
ಜನವರಿ 3ರ ಸೋಮವಾರದಂದು ಕ್ರಿಕೆಟ್ ಜಗತ್ತಿನಲ್ಲಿ ಹಲವಾರು ಪ್ರಮುಖ ವಿದ್ಯಮಾನಗಳು ಜರುಗಿದ್ದು, ಒಂದೆಡೆ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯ ಆರಂಭವಾಗಿದ್ದು ಮೊದಲನೇ ದಿನದಾಟದಲ್ಲಿಯೇ ಭಾರತ ಆಲ್ಔಟ್ ಆಗಿದೆ. ಮತ್ತೊಂದೆಡೆ ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಬಾಂಗ್ಲಾದೇಶ ಮೇಲುಗೈ ಸಾಧಿಸಿದೆ. ಹೀಗೆ ಜನವರಿ 3ರ ಕ್ರಿಕೆಟ್ ಸುದ್ದಿಗಳ ರೌಂಡ್ಅಪ್ ಈ ಕೆಳಕಂಡಂತಿದೆ..
* ನ್ಯೂಜಿಲೆಂಡ್ ವಿರುದ್ಧದ ಚೊಚ್ಚಲ ಟೆಸ್ಟ್ ಪಂದ್ಯದ ಮೊದಲನೇ ದಿನದಾಟದಂದು ಉತ್ತಮ ಪ್ರದರ್ಶನ ನೀಡಲಾಗದೆ ಎಡವಿದ್ದ ಬಾಂಗ್ಲಾದೇಶ ಎರಡನೇ ಮತ್ತು ಮೂರನೇ ದಿನದಾಟದಂದು ಪ್ರತ್ಯುತ್ತರವನ್ನು ನೀಡಿದೆ. ತನ್ನ ಪಾಲಿನ ಮೊದಲನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಬಾಂಗ್ಲಾದೇಶ ಮೂರನೇ ದಿನದಾಟದಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 401 ರನ್ ಗಳಿಸಿದೆ. ಬಾಂಗ್ಲಾದೇಶದ ಪರ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ಶದ್ಮನ್ ಇಸ್ಲಾಂ 22, ಮಹಮ್ಮದುಲ್ ಹಸನ್ ಜಾಯ್ 78, ನಿಜಾಮುಲ್ ಹುಸೈನ್ ಶಾಂಟೋ 64, ನಾಯಕ ಮೊಮಿನುಲ್ ಹಕ್ 88, ಮುಶ್ಪೀಕರ್ ರಹೀಂ 12, ಲಿಟನ್ ದಾಸ್ 86, ಯಸಿರ್ ಅಲಿ ಅಜೇಯ 11 ರನ್ ಮತ್ತು ಮೆಹದಿ ಹಸನ್ ಅಜೇಯ 20 ರನ್ ಕಲೆಹಾಕಿದರು. ಬಾಂಗ್ಲಾದೇಶ ಉತ್ತಮ ಹಂತದಲ್ಲಿದ್ದು ಬಲಿಷ್ಠ ನ್ಯೂಜಿಲೆಂಡ್ ವಿರುದ್ಧ ಮೂರನೇ ದಿನದಾಟದಂತ್ಯಕ್ಕೆ 73 ರನ್ ಮುನ್ನಡೆಯನ್ನು ಕಾಯ್ದುಕೊಂಡಿದೆ. ಇನ್ನು ಬಾಂಗ್ಲಾದೇಶದ ಮಧ್ಯಮ ಕ್ರಮಾಂಕದ ಉತ್ತಮ ಪ್ರದರ್ಶನದ ಮುಂದೆ ಮಂಕಾದ ಕಿವೀಸ್ ಬೌಲರ್ಗಳು ವಿಕೆಟ್ ಪಡೆಯುವಲ್ಲಿ ಹರಸಾಹಸ ಪಡುತ್ತಿದ್ದಾರೆ. ನ್ಯೂಜಿಲೆಂಡ್ ಪರ ಟ್ರೆಂಟ್ ಬೌಲ್ಟ್ ಹಾಗೂ ನೀಲ್ ವ್ಯಾಗ್ನರ್ ತಲಾ 3 ವಿಕೆಟ್ ಪಡೆದಿದ್ದು ಇನ್ನುಳಿದ ಯಾವುದೇ ಬೌಲರ್ ಕೂಡ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಲಿಲ್ಲ.
* ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿಯ ಮೊದಲ ದಿನದಾಟದಲ್ಲಿ ಟೀಮ್ ಇಂಡಿಯಾ ಬ್ಯಾಟಿಂಗ್ ವಿಭಾಗ ಕಳಪೆ ಪ್ರದರ್ಶನ ನೀಡಿ ನಿರಾಸೆ ಮೂಡಿಸಿದೆ. ದಕ್ಷಿಣ ಆಫ್ರಿಕಾದ ಬೌಲರ್ಗಳ ದಾಳಿಯ ಮುಂದೆ ಟೀಮ್ ಇಂಡಿಯಾ ದಿಟ್ಟ ಬ್ಯಾಟಿಂಗ್ ಪ್ರದರ್ಶಿಸಲು ವಿಫಲವಾಗಿದ್ದು ಮೊದಲ ದಿನ ಬ್ಯಾಟಿಂಗ್ ನಡೆಸಿ 202 ರನ್ಗಳಿಗೆ ಆಲ್ಔಟ್ ಆಗಿದೆ. ನಂತರ ದಕ್ಷಿಣ ಆಫ್ರಿಕಾ ತಂಡ ಬ್ಯಾಟಿಂಗ್ ಆರಂಭಿಸಿದ್ದು 35 ರನ್ಗಳಿಗೆ ಒಂದು ವಿಕೆಟ್ ಕಳೆದುಕೊಂಡಿದೆ. ಈ ಮೂಲಕ ಮೊದಲ ದಿನದಾಟದಲ್ಲಿ ಭಾರತ ಹಿನ್ನೆಡೆ ಅನುಭವಿಸಿದೆ.
* ಬಿಸಿಸಿಐ ಶ್ರೇಯಸ್ ಐಯ್ಯರ್ ದ. ಆಫ್ರಿಕಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಹೊಟ್ಟೆನೋವಿನ ಕಾರಣದಿಂದಾಗಿ ಅಲಭ್ಯರಾಗಿದ್ದಾರೆ ಎಂದು ಪಂದ್ಯ ಆರಂಭಕ್ಕೂ ಅರ್ಧ ತಾಸಿನ ಮುನ್ನ ಬಿಸಿಸಿಐ ತಿಳಿಸಿದರೆ, ಅತ್ತ ಶ್ರೇಯಸ್ ಐಯ್ಯರ್ ನಿನ್ನೆವರೆಗೂ ಅಭ್ಯಾಸದಲ್ಲಿ ಭಾಗವಹಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಪ್ರೇಕ್ಷಕರು ಶ್ರೇಯಸ್ ಐಯ್ಯರ್ ದಿಢೀರನೆ ಅನಾರೋಗ್ಯಕ್ಕೊಳಗಾದ್ರಾ? ಬಿಸಿಸಿಐ ಅಂತಿಮ ವೇಳೆಯಲ್ಲಿ ಈ ರೀತಿ ನಿರ್ಧಾರ ಪ್ರಕಟಿಸುವುದು ಆಟಗಾರರ ಮೇಲೆ ಬೇರೆ ರೀತಿಯ ಪ್ರಭಾವವನ್ನೇದರೂ ಬೀರುತ್ತಿದೆಯಾ ಎಂಬ ಪ್ರಶ್ನೆಯನ್ನು ಹಾಕಿದ್ದಾರೆ.
* ಇತ್ತೀಚೆಗಷ್ಟೇ ಅಂತರಾಷ್ಟ್ರೀಯ ಕ್ರಿಕೆಟ್ಗೆ ಗುಡ್ಬೈ ಹೇಳಿದ ಹರ್ಭಜನ್ ಸಿಂಗ್ ಸ್ಫೋಟಕ ಸತ್ಯವೊಂದನ್ನ ಬಾಯ್ಬಿಟ್ಟಿದ್ದಾರೆ. ನಿವೃತ್ತಿ ಬಳಿಕ ತಮ್ಮ ಹಳೆಯ ವೃತ್ತಿ ಜೀವನವನ್ನ ಮೆಲುಕು ಹಾಕಿರುವ ಹರ್ಭಜನ್ ಸಿಂಗ್, ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕುರಿತಾಗಿ ಆಶ್ಚರ್ಯಕರ ಮಾತೊಂದನ್ನು ತಿಳಿಸಿದ್ದಾರೆ. "ಧೋನಿ ಇತರ ಆಟಗಾರರಿಗಿಂತ ಉತ್ತಮ ಬೆಂಬಲವನ್ನು ಹೊಂದಿದ್ದರು ಮತ್ತು ಉಳಿದ ಆಟಗಾರರು ಅದೇ ರೀತಿಯ ಬೆಂಬಲವನ್ನು ಪಡೆದಿದ್ದರೆ, ಅವರು ಕೂಡ ಆಡುತ್ತಿದ್ದರು. ಉಳಿದ ಆಟಗಾರರು ಬ್ಯಾಟ್ ಬೀಸುವುದನ್ನು ಮರೆತಿದ್ದಾರ ಅಥವಾ ಬೌಳರ್ಗಳು ಸ್ವಿಂಗ್ ಮಾಡುವುದನ್ನ ಬಿಟ್ಟಿದ್ದರಾ ತಿಳಿದಿಲ್ಲ, "ಎಂದು ಅವರು ಜೀ ನ್ಯೂಸ್ಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.