
ಡಿಸೆಂಬರ್ 15ರ ಬುಧವಾರದಂದು ಕ್ರಿಕೆಟ್ ಜಗತ್ತಿನಲ್ಲಿ ಹಲವು ವಿದ್ಯಮಾನಗಳು ಜರುಗಿದ್ದು, ಒಂದೆಡೆ ವಿರಾಟ್ ಕೊಹ್ಲಿ ಮಾಧ್ಯಮ ಗೋಷ್ಠಿಯೊಂದನ್ನು ನಡೆಸಿ ತನ್ನ ಕುರಿತು ಎದ್ದಿದ್ದ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದರೆ, ಮತ್ತೊಂದೆಡೆ ವಿರಾಟ್ ಕೊಹ್ಲಿ ಮಾಧ್ಯಮಗೋಷ್ಠಿ ನಂತರ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಬಿಸಿಸಿಐ ವಿರುದ್ಧ ಕಿಡಿಕಾರಿದ್ದಾರೆ. ಹೀಗೆ ಡಿಸೆಂಬರ್ 15ರಂದು ನಡೆದ ಕ್ರಿಕೆಟ್ ವಿದ್ಯಮಾನಗಳ ರೌಂಡ್ ಅಪ್ ಈ ಕೆಳಕಂಡಂತಿದೆ..
* ಟೀಮ್ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿಯಲಿದ್ದಾರೆ ಎಂಬ ಸುದ್ದಿ ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ಗೊಂದಲಕ್ಕೆ ಕಾರಣವಾಗಿತ್ತು. ಟೀಮ್ ಇಂಡಿಯಾದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಅನುಮಾನಕ್ಕೆ ಇದು ಎಡೆ ಮಾಡಿಕೊಟ್ಟಿತ್ತು. ಈ ಎಲ್ಲಾ ಅನುಮಾನಗಳಿಗೆ ಸ್ವತಃ ವಿರಾಟ್ ಕೊಹ್ಲಿಯೇ ಉತ್ತರಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ಹಿಂದಕ್ಕುಳಿಯುವ ಬಗೆಗಿನ ವರದಿಯ ಬಗ್ಗೆಯೂ ವಿರಾಟ್ ಕೊಹ್ಲಿ ಸ್ಪಷ್ಟವಾಗಿ ಉತ್ತರವನ್ನು ನೀಡಿದ್ದಾರೆ. ತಾನು ಮತ್ತು ರೋಹಿತ್ ಶರ್ಮಾ ಚೆನ್ನಾಗಿಯೇ ಇದ್ದೇವೆ ಇಬ್ಬರ ನಡುವೆ ಯಾವುದೇ ಮನಸ್ತಾಪಗಳಿಲ್ಲ ಎಂದು ಸ್ಪಷ್ಟನೆಯನ್ನೂ ನೀಡಿದ ವಿರಾಟ್ ಕೊಹ್ಲಿ ತಾನು ಭಾರತ ಟಿ ಟ್ವೆಂಟಿ ತಂಡದ ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರವನ್ನು ಕೈಗೊಂಡಾಗ ಬಿಸಿಸಿಐ ಯಾವುದೇ ಮಾತನ್ನೂ ಆಡದೆ ತನ್ನ ನಿರ್ಧಾರವನ್ನು ಸ್ವೀಕರಿಸಿತು ಎಂಬ ಹೇಳಿಕೆಯನ್ನು ನೀಡಿದರು.
* ಟೆಸ್ಟ್ ಕ್ರಿಕೆಟ್ ಮಾದರಿಗೆ ನಿವೃತ್ತಿ ಘೋಷಿಸಲಿದ್ದಾರೆ ಎಂದು ಯಥೇಚ್ಚವಾಗಿ ಹರಿದಾಡುತ್ತಿರುವ ಸುದ್ದಿಯ ಕುರಿತು ಸ್ವತಃ ರವೀಂದ್ರ ಜಡೇಜಾ ಅವರೇ ತಮ್ಮ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಪ್ರತಿಕ್ರಿಯಿಸಿದ್ದು "ನಕಲಿ ಸ್ನೇಹಿತರು ವದಂತಿಗಳಲ್ಲಿ ನಂಬಿಕೆ ಇಡುತ್ತಾರೆ ಆದರೆ ನಿಜವಾದ ಸ್ನೇಹಿತರು ನಿಮ್ಮಲ್ಲಿ ನಂಬಿಕೆಯನ್ನು ಇಡುತ್ತಾರೆ" ಎಂಬ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಈ ಮೂಲಕ ವದಂತಿಗಳಿಗೆ ತಲೆಕೆಡಿಸಿಕೊಳ್ಳದೇ ಸತ್ಯಾಂಶವನ್ನು ತಿಳಿಯಿರಿ ಎಂಬರ್ಥದಲ್ಲಿ ರವೀಂದ್ರ ಜಡೇಜಾ ಟ್ವೀಟ್ ಮಾಡಿದ್ದಾರೆ. ನಿಜವಾದ ಸ್ನೇಹಿತರಾರು ವದಂತಿಗಳಿಗೆ ಕಿವಿಗೊಡುವುದಿಲ್ಲ ಎಂದು ಬರೆದುಕೊಂಡಿರುವ ರವೀಂದ್ರ ಜಡೇಜಾ ತಾವು ಟೆಸ್ಟ್ ಜೆರ್ಸಿ ತೊಟ್ಟಿರುವ ಫೋಟೋವೊಂದನ್ನು ನಂತರದ ಟ್ವೀಟ್ನಲ್ಲಿ ಹಂಚಿಕೊಂಡಿದ್ದು ಇನ್ನೂ ದೊಡ್ಡ ಅಂತರದ ಹಾದಿ ಮುಂದಿದೆ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ತಾನು ಟೆಸ್ಟ್ ಕ್ರಿಕೆಟ್ ಮಾದರಿಯಲ್ಲಿ ಇನ್ನೂ ಹೆಚ್ಚಿನ ಸಮಯದವರೆಗೆ ಕಣಕ್ಕಿಳಿಯಲಿದ್ದೇನೆ ಎಂಬುದನ್ನು ರವೀಂದ್ರ ಜಡೇಜಾ ಪರೋಕ್ಷವಾಗಿ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಈ ಮೂಲಕ ಜಡೇಜಾ ಟೆಸ್ಟ್ ಕ್ರಿಕೆಟ್ ಮಾದರಿಗೆ ನಿವೃತ್ತಿ ಘೋಷಿಸಲಿದ್ದಾರೆ ಎಂಬ ಎಲ್ಲಾ ವದಂತಿಗಳಗೆ ರವೀಂದ್ರ ಜಡೇಜಾ ಅಂತ್ಯ ಹಾಡಿದ್ದಾರೆ.
* 2021-22ನೇ ಸಾಲಿನ ಬಿಗ್ ಬ್ಯಾಶ್ ಲೀಗ್ ಟೂರ್ನಿಯ 13ನೇ ಪಂದ್ಯದಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ತಂಡದ ಪರ ಕಣಕ್ಕಿಳಿದ ಗ್ಲೆನ್ ಮ್ಯಾಕ್ಸ್ವೆಲ್ ಅಬ್ಬರದ ಶತಕ ಸಿಡಿಸಿ ಮಿಂಚಿದ್ದಾರೆ. ಹೌದು, ಈ ಬಾರಿಯ ಬಿಗ್ ಬ್ಯಾಶ್ ಲೀಗ್ನ 13ನೇ ಪಂದ್ಯ ಇಂದು ಮೆಲ್ಬೋರ್ನ್ನ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ಅಬ್ಬರದ ಶತಕ ಬಾರಿಸಿ ಮಿಂಚಿದರು. 2.2ನೇ ಓವರ್ನಲ್ಲಿ ನಾಲ್ಕನೇ ಕ್ರಮಾಂಕದ ಬ್ಯಾಟ್ಸ್ಮನ್ ಆಗಿ ಕಣಕ್ಕಿಳಿದ ಗ್ಲೆನ್ ಮ್ಯಾಕ್ಸ್ವೆಲ್ 57 ಎಸೆತಗಳಲ್ಲಿ 103 ರನ್ ಬಾರಿಸಿ ಒತ್ತಡದ ನಡುವೆಯೇ ಮೆಲ್ಬೋರ್ನ್ ಸ್ಟಾರ್ಸ್ ತಂಡಕ್ಕೆ ಆಸರೆಯಾದರು.
* ಇಂದು ಮಾದ್ಯಮಗೋಷ್ಠಿಯಲ್ಲಿ ವಿರಾಟ್ ಕೊಹ್ಲಿ ಹೇಳಿಕೆಗಳ ನಂತರ ಪ್ರತಿಕ್ರಿಯಿಸಿರುವ ಅಮಿತ್ ಮಿಶ್ರಾ ಆಟಗಾರರಿಗೆ ಮಾಹಿತಿ ನೀಡಬೇಕಾದದ್ದು ಬಿಸಿಸಿಐನ ಕರ್ತವ್ಯ ಮತ್ತು ಆ ಮಾಹಿತಿಯನ್ನು ಪಡೆದುಕೊಳ್ಳುವುದು ಆ ಆಟಗಾರನ ಹಕ್ಕು ಎಂದಿದ್ದಾರೆ. ಯಾವುದೇ ಆಟಗಾರನನ್ನಾಗಲಿ ಅಥವಾ ನಾಯಕನನ್ನಾಗಲಿ ತಂಡದಿಂದ ಅಥವಾ ನಾಯಕನ ಸ್ಥಾನದಿಂದ ಬಿಸಿಸಿಐ ತೆಗೆದುಹಾಕಲು ತೀರ್ಮಾನಿಸಿದರೆ ಆ ಆಟಗಾರನಿಗೆ ಕೆಲ ದಿನಗಳ ಮುಂಚೆಯೇ ಮಾಹಿತಿಯನ್ನು ನೀಡಬೇಕು, ಅದನ್ನು ಬಿಟ್ಟು ಕೆಲ ನಿಮಿಷಗಳು ಬಾಕಿ ಇರುವಾಗ ಬಿಸಿಸಿಐ ಆ ಆಟಗಾರನಿಗೆ ತಮ್ಮ ನಿರ್ಧಾರವನ್ನು ತಿಳಿಸುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ. ಹಾಗೂ ಇನ್ನೂ ಮುಂದುವರೆದು ಮಾತನಾಡಿರುವ ಅಮಿತ್ ಮಿಶ್ರಾ ಬಿಸಿಸಿಐ ಮುಂಚಿತವಾಗಿ ಆ ಆಟಗಾರನಿಗೆ ವಿಷಯವನ್ನು ತಿಳಿಸಿದರೆ ತಾನು ಎಲ್ಲಿ ತಪ್ಪು ಮಾಡಿದ್ದಾನೆ ಮತ್ತು ಸರಿಪಡಿಸಿಕೊಳ್ಳಬೇಕಾದ ಅಂಶಗಳೇನು ಎಂಬುದನ್ನು ತಿಳಿದುಕೊಂಡು ಸರಿ ಹಾದಿಗೆ ಬರಲಿದ್ದಾನೆ ಎಂದು ಅಭಿಪ್ರಾಯಪಟ್ಟರು.