ನವೆಂಬರ್ 14ರ ಭಾನುವಾರದಂದು ಕ್ರಿಕೆಟ್ ಜಗತ್ತಿನಲ್ಲಿ ಹಲವು ವಿದ್ಯಮಾನಗಳು ಜರುಗಿದ್ದು, ಒಂದೆಡೆ ಈ ಬಾರಿಯ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಸೆಣಸಾಡುತ್ತಿದ್ದರೆ, ಮತ್ತೊಂದೆಡೆ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯ ವೀಕ್ಷಿಸಲು ಪ್ರೇಕ್ಷಕರಿಗೆ ಅನುಮತಿ ನೀಡುವುದರಲ್ಲಿ ಮಹಾರಾಷ್ಟ್ರ ಸರ್ಕಾರ ಅಸ್ತು ಎಂದಿದೆ. ಹೀಗೆ ನವೆಂಬರ್ 14ರ ಭಾನುವಾರದಂದು ಕ್ರಿಕೆಟ್ ಜಗತ್ತಿನಲ್ಲಿ ನಡೆದಿರುವ ಪ್ರಮುಖ ವಿದ್ಯಮಾನಗಳ ಪಟ್ಟಿ ಈ ಕೆಳಕಂಡಂತಿದೆ.
* ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಎದುರಾಳಿ ನ್ಯೂಜಿಲೆಂಡ್ ತಂಡವನ್ನು 172 ರನ್ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿತ್ತು. ಈ ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ ಡೇವಿಡ್ ವಾರ್ನರ್ ಹಾಗೂ ಮಿಶೆಲ್ ಮಾರ್ಶ್ ನೀಡಿದ ಅದ್ಭುತ ಪ್ರದರ್ಶನದಿಂದಾಗಿ ಸುಲಭವಾಗಿ ಗೆಲುವು ಕಂಡಿತು. ಇನ್ನೂ 7 ಎಸೆತಗಳು ಬಾಕಿಯಿರುವಂತೆಯೇ ಆಸ್ಟ್ರೇಲಿಯಾ 8 ವಿಕೆಟ್ಗಳ ಬೃಹತ್ ಅಂತರದಿಮದ ಗೆಲುವು ಸಾಧಿಸಿ ಟ್ರೋಫಿಗೆ ಮುತ್ತಿಕ್ಕಿದೆ.
*ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ನಡೆದ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಸೆಮಿಫೈನಲ್ ಪಂದ್ಯದಲ್ಲಿ ಇದೇ ಡಿವೋನ್ ಕಾನ್ವೆ ಔಟ್ ಆದ ಹತಾಶೆಯಲ್ಲಿ ತಮ್ಮ ಕೈಗೆ ಪೆಟ್ಟು ಮಾಡಿಕೊಂಡಿದ್ದರು. ಹೌದು, ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ರನ್ ಚೇಸ್ ಮಾಡುವ ವೇಳೆ ನಿರ್ಣಾಯಕ ಹಂತದಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿದ್ದ ಡಿವೋನ್ ಕಾನ್ವೆ ಲಿಯಾಮ್ ಲಿವಿಂಗ್ ಸ್ಟನ್ ಎಸೆತದಲ್ಲಿ ಸ್ಟಂಪ್ ಔಟ್ ಆಗಿದ್ದರು.
ಇದೀಗ ಪ್ರಕಟಣೆಯನ್ನು ಹೊರಡಿಸಿರುವ ನ್ಯೂಜಿಲೆಂಡ್ ಕ್ರಿಕೆಟ್ ಗಾಯದ ಸಮಸ್ಯೆಗೊಳಗಾಗಿ ಭಾರತ ಪ್ರವಾಸದಿಂದ ಹೊರಗುಳಿದಿರುವ ಡಿವೋನ್ ಕಾನ್ವೆ ಬದಲಾಗಿ ಡೆರಿಲ್ ಮಿಚೆಲ್ ಅವರನ್ನು ಆಯ್ಕೆ ಮಾಡಿಕೊಂಡಿದೆ. ಭಾರತ ವಿರುದ್ಧದ ಸರಣಿಗಳಿಗೆ ಡಿವೋನ್ ಕಾನ್ವೆ ಸ್ಥಾನಕ್ಕೆ ಆಯ್ಕೆಯಾಗಿರುವ ಡೆರಿಲ್ ಮಿಚೆಲ್ ಇತ್ತೀಚೆಗಷ್ಟೇ ನಡೆದ ಇಂಗ್ಲೆಂಡ್ ವಿರುದ್ಧದ ಟಿ ಟ್ವೆಂಟಿ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ 47 ಎಸೆತಗಳಲ್ಲಿ ಅಜೇಯ 72 ರನ್ ಬಾರಿಸುವುದರ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಹೀಗೆ ಡಿವೋನ್ ಕಾನ್ವೆ ಅಲಭ್ಯತೆಯಿಂದ ಕಂಗೆಟ್ಟಿದ್ದ ನ್ಯೂಜಿಲೆಂಡ್ ತಂಡಕ್ಕೆ ಡೆರಿಲ್ ಮಿಚೆಲ್ ಸೇರ್ಪಡೆ ಸಮಾಧಾನವನ್ನು ತಂದಿದೆ.
* ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿರುವ ಟೀಂ ಇಂಡಿಯಾ ಇದೇ ತಿಂಗಳ 17ರಿಂದ ಆರಂಭವಾಗಲಿರುವ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಮತ್ತು 2 ಪಂದ್ಯಗಳ ಟೆಸ್ಟ್ ಸರಣಿಗಳಲ್ಲಿ ನ್ಯೂಜಿಲೆಂಡ್ ತಂಡದ ವಿರುದ್ಧ ಕಾದಾಟ ನಡೆಸಲಿದೆ. ಮೊದಲಿಗೆ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ವಿರುದ್ಧ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಆರಂಭವಾಗಲಿದ್ದು, ಮೊದಲನೇ ಟಿ ಟ್ವೆಂಟಿ ಪಂದ್ಯ ನವೆಂಬರ್ 17ರಂದು ರಾಜಸ್ತಾನದ ಜೈಪುರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಹೀಗಾಗಿ ಟೀಮ್ ಇಂಡಿಯಾಗೆ ನೂತನ ಕೋಚ್ ಆಗಿ ಆಯ್ಕೆಯಾಗಿರುವ ರಾಹುಲ್ ದ್ರಾವಿಡ್ ಮತ್ತು ನ್ಯೂಜಿಲೆಂಡ್ ವಿರುದ್ಧದ ಟಿ ಟ್ವೆಂಟಿ ಸರಣಿಗೆ ಆಯ್ಕೆಯಾಗಿರುವ ಕೆಲ ಭಾರತೀಯ ಕ್ರಿಕೆಟಿಗರು ಜೈಪುರಕ್ಕೆ ಬಂದಿಳಿದಿದ್ದಾರೆ. ಇಷ್ಟು ದಿನಗಳ ಕಾಲ ಭಾರತ ಎ ತಂಡ ಮತ್ತು ಭಾರತ ಅಂಡರ್ 19 ತಂಡಗಳಿಗೆ ತರಬೇತುದಾರನಾಗಿ ಕಾರ್ಯನಿರ್ವಹಿಸಿ ದೊಡ್ಡಮಟ್ಟದ ಯಶಸ್ಸು ಸಾಧಿಸಿದ್ದ ರಾಹುಲ್ ದ್ರಾವಿಡ್ ಇದೀಗ ಭಾರತ ಅಂತರ ರಾಷ್ಟ್ರೀಯ ಕ್ರಿಕೆಟ್ ತಂಡದ ಕೋಚ್ ಆಗಿ ಆಯ್ಕೆಯಾದ ನಂತರ ತರಬೇತಿ ನೀಡಲಿರುವ ಮೊದಲನೇ ಸರಣಿ ನ್ಯೂಜಿಲೆಂಡ್ ವಿರುದ್ಧದ ಈ ಟಿ ಟ್ವೆಂಟಿ ಸರಣಿಯಾಗಿದೆ. ಈ ಸರಣಿಯಲ್ಲಿ ಭಾಗವಹಿಸಲು 4 ದಿನಗಳ ಮುಂಚೆಯೇ ಕೋಚ್ ರಾಹುಲ್ ದ್ರಾವಿಡ್, ನಾಯಕ ರೋಹಿತ್ ಶರ್ಮಾ ಸೇರಿದಂತೆ ಇನ್ನೂ ಹಲವಾರು ಆಟಗಾರರು ಜೈಪುರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದು ಇಳಿದಿದ್ದಾರೆ.