್ಬರಿಗೂ ಅನುಮತಿ ಸಿಕ್ಕಿದೆ.
* ಇತ್ತೀಚೆಗಷ್ಟೇ ಭಾರತ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದ ಉನ್ಮುಕ್ತ್ ಚಂದ್ ಯುಎಸ್ ಕ್ರಿಕೆಟ್ಗೆ ಸೇರ್ಪಡೆಯಾಗಿದ್ದಾರೆ. ಮೇಜರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ ಚೊಚ್ಚಲ ಪಂದ್ಯದಲ್ಲಿಯೇ ಉನ್ಮುಕ್ತ್ ಚಂದ್ 3 ಎಸೆತಗಳಿಗೆ ಯಾವುದೇ ರನ್ ಗಳಿಸದೆ ಡಕೌಟ್ ಹಾಕುವುದರ ಮೂಲಕ ಕೆಟ್ಟ ಆರಂಭ ಪಡೆದುಕೊಂಡಿದ್ದಾರೆ.