
ಡಿಸೆಂಬರ್ 17ರ ಶುಕ್ರವಾರದಂದು ಕ್ರಿಕೆಟ್ ಜಗತ್ತಿನಲ್ಲಿ ಹಲವು ವಿದ್ಯಮಾನಗಳು ಜರುಗಿದ್ದು ಒಂದೆಡೆ ಸಾಮಾಜಿಕ ಜಾಲ ತಾಣಗಳಲ್ಲಿ ವಿರಾಟ್ ಕೊಹ್ಲಿ ಮತ್ತು ಸೌರವ್ ಗಂಗೂಲಿ ಅಭಿಮಾನಿಗಳ ನಡುವೆ ಕೆಸರೆರಚಾಟ ಮುಂದುವರೆದಿದ್ದರೆ, ಮತ್ತೊಂದೆಡೆ ಬೆಂಗಳೂರಿನಲ್ಲಿ ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ ಫಿಟ್ನೆಸ್ ಪರೀಕ್ಷೆ ಪಾಸಾಗಲು ಬೆವರು ಹರಿಸುತ್ತಿದ್ದಾರೆ. ಹೀಗೆ ಡಿಸೆಂಬರ್ 17ರ ಕ್ರಿಕೆಟ್ ಸುದ್ದಿಗಳ ರೌಂಡಪ್ಅಪ್ ಈ ಕೆಳಕಂಡಂತಿದೆ.
* ಮುಂಬರುವ ಐಪಿಎಲ್ ಟೂರ್ನಿಗಾಗಿ ನೂತನ ಫ್ರಾಂಚೈಸಿಗಳು ಆಟಗಾರರನ್ನು ಖರೀದಿಸುವ ಕುರಿತಾಗಿ ಹೊರಬಿದ್ದಿರುವ ವರದಿಯೊಂದರ ಪ್ರಕಾರ ಹೊಸದಾಗಿ ಆಯ್ಕೆಯಾಗಿರುವ ಲಕ್ನೋ ಫ್ರಾಂಚೈಸಿ ಕೆಎಲ್ ರಾಹುಲ್, ರಶೀದ್ ಖಾನ್ ಮತ್ತು ಇಶಾನ್ ಕಿಶನ್ ಈ ಮೂವರು ಆಟಗಾರರನ್ನು ಮೆಗಾ ಹರಾಜಿಗೂ ಮುಂಚೆ ಖರೀದಿಸಲಿದೆ ಎನ್ನಲಾಗಿದೆ. ಕೆ ಎಲ್ ರಾಹುಲ್ ಅವರನ್ನು ನಾಯಕನನ್ನಾಗಿ ಲಕ್ನೋ ಫ್ರಾಂಚೈಸಿ ತನ್ನ ತೆಕ್ಕೆಗೆ ಹಾಕಿಕೊಳ್ಳುವುದು ಬಹುತೇಕ ಖಚಿತ.
* ಇನ್ನು ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಸೇರ್ಪಡೆಯಾಗಲಿರುವ ಮತ್ತೊಂದು ಹೊಸ ಫ್ರಾಂಚೈಸಿಯಾದ ಅಹ್ಮದಾಬಾದ್ ಶ್ರೇಯಸ್ ಅಯ್ಯರ್ ಮತ್ತು ಹಾರ್ದಿಕ್ ಪಾಂಡ್ಯ ಈ ಇಬ್ಬರು ಆಟಗಾರರನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಲಿದ್ದು ಮೂರನೇ ಆಟಗಾರನನ್ನಾಗಿ ಕ್ವಿಂಟನ್ ಡಿಕಾಕ್ ಅಥವಾ ಡೇವಿಡ್ ವಾರ್ನರ್ ಇಬ್ಬರಲ್ಲಿ ಒಬ್ಬರನ್ನು ಖರೀದಿಸುವ ಸಾಧ್ಯತೆ ಇದೆ. ಅಹಮದಾಬಾದ್ ಫ್ರಾಂಚೈಸಿ ಶ್ರೇಯಸ್ ಅಯ್ಯರ್ ಹೆಗಲಿಗೆ ನಾಯಕನ ಜವಾಬ್ದಾರಿಯನ್ನು ಹೊರಿಸುವ ಸಾಧ್ಯತೆಗಳು ಹೆಚ್ಚಿವೆ.
* ವಿರಾಟ್ ಕೊಹ್ಲಿ ನಾಯಕತ್ವದ ಕುರಿತಾಗಿ ಸೌರವ್ ಗಂಗೂಲಿ ಅತಿ ದೊಡ್ಡ ಮಟ್ಟದ ಟೀಕೆ ಮತ್ತು ವಿರೋಧಗಳನ್ನು ಸಾಮಾಜಿಕ ಜಾಲತಾಣದಲ್ಲಿ ಸ್ವೀಕರಿಸಿದ ಬೆನ್ನಲ್ಲೇ ಕೆಲ ಕ್ರಿಕೆಟ್ ಅಭಿಮಾನಿಗಳು ಸೌರವ್ ಗಂಗೂಲಿ ಪರ ಸಾಮಾಜಿಕ ಜಾಲತಾಣಗಳಲ್ಲಿ ಬ್ಯಾಟ್ ಬೀಸಿದ್ದಾರೆ. #NationStandsWithDada ಎಂಬ ಟ್ಯಾಗ್ ಬಳಸುವುದರ ಮೂಲಕ ಟ್ವಿಟ್ಟರ್ ಟ್ರೆಂಡ್ ಮಾಡಿರುವ ಸೌರವ್ ಗಂಗೂಲಿ ಅಭಿಮಾನಿಗಳು ವಿರಾಟ್ ಕೊಹ್ಲಿ ಅಭಿಮಾನಿಗಳು ಮಾಡಿದ್ದ ಟೀಕೆಗಳ ವಿರುದ್ಧ ದನಿ ಎತ್ತಿ ತಾವು ಸೌರವ್ ಗಂಗೂಲಿ ಪರ ನಿಲ್ಲುವುದಾಗಿ ಬೆಂಬಲ ಸೂಚಿಸಿದ್ದರು. ಹೀಗೆ ಸೌರವ್ ಗಂಗೂಲಿ ಪರ ಟ್ವಿಟರ್ ಟ್ರೆಂಡ್ ನಡೆಯುತ್ತಿದ್ದಂತೆ ಅತ್ತ ಮತ್ತೊಮ್ಮೆ ಸಿಡಿದೆದ್ದ ವಿರಾಟ್ ಕೊಹ್ಲಿ ಅಭಿಮಾನಿಗಳು ಇನ್ನೂ ಒಂದು ಹೆಜ್ಜೆ ಮುಂದಿಟ್ಟು #WorldStandsWithKohli ಎಂಬ ಟ್ಯಾಗ್ ಟ್ರೆಂಡ್ ಮಾಡಿದ್ದಾರೆ. ಈ ಮೂಲಕ ಸೌರವ್ ಗಂಗೂಲಿ ಪರ ದೇಶ ನಿಂತರೆ ವಿರಾಟ್ ಕೊಹ್ಲಿ ಪರ ವಿಶ್ವವೇ ನಿಲ್ಲಲಿದೆ ಎಂದು ಗಂಗೂಲಿ ಅಭಿಮಾನಿಗಳಿಗೆ ವಿರಾಟ್ ಕೊಹ್ಲಿ ಅಭಿಮಾನಿಗಳು ಟಾಂಗ್ ನೀಡಿದ್ದಾರೆ. ಒಂದೆಡೆ ಸೌರವ್ ಗಂಗೂಲಿ ಮತ್ತು ವಿರಾಟ್ ಕೊಹ್ಲಿ ಭಿನ್ನ ವಿಭಿನ್ನ ಹೇಳಿಕೆಗಳನ್ನು ನೀಡುವುದರ ಮೂಲಕ ವಿವಾದಕ್ಕೆ ಎಡೆ ಮಾಡಿಕೊಡುತ್ತಿದ್ದರೆ, ಮತ್ತೊಂದೆಡೆ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ದ್ವೇಷಿಸುವುದರ ಮೂಲಕ ಕಿಡಿಕಾರಲು ಆರಂಭಿಸಿದ್ದಾರೆ.
* ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಒಂದನ್ನು ಮಾಡಿದ್ದು ತನ್ನ ಸ್ನೇಹಿತೆಯ ಪ್ರಾಣ ಉಳಿಸಿದ ಟ್ರಾಫಿಕ್ ಪೊಲೀಸರೊಬ್ಬರನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದ್ದನ್ನು ಬರೆದುಕೊಂಡಿದ್ದಾರೆ. ಈ ಕುರಿತಾಗಿ ವಿಶೇಷ ಪತ್ರವೊಂದನ್ನು ಬರೆದು ಟ್ವಿಟ್ಟರ್ ಮೂಲಕ ಟ್ವೀಟ್ ಮಾಡಿರುವ ಸಚಿನ್ ತೆಂಡೂಲ್ಕರ್ ಪ್ರಪಂಚವನ್ನು ಸುಂದರವನ್ನಾಗಿ ಮಾಡಲು ಪ್ರಯತ್ನಿಸುತ್ತಿರುವ ಸುಂದರ ಹೃದಯಗಳನ್ನು ಅದರಲ್ಲಿಯೂ ಸಂಚಾರಿ ಪೊಲೀಸರು ದೇಶದ ಜನರ ರಕ್ಷಣೆ ಕುರಿತು ಶ್ರಮಿಸುತ್ತಿರುವುದನ್ನು ಹಾಡಿ ಹೊಗಳಿ ಕೊಂಡಾಡಿದ್ದಾರೆ.
* ರೋಹಿತ್ ಶರ್ಮಾ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗಳಲ್ಲಿ ಒಟ್ಟು 5 ಟ್ರೋಫಿಗಳನ್ನು ಗೆಲ್ಲುವುದರ ಮೂಲಕ ಓರ್ವ ನಾಯಕನಾಗಿ ಯಶಸ್ವಿಯಾಗಿದ್ದಾರೆ. ಹೀಗಾಗಿ ರೋಹಿತ್ ಶರ್ಮಾ ಟೀಮ್ ಇಂಡಿಯಾದ ನಾಯಕನಾಗಲು ಹೆಚ್ಚು ಅರ್ಹತೆಯನ್ನು ಹೊಂದಿದ್ದಾರೆ ಎಂದು ಸೌರವ್ ಗಂಗೂಲಿ ತಿಳಿಸಿದ್ದಾರೆ. ಈ ರೀತಿ ಹೇಳಿಕೆ ನೀಡುವುದರ ಮೂಲಕ ರೋಹಿತ್ ಶರ್ಮಾ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗಳಲ್ಲಿ ಯಶಸ್ವಿ ನಾಯಕನಾಗಿರುವುದರಿಂದಲೇ ಟೀಮ್ ಇಂಡಿಯಾದ ನಾಯಕನಾಗಿ ಆಯ್ಕೆಯಾದರು ಎಂಬುದನ್ನು ಸೌರವ್ ಗಂಗೂಲಿ ಬಿಚ್ಚಿಟ್ಟಿದ್ದಾರೆ.