ನವೆಂಬರ್ 25ರ ಗುರುವಾರದಂದು ಕ್ರಿಕೆಟ್ ಜಗತ್ತಿನಲ್ಲಿ ಹಲವು ವಿದ್ಯಮಾನಗಳು ಜರುಗಿದ್ದು, ಒಂದೆಡೆ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ 2 ಪಂದ್ಯಗಳ ಟೆಸ್ಟ್ ಸರಣಿಯ ಚೊಚ್ಚಲ ಪಂದ್ಯ ಕಾನ್ಪುರ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆರಂಭವಾಗಿದ್ದು ಶ್ರೇಯಸ್ ಅಯ್ಯರ್ ತನ್ನ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿಯೇ ಮಿಂಚಿದ್ದರೆ, ಮತ್ತೊಂದೆಡೆ ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವೆ ನಡೆದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ಪ್ರವಾಸಿ ವೆಸ್ಟ್ ಇಂಡೀಸ್ ತಂಡಕ್ಕೆ ಸೋಲಿನ ರುಚಿ ತೋರಿಸಿದೆ. ಹೀಗೆ ನವೆಂಬರ್ 25ರ ಕ್ರಿಕೆಟ್ ವಿದ್ಯಮಾನಗಳ ವಿವರ ಈ ಕೆಳಕಂಡಂತಿದೆ.
* ಶ್ರೀಲಂಕಾ ಪ್ರವಾಸ ಕೈಗೊಂಡಿರುವ ವೆಸ್ಟ್ ಇಂಡೀಸ್ ತಂಡ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿದೆ. ಶ್ರಿಲಂಕಾದ ಬೌಲಿಂಗ್ ದಾಳಿಗೆ ಸಂಪೂರ್ಣ ಮಂಕಾದ ವೆಸ್ಟ್ ಇಂಡೀಸ್ ತಂಡ ಎರಡನೇ ಇನ್ನಿಂಗ್ಸ್ನಲ್ಲಿ ಅತ್ಯಂತ ಕನಿಷ್ಠ ಮೊತ್ತಕ್ಕೆ ಆಲೌಟ್ ಆಗುವ ಭೀತಿಯನ್ನು ಕೂಡ ಎದುರಿಸಿದ್ದರು. ಆದರೆ ಎನ್ಕ್ರುಮಾ ಬಾನರ್ ಹಾಗೂ ಜೋಶುವಾ ಡ ಸಿಲ್ವಾ ಈ ಕುಸಿತದಿಂದ ಪಾರು ಮಾಡುವಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾದರು. ಆದರೆ ವೆಸ್ಟ್ ಇಂಡೀಸ್ ತಂಡವನ್ನು ಸೋಲಿನಿಂದ ಪಾರು ಮಾಡಲು ಈ ಆಟಗಾರರಿಗೆ ಸಾಧ್ಯವಾಗಲಿಲ್ಲ. ಹೀಗಾಗಿ ವೆಸ್ಟ್ ಇಂಡೀಸ್ ಮೊದಲ ಪಂದ್ಯದಲ್ಲಿ 187 ರನ್ಗಳ ಅಂತರದಿಂದ ಸೋಲು ಕಂಡಿದೆ.
* ಇನ್ನು ಶ್ರೀಲಂಕಾ ವೆಸ್ಟ್ ಇಂಡೀಸ್ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ 187 ರನ್ ಗೆಲುವು ಸಾಧಿಸುವುದರ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದು, ಟೀಮ್ ಇಂಡಿಯಾ ದ್ವಿತೀಯ ಸ್ಥಾನಕ್ಕೆ ಕುಸಿದಿದೆ.
* ಇನ್ಸ್ಟಾಗ್ರಾಮ್ ಅಪ್ಲಿಕೇಶನ್ನಲ್ಲಿ ಅಭಿಮಾನಿಯೋರ್ವ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಡೇವಿಡ್ ವಾರ್ನರ್ ನಾಯಕ ಎಂದು ಮಾಡಿದ್ದ ಕಾಮೆಂಟ್ಗೆ ಡೇವಿಡ್ ವಾರ್ನರ್ ಪ್ರತ್ಯುತ್ತರ ನೀಡಿದ್ದು "ಬೇಡ, ಧನ್ಯವಾದಗಳು" ಎಂದು ಬರೆಯುವುದರ ಮೂಲಕ ಮತ್ತೊಮ್ಮೆ ತಾನು ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಆಡುವುದಿಲ್ಲ ಎಂಬುದನ್ನು ಮನದಟ್ಟು ಮಾಡಿದ್ದಾರೆ.
* ನ್ಯೂಜಿಲೆಂಡ್ ವಿರುದ್ಧ ಇಂದು ಆರಂಭವಾದ ಪ್ರಥಮ ಟೆಸ್ಟ್ ಪಂದ್ಯದ ಮೊದಲನೇ ಇನ್ನಿಂಗ್ಸ್ನಲ್ಲಿ ಕಣಕ್ಕಿಳಿದು ಉತ್ತಮ ಪ್ರದರ್ಶನ ನೀಡಿರುವ ಶ್ರೇಯಸ್ ಅಯ್ಯರ್ ಅವರ ತಂದೆ ಸಂತೋಷ್ ಅಯ್ಯರ್ ವಿಷಯವೊಂದನ್ನು ಹಂಚಿಕೊಂಡಿದ್ದು, 2017ರಲ್ಲಿ ಟೀಮ್ ಇಂಡಿಯಾ ಬಾರ್ಡರ್ ಗವಾಸ್ಕರ್ ಟ್ರೋಫಿ ಗೆದ್ದಿದ್ದಾಗ ತಮ್ಮ ಮಗ ಶ್ರೇಯಸ್ ಅಯ್ಯರ್ ಟ್ರೋಫಿಯೊಂದಿಗೆ ತಂಡದ ಇತರ ಆಟಗಾರರೊಂದಿಗೆ ಇದ್ದ ಫೋಟೋವನ್ನು ವಾಟ್ಸಾಪ್ ಡಿಪಿ ಮಾಡಿಕೊಂಡಿದ್ದರಂತೆ. ಹೀಗೆ 4 ವರ್ಷಗಳ ಹಿಂದೆ ಈ ಡಿಪಿಯನ್ನು ಹಾಕಿದ್ದ ಸಂತೋಷ್ ಅಯ್ಯರ್ ಇದುವರೆಗೂ ಬದಲಾಯಿಸಿಯೇ ಇರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಅಂದು ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದ ಶ್ರೇಯಸ್ ಅಯ್ಯರ್ ಅವರಿಗೆ ಪದಾರ್ಪಣೆ ಮಾಡುವ ಅವಕಾಶ ಸಿಕ್ಕಿರಲಿಲ್ಲ ಆದರೆ ಈಗ ಆ ಅವಕಾಶ ಕೂಡಿ ಬಂದಿದ್ದು ಸಿಕ್ಕ ಅವಕಾಶವನ್ನು ಶ್ರೇಯಸ್ ಅಯ್ಯರ್ ಉತ್ತಮವಾಗಿ ಬಳಸಿಕೊಳ್ಳುತ್ತಿದ್ದಾರೆ.
* ಈ ಹಿಂದೆ ಅನಿಲ್ ಕುಂಬ್ಳೆ ಟೀಮ್ ಇಂಡಿಯಾ ಕೋಚ್ ಆಗಿದ್ದಾಗ ಯಾರಾದರೂ ನೂತನ ಆಟಗಾರ ತಂಡ ಸೇರಿದರೆ ಭಾರತ ಕ್ರಿಕೆಟ್ ದಿಗ್ಗಜರಿಂದ ಆ ನೂತನ ಆಟಗಾರರಿಗೆ ಕ್ಯಾಪ್ ವಿತರಣೆ ಮಾಡುವ ಮೂಲಕ ತಂಡಕ್ಕೆ ಸ್ವಾಗತಿಸುತ್ತಿದ್ದರು. ಇದೀಗ ಅನಿಲ್ ಕುಂಬ್ಳೆ ಅವರ ಈ ಹಳೆಯ ಸಂಪ್ರದಾಯವನ್ನೇ ರಾಹುಲ್ ದ್ರಾವಿಡ್ ಮರಳಿ ಜಾರಿಗೆ ತಂದಿದ್ದು ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಟೆಸ್ಟ್ ತಂಡ ಸೇರಿದ ಶ್ರೇಯಸ್ ಅಯ್ಯರ್ ಅವರಿಗೆ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಅವರಿಂದ ಕ್ಯಾಪ್ ಕೊಡಿಸಲಾಯಿತು. ಅಷ್ಟೇ ಅಲ್ಲದೆ ನ್ಯೂಜಿಲೆಂಡ್ ವಿರುದ್ಧದ ಟಿ ಟ್ವೆಂಟಿ ಪಂದ್ಯದ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಹರ್ಷಲ್ ಪಟೇಲ್ ಅವರಿಗೂ ಕೂಡ ಭಾರತದ ಮಾಜಿ ಕ್ರಿಕೆಟಿಗ ಅಜಿತ್ ಅಗರ್ಕರ್ ಅವರಿಂದ ಕ್ಯಾಪ್ ಕೊಡಿಸಲಾಗಿತ್ತು.