
ಡಿಸೆಂಬರ್ 16ರ ಗುರುವಾರದಂದು ಕ್ರಿಕೆಟ್ ಜಗತ್ತಿನಲ್ಲಿ ಹಲವು ವಿದ್ಯಮಾನಗಳು ಜರುಗಿದ್ದು ಒಂದೆಡೆ ವೆಸ್ಟ್ ಇಂಡೀಸ್ ಮತ್ತು ಪಾಕಿಸ್ತಾನ ತಂಡಗಳ ನಡುವೆ ನಡೆಯುತ್ತಿದ್ದ ಟಿ ಟ್ವೆಂಟಿ ಸರಣಿಯಲ್ಲಿ ಪಾಕಿಸ್ತಾನ ಎದುರಾಳಿ ವೆಸ್ಟ್ ಇಂಡೀಸ್ ತಂಡಕ್ಕೆ ವೈಟ್ ವಾಷ್ ಬಳಿದಿದ್ದು, ಮತ್ತೊಂದೆಡೆ ದಕ್ಷಿಣ ಆಫ್ರಿಕಾ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿ ಮತ್ತು 3 ಪಂದ್ಯಗಳ ಏಕದಿನ ಸರಣಿಯನ್ನು ಆಡಲು ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡು ಜೋಹಾನ್ಸ್ ಬರ್ಗ್ ತಲುಪಿದೆ. ಹೀಗೆ ಡಿಸೆಂಬರ್ 16ರ ಕ್ರಿಕೆಟ್ ಸುದ್ದಿಗಳ ರೌಂಡ್ಅಪ್ ಈ ಕೆಳಕಂಡಂತಿದೆ.
* ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯ ಅಂತಿಮ ಪಂದ್ಯ ಇಂದು ಕರಾಚಿಯ ನ್ಯಾಶನಲ್ ಸ್ಟೇಡಿಯಂ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಕಳೆದೆರಡು ಪಂದ್ಯಗಳಲ್ಲಿ ಪಾಕಿಸ್ತಾನದ ವಿರುದ್ಧ ಮಂಕಾಗಿದ್ದ ವೆಸ್ಟ್ ಇಂಡೀಸ್ ಈ ಪಂದ್ಯದಲ್ಲಿ ಅಬ್ಬರಿಸಿತು. 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಬರೋಬ್ಬರಿ 207 ರನ್ ಗಳಿಸಿದ ವೆಸ್ಟ್ ಇಂಡೀಸ್ ಎದುರಾಳಿ ಪಾಕಿಸ್ತಾನ ತಂಡಕ್ಕೆ ಗೆಲ್ಲಲು 208 ರನ್ಗಳ ಬೃಹತ್ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ 18.5 ಓವರ್ಗಳಲ್ಲಿಯೇ 3 ವಿಕೆಟ್ ನಷ್ಟಕ್ಕೆ 208 ರನ್ ಗಳಿಸುವುದರ ಮೂಲಕ ವೆಸ್ಟ್ ಇಂಡೀಸ್ ತಂಡ ನೀಡಿದ ಬೃಹತ್ ಮೊತ್ತವನ್ನು 1 ಓವರ್ ಬಾಕಿ ಇರುವಾಗಲೇ ಮುಟ್ಟಿ ಭರ್ಜರಿ ಜಯ ಸಾಧಿಸಿ ವೆಸ್ಟ್ ಇಂಢೀಸ್ ವಿರುದ್ಧ ನಡೆದ ಈ ೩ ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ವೈಟ್ ವಾಷ್ ಸಾಧನೆ ಮಾಡಿದೆ.
* ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ರಾಹುಲ್ ದ್ರಾವಿಡ್ ನೇತೃತ್ವದಲ್ಲಿ ಟೀಮ್ ಇಂಡಿಯಾ ಟೆಸ್ಟ್ ತಂಡ ಗುರುವಾರ ಸಂಜೆ ದಕ್ಷಿಣ ಆಫ್ರಿಕಾದ ಜೋಹನ್ಸ್ಬರ್ಗ್ಗೆ ತಲುಪಿದೆ. ಡಿಸೆಂಬರ್ 26ರಿಂದ ಸೆಂಚೂರಿಯನ್ನಲ್ಲಿ ಆರಂಭವಾಗಲಿರುವ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬಳಗ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಸೆಣೆಸಾಡಲಿದೆ. ಇಂದು ಬೆಳಿಗ್ಗೆ ಮುಂಬೈನಿಂದ ಟೀಮ್ ಇಂಡಿಯಾ ಸದಸ್ಯರನ್ನು ಹೊತ್ತ ಚಾರ್ಟರ್ಡ್ ಫ್ಲೈಟ್ ದಕ್ಷಿಣ ಆಫ್ರಿಕಾಗೆ ಪ್ರಯಾಣ ಬೆಳೆಸಿತ್ತು.
* ವಿರಾಟ್ ಕೊಹ್ಲಿ ಮಾಧ್ಯಮಗೋಷ್ಠಿಯಲ್ಲಿ ತಾನು ಟಿ ಟ್ವೆಂಟಿ ತಂಡದ ನಾಯಕತ್ವದಿಂದ ಕೆಳಗಿಳಿಯುವುದಾಗಿ ಮಾಹಿತಿಯನ್ನು ನೀಡಿದಾಗ ಬಿಸಿಸಿಐ ಯಾವುದೇ ವಿರೋಧವನ್ನು ವ್ಯಕ್ತ ಪಡಿಸದೇ ತನ್ನ ನಿರ್ಧಾರವನ್ನು ಸ್ವಾಗತಿಸಿತು ಎಂದು ಸ್ಪಷ್ಟನೆಯನ್ನು ನೀಡಿದರು. ಆದರೆ ನೀವು ಈ ಹಿಂದೆ ವಿರಾಟ್ ಕೊಹ್ಲಿಗೆ ನಾಯಕತ್ವದಿಂದ ಕೆಳಗಿಳಿಯಬೇಡಿ ಎಂದು ಬಿಸಿಸಿಐ ಮನವಿ ಮಾಡಿತ್ತು ಎಂಬ ಹೇಳಿಕೆಯನ್ನು ನೀಡಿದ್ರಿ. ಹೀಗಾಗಿ ವಿರಾಟ್ ಕೊಹ್ಲಿ ಅವರ ಈ ಹೇಳಿಕೆ ಕುರಿತು ಸದ್ಯ ನಿಮ್ಮ ಉತ್ತರವೇನು ಎಂದು ಮಾಧ್ಯಮದವರು ಗಂಗೂಲಿಗೆ ಪ್ರಶ್ನೆ ಹಾಕಿದಾಗ ಒಂದೇ ವಾಕ್ಯದಲ್ಲಿ ಉತ್ತರಿಸಿದ ಸೌರವ್ ಗಂಗೂಲಿ "ಹೇಳುವುದಕ್ಕೆ ಏನೂ ಇಲ್ಲ, ನಾವು ಅದನ್ನು ನಿಭಾಯಿಸುತ್ತೇವೆ. ಅದೆಲ್ಲವನ್ನೂ ಬಿಸಿಸಿಐಗೆ ಬಿಟ್ಟುಬಿಡಿ" ಎಂದು ಹೇಳಿಕೆಯನ್ನು ನೀಡಿ ಸ್ಪಷ್ಟನೆ ನೀಡದೇ ಸುಮ್ಮನಾಗಿದ್ದಾರೆ.
* ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಬಿಸಿಸಿಐ ಇದೀಗ ಮತ್ತೊಮ್ಮೆ ವಿರಾಟ್ ಕೊಹ್ಲಿಯನ್ನು ಕಡೆಗಣಿಸುವದರ ಮೂಲಕ ಬೇಡದ ಚರ್ಚೆಗೆ ಆಹಾರವಾಗಿದೆ. ಹೌದು, ಮುಂಬರಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯನ್ನು ಆಡಲು ಇಂದು ಭಾರತ ತಂಡದ ಆಟಗಾರರು ಬಿಸಿಸಿಐ ಆಯೋಜಿಸಿದ್ದ ಚಾರ್ಟರ್ಡ್ ವಿಮಾನದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಹಾರಿದರು. ಹೀಗೆ ಟೀಮ್ ಇಂಡಿಯಾ ಆಟಗಾರರು ವಿಮಾನದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣ ಬೆಳೆಸುತ್ತಿರುವ ವಿಷಯವನ್ನು ಹಂಚಿಕೊಂಡ ಬಿಸಿಸಿಐ ತಂಡದ ಕೆಲ ಆಟಗಾರರ ಚಿತ್ರಗಳನ್ನು ಟ್ವಿಟ್ಟರ್ ಮೂಲಕ ಪೋಸ್ಟ್ ಮಾಡಿತ್ತು. ಆದರೆ ಇದರಲ್ಲಿ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಫೋಟೋವನ್ನು ಬಿಸಿಸಿಐ ಹಂಚಿಕೊಳ್ಳದೇ ನೆಟ್ಟಿಗರಿಂದ ಛೀಮಾರಿ ಹಾಕಿಸಿಕೊಂಡ ನಂತರ ಎಚ್ಚೆತ್ತು ತನ್ನ ಮುಂದಿನ ಟ್ವೀಟ್ ಮಾಡಿದಾಗ ವಿರಾಟ್ ಕೊಹ್ಲಿ ಫೋಟೋವನ್ನೂ ಕೂಡ ಸೇರಿಸಿದೆ.