
ಆಗಸ್ಟ್ 21, ಶನಿವಾರದಂದು ಕ್ರಿಕೆಟ್ ಜಗತ್ತಿನಲ್ಲಿ ಹಲವಾರು ಪ್ರಮುಖ ವಿದ್ಯಮಾನಗಳು ಜರುಗಿವೆ. ಒಂದೆಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು 3 ಹೊಸ ಆಟಗಾರರನ್ನು ತನ್ನ ತಂಡಕ್ಕೆ ಸೇರಿಸಿಕೊಂಡಿದೆ. ಮತ್ತೊಂದೆಡೆ ಹೈದರಾಬಾದ್ ನಗರದಲ್ಲಿ ಮೊಹಮ್ಮದ್ ಸಿರಾಜ್ ಕಟೌಟ್ ನಿಲ್ಲಿಸಲಾಗಿದ್ದು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಹೀಗೆ ಆಗಸ್ಟ್ 21ರಂದು ಕ್ರಿಕೆಟ್ ಜಗತ್ತಿನಲ್ಲಿ ನಡೆದಿರುವ ಹಲವಾರು ಪ್ರಮುಖ ಘಟನೆಗಳ ಒಂದು ಕಿರುನೋಟ ಇಲ್ಲಿದೆ ನೋಡಿ..
* ಮುಂದುವರಿಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರಾದ ಆ್ಯಡಮ್ ಜಂಪಾ, ಕೇನ್ ರಿಚರ್ಡ್ಸನ್, ಡೇನಿಯಲ್ ಸ್ಯಾಮ್ಸ್ ಸೇರಿದಂತೆ ಒಟ್ಟು ಐವರು ಆಟಗಾರರು ಅಲಭ್ಯರಾಗಲಿದ್ದಾರೆ.
* ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಐವರು ಆಟಗಾರರು ಮುಂದುವರಿಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಅಲಭ್ಯರಾದ ಕಾರಣ ಶನಿವಾರದಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೂವರು ಹೊಸ ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡಿರುವ ಮಾಹಿತಿಯನ್ನು ಹಂಚಿಕೊಂಡಿದೆ. ವನಿಂದು ಹಸರಂಗ, ದುಷ್ಮಂತ ಚಮೀರ ಮತ್ತು ಟಿಮ್ ಡೇವಿಡ್ ಹೊಸದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸೇರ್ಪಡೆಯಾಗಿರುವ ಆಟಗಾರರು.
* ಇತ್ತೀಚೆಗಷ್ಟೇ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಒಟ್ಟು 8 ವಿಕೆಟ್ ಪಡೆದು ಮಿಂಚಿದ ಮೊಹಮ್ಮದ್ ಸಿರಾಜ್ ಅಭಿಮಾನಿಗಳು ಹೈದರಾಬಾದ್ ನಗರದಲ್ಲಿ ಮೊಹಮ್ಮದ್ ಸಿರಾಜ್ ತುಟಿ ಮೇಲೆ ಬೆರಳಿಟ್ಟು ಸಂಭ್ರಮಾಚರಣೆ ಮಾಡುತ್ತಿರುವ ಚಿತ್ರವೊಂದರ ಕಟೌಟ್ ನಿಲ್ಲಿಸುವ ಮೂಲಕ ಸಂಭ್ರಮಾಚರಣೆ ಆಚರಿಸಿದರು.
* ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೆಲ ಆಟಗಾರರು ಮುಂದುವರಿಯಲಿರುವ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಆಗಸ್ಟ್ 21 ರಂದು ( ಇಂದು ) ಬೆಂಗಳೂರಿಗೆ ಆಗಮಿಸಲಿದ್ದು, ಆಗಸ್ಟ್ 29 ರಂದು ಯುಎಇ ಗೆ ಪಯಣ ಬೆಳೆಸಲಿದ್ದಾರೆ.
* ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯ ಕೋಚಿಂಗ್ ಕೋರ್ಸ್ ಮುಗಿಸಿರುವ ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಐಪಿಎಲ್ ತಂಡವೊಂದರ ಕೋಚ್ ಆಗಿ ಕೆಲಸ ನಿರ್ವಹಿಸಬೇಕು ಎಂಬ ಆಸೆಯನ್ನು ವ್ಯಕ್ತಪಡಿಸಿದ್ದಾರೆ.
* ಭಾರತದ ಮಾಜಿ ಕ್ರಿಕೆಟಿಗ ಹಾಗೂ ಪ್ರಸ್ತುತ ದೆಹಲಿ ಪೂರ್ವ ಕ್ಷೇತ್ರದ ಲೋಕಸಭಾ ಸದಸ್ಯರೂ ಆಗಿರುವ ಗೌತಮ್ ಗಂಭೀರ್ ಜನ್ ರಸೋಯಿ ಯೋಜನೆಯಡಿ ಒಂದು ರೂಪಾಯಿಗೆ ಊಟ ನೀಡುತ್ತಿದ್ದಾರೆ. ಹೌದು ಜನ್ ರಸೋಯಿ ಯೋಜನೆಯಡಿ ಕ್ಯಾಂಟೀನ್ ನಿರ್ಮಿಸಿ ಬಡ ಜನರಿಗೆ ಕೇವಲ ಒಂದು ರೂಪಾಯಿಯಲ್ಲಿ ಹೊಟ್ಟೆ ತುಂಬಾ ಊಟ ಹಾಕುವ ಮಹತ್ಕಾರ್ಯವನ್ನು ಗೌತಮ್ ಗಂಭೀರ್ ಮಾಡುತ್ತಿದ್ದಾರೆ. ಈ ಹಿಂದೆ ಗಾಂಧಿನಗರ ಮತ್ತು ಅಶೋಕ್ ನಗರಗಳಲ್ಲಿ ಶಾಖೆಗಳನ್ನು ತೆರೆದಿದ್ದು ಗೌತಮ್ ಗಂಭೀರ್ ಇದೀಗ ಪತ್ಪರ್ಗಂಜ್ ಎಂಬಲ್ಲಿ ಜನ್ ರಸೋಯಿ ಕ್ಯಾಂಟೀನ್ ಮೂರನೇ ಶಾಖೆಯನ್ನು ತೆರೆದಿದ್ದಾರೆ.
* ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದ ವೇಳೆ ಜಸ್ ಪ್ರೀತ್ ಬುಮ್ರಾರನ್ನು ಕೆಣಕಿ ಇಂಗ್ಲೆಂಡ್ ಆಟಗಾರರು ತಪ್ಪು ಮಾಡಿದರು ಎಂದು ಮಾಂಟಿ ಪನೇಸರ್ ಹೇಳಿದ್ದಾರೆ. ಜಸ್ ಪ್ರಿತ್ ಬುಮ್ರಾರನ್ನು ಕೆಣಕದೆ ಇದ್ದಿದ್ದರೆ ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡುವ ವೇಳೆ ವಿರಾಟ್ ಕೊಹ್ಲಿ ಅಷ್ಟರಮಟ್ಟಿಗೆ ರೋಷಾವೇಷವನ್ನು ತೋರಿಸುತ್ತಿರಲಿಲ್ಲ ಎಂದು ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಮಾಂಟಿ ಪನೇಸರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.