
ಡಿಸೆಂಬರ್ 14ರ ಮಂಗಳವಾರದಂದು ಕ್ರಿಕೆಟ್ ಜಗತ್ತಿನಲ್ಲಿ ಹಲವಾರು ವಿದ್ಯಮಾನಗಳು ಜರುಗಿದ್ದು, ಒಂದೆಡೆ ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವೆ ನಡೆದ ದ್ವಿತೀಯ ಟಿ ಟ್ವೆಂಟಿ ಪಂದ್ಯದಲ್ಲಿ ವೆಸ್ಟ್ಇಂಡೀಸ್ ವಿರುದ್ಧ ಪಾಕಿಸ್ತಾನ ಜಯ ಸಾಧಿಸಿದ್ದರೆ, ಮತ್ತೊಂದೆಡೆ ಇತ್ತೀಚೆಗಷ್ಟೇ ಭಾರತ ಏಕದಿನ ತಂಡದ ನಾಯಕತ್ವವನ್ನೂ ಕಳೆದುಕೊಂಡಿರುವ ವಿರಾಟ್ ಕೊಹ್ಲಿ ಮುಂಬರಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿಯಲು ನಿರ್ಧಾರವನ್ನು ಕೈಗೊಂಡಿದ್ದಾರೆ. ಹೀಗೆ ಡಿಸೆಂಬರ್ 14ರ ಮಂಗಳವಾರದಂದು ಕ್ರಿಕೆಟ್ ಜಗತ್ತಿನಲ್ಲಿ ನಡೆದಿರುವ ವಿದ್ಯಮಾನಗಳ ವಿವರ ಈ ಕೆಳಕಂಡಂತಿದೆ.
* ಟೀಮ್ ಇಂಡಿಯಾದಲ್ಲಿ ಉಂಟಾಗಿರುವ ನಾಯಕತ್ವದ ಗೊಂದಲದ ಕುರಿತು ಬಿಸಿಸಿಐನ ಅಧಿಕಾರಿಯೊಬ್ಬರು ಮಾತನಾಡಿದ್ದು ದಕ್ಷಿಣ ಆಫ್ರಿಕಾ ಪ್ರವಾಸ ಮುಗಿದ ನಂತರ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇಬ್ಬರನ್ನು ಕೂರಿಸಿ ಚರ್ಚೆ ನಡೆಸುವುದಾಗಿ ಹೇಳಿಕೆ ನೀಡಿದ್ದಾರೆ. ಹಾಗೂ ವಿರಾಟ್ ಕೊಹ್ಲಿಯನ್ನು ಭಾರತ ಏಕದಿನ ತಂಡದ ನಾಯಕತ್ವದಿಂದ ತೆಗೆದು ಹಾಕಿದ್ದು ತಂಡದ ಸ್ವಂತ ನಿರ್ಧಾರವಾಗಿತ್ತು ಮತ್ತು ಇದಕ್ಕೆ ವಿರಾಟ್ ಕೊಹ್ಲಿ ಸ್ವಾರ್ಥಿಯಾಗಿ ನಡೆದುಕೊಳ್ಳಬಾರದಿತ್ತು ಎಂದಿದ್ದಾರೆ. ಅಷ್ಟೇ ಅಲ್ಲದೆ ಸದ್ಯ ನಡೆಯುತ್ತಿರುವ ಬೆಳವಣಿಗೆಗಳು ತಂಡಕ್ಕೆ ಮಾರಕವಾಗಿದ್ದು ದಕ್ಷಿಣ ಆಫ್ರಿಕಾ ಸರಣಿ ಮುಗಿದ ನಂತರ ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಆ ಬಿಸಿಸಿಐ ಅಧಿಕಾರಿ ಭರವಸೆ ನೀಡಿದ್ದಾರೆ. ಈ ಮೂಲಕ ಬಿಸಿಸಿಐ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಜೊತೆ ಚರ್ಚೆ ನಡೆಸಲಿದ್ದು ಸದ್ಯಕ್ಕೆ ಉಂಟಾಗಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಯತ್ನ ಮಾಡಲಿದೆ. ಈ ಮೂಲಕ ಸದ್ಯ ಹುಟ್ಟಿಕೊಂಡಿರುವ ಸಮಸ್ಯೆಗಳಿಗೆ ಹೊಸ ಪರಿಹಾರವಂತೂ ಲಭಿಸಲಿದ್ದು ಪುನಃ ನಾಯಕತ್ವ ಬದಲಾವಣೆಯೇನಾದರೂ ನಡೆಯಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
* ಡಿಸೆಂಬರ್ 13ರಂದು ನಡೆದ ಚೊಚ್ಚಲ ಟಿ ಟ್ವೆಂಟಿ ಪಂದ್ಯದಲ್ಲಿ ಪಾಕಿಸ್ತಾನ ವೆಸ್ಟ್ ಇಂಡೀಸ್ ವಿರುದ್ಧ ಬರೋಬ್ಬರಿ 63 ರನ್ಗಳ ಜಯವನ್ನು ಸಾಧಿಸುವುದರ ಮೂಲಕ ಸರಣಿಯಲ್ಲಿ 1-0 ಅಂತರದ ಮುನ್ನಡೆಯನ್ನು ಸಾಧಿಸಿತ್ತು. ಇದೀಗ ಮಾರನೇ ದಿನವೇ ಇತ್ತಂಡಗಳ ನಡುವೆ ದ್ವಿತೀಯ ಟಿ ಟ್ವೆಂಟಿ ಪಂದ್ಯ ನಡೆದಿದ್ದು, ಈ ಪಂದ್ಯದಲ್ಲಿಯೂ ಕೂಡ ಕೆರಿಬಿಯನ್ನರಿಗೆ ಪಾಕಿಸ್ತಾನ ಸೋಲಿನ ರುಚಿಯನ್ನು ತೋರಿಸಿದೆ. ಪಾಕಿಸ್ತಾನ 9 ರನ್ಗಳ ರೋಚಕ ಜಯವನ್ನು ಸಾಧಿಸಿ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ 2-0 ಅಂತರದ ಮುನ್ನಡೆ ಜತೆಗೆ ಸರಣಿಯನ್ನು ವಶಪಡಿಸಿಕೊಂಡಿದೆ.
* ಇತ್ತೀಚೆಗಷ್ಟೇ ಉನ್ನತ ಮಟ್ಟದ ಇಂಗ್ಲಿಷ್ ಶಿಕ್ಷಣ ನೀಡುವ ಸಂಸ್ಥೆಯೊಂದರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಪಿಲ್ ದೇವ್ ತಮಗೆ ನಾಯಕನ ಪಟ್ಟವನ್ನು ನೀಡಿ ನಿರ್ಮಿಸಲಾಗಿರುವ 83 ಚಿತ್ರದ ಟ್ರೇಲರ್ ಕುರಿತಾಗಿ ಮಾತನಾಡಿದರು. "ಚಿತ್ರದ ಟ್ರೈಲರ್ ವೀಕ್ಷಿಸಿದ ನಂತರ ನಾನು ತುಂಬ ಭಾವುಕನಾದೆ, ಆದರೆ ಡಿಸೆಂಬರ್ 24ರಂದು ಚಿತ್ರ ಬಿಡುಗಡೆಯಾಗಲಿದ್ದು ಅಂತಿಮವಾಗಿ ಯಾವ ರೀತಿ ಮೂಡಿಬಂದ ಇರಲಿದೆ ಎಂಬುದು ತಿಳಿಯಲಿದೆ. ಚಿತ್ರ ಬಿಡುಗಡೆಯಾಗುವವರೆಗೂ ನಾನು ಏನನ್ನೂ ಹೇಳಲು ಆಗುವುದಿಲ್ಲ" ಎಂದು ಕಪಿಲ್ ದೇವ್ ಹೇಳಿದರು.
* ಪ್ರತಿಷ್ಠಿತ ಆ್ಯಷಸ್ ಟೆಸ್ಟ್ ಸರಣಿಯಲ್ಲಿ ಈಗಾಗಲೇ 1-0ಯಿಂದ ಮುನ್ನಡೆ ಸಾಧಿಸಿರುವ ಆತಿಥೇಯ ಆಸ್ಟ್ರೇಲಿಯಾ, ಎರಡನೇ ಟೆಸ್ಟ್ ಪಂದ್ಯದಲ್ಲೂ ಗೆಲುವಿನ ವಿಶ್ವಾಸದಲ್ಲಿದೆ. ಇದಕ್ಕೆ ಸಾಕ್ಷಿಯೆಂಬಂತೆ ಆಸ್ಟ್ರೇಲಿಯಾದ ಅನುಭವಿ ಸ್ಪಿನ್ನರ್ ನೇಥನ್ ಲಿಯಾನ್ ಸರಣಿಯನ್ನ 5-0 ಅಂತರದಲ್ಲಿ ಗೆಲ್ಲುವ ನಂಬಿಕೆಯಲ್ಲಿದ್ದೇವೆ ಎಂದು ಹೇಳಿದ್ದಾರೆ.
* ಋತುರಾಜ್ ಗಾಯಕ್ವಾಡ್ ಕಳೆದ ಆವೃತ್ತಿಯ ಐಪಿಎಲ್ನಲ್ಲಿ ಅಮೋಘ ಪ್ರದರ್ಶನ ನೀಡುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡ ಟ್ರೋಫಿ ಗೆಲ್ಲಲು ಪ್ರಮುಖ ಕಾರಣವಾಗಿದ್ದರು. ಈ ಭರ್ಜರಿ ಫಾರ್ಮ್ಅನ್ನು ಋತುರಾಜ್ ಗಾಯಕ್ವಾಡ್ ದೇಶೀಯ ಕ್ರಿಕೆಟ್ನಲ್ಲಿಯೂ ಮುಂದುವರಿಸಿದ್ದಾರೆ. ಶತಕದ ಮೇಲೆ ಶತಕ ಸಿಡಿಸುತ್ತಿರುವ ಋತುರಾಜ್ ಈ ಬಾರಿಯ ವಿಜಯ್ ಹಜಾರೆ ಟೂರ್ನಿಯಲ್ಲಿ ಆಡಿದ ಐದು ಪಂದ್ಯಗಳ ಪೈಕಿ ನಾಲ್ಕರಲ್ಲಿ ಶತಕವನ್ನು ಸಿಡಿಸಿ ಮಿಂಚುಹರಿಸಿದ್ದಾರೆ.ಇದಕ್ಕೂ ಮುನ್ನ ಈ ಸಾಧನೆಯನ್ನು ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಪೃಥ್ವಿ ಶಾ ಸಾಧಿಸಿದ್ದರು. ಇದೀಗ ಋತುರಾಜ್ ಗಾಯಕ್ವಾಡ್ ಈ ಸಾಧನೆಯನ್ನು ಸರಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. 2009-19ರ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ಮೊದಲ ಬಾರಿಗೆ ಈ ಸಾಧನೆ ಮಾಡಿದ್ದರು. ನಂತರ ಕಳೆದ ವರ್ಷದ ಆವೃತ್ತಿಯಲ್ಲಿ ಕರ್ನಾಟಕದ ಆಟಗಾರ ದೇವದತ್ ಪಡಿಕ್ಕಲ್ ಹಾಗೂ ಮುಂಬೈ ಆಟಗಾರ ಪೃಥ್ವಿ ಶಾ ಈ ಸಾಧನೆ ಮಾಡುವಲ್ಲಿ ಯಶಸ್ವಿಯಾಗಿದ್ದರು.