ಸೆಪ್ಟೆಂಬರ್ 11ರ ಶನಿವಾರದಂದು ಕ್ರಿಕೆಟ್ ಜಗತ್ತಿನಲ್ಲಿ ಹಲವಾರು ವಿದ್ಯಮಾನಗಳು ಜರುಗಿವೆ. ಒಂದೆಡೆ ಭಾರತ ಮತ್ತು ಇಂಗ್ಲೆಂಡ್ ನಡುವಿನ ಅಂತಿಮ ಟೆಸ್ಟ್ ಪಂದ್ಯ ರದ್ದಾದ ಕುರಿತು ಸಾಕಷ್ಟು ಕ್ರೀಡಾಭಿಮಾನಿಗಳು ಇಂದು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ಯುಎಇಯಲ್ಲಿ ಮುಂದುವರಿಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಭಾಗವಹಿಸಲು ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಸಹ ಆಟಗಾರ ಜಸ್ಪ್ರೀತ್ ಬುಮ್ರಾ ಯುಎಇ ತಲುಪಿದ್ದಾರೆ. ಹೀಗೆ ಸೆಪ್ಟೆಂಬರ್ 11ರ ಶನಿವಾರದಂದು ಕ್ರಿಕೆಟ್ ಜಗತ್ತಿನಲ್ಲಿ ನಡೆದ ಕೆಲ ಘಟನೆಗಳ ಕಿರು ನೋಟ ಈ ಕೆಳಕಂಡಂತಿದೆ ಓದಿ..
* ಕಳೆದ ಏಪ್ರಿಲ್ ತಿಂಗಳಿನಲ್ಲಿ ಆರಂಭವಾಗಿದ್ದ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಕೊರೋನಾವೈರಸ್ ಕಾರಣದಿಂದಾಗಿ ಅರ್ಧಕ್ಕೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಹೀಗೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಇದೇ ಸೆಪ್ಟೆಂಬರ್ 19ರಿಂದ ಯುಎಇಯಲ್ಲಿ ಮುಂದುವರೆಸಲಾಗುತ್ತಿದೆ. ಹೀಗೆ ಯುಎಇಯಲ್ಲಿ ಮುಂದುವರಿಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಭಾಗವಹಿಸುವುದಿಲ್ಲ ಎಂದು ಇಂಗ್ಲೆಂಡ್ ತಂಡದ ಮೂವರು ಪ್ರಮುಖ ಆಟಗಾರರಾದ ಡಾವಿಡ್ ಮಲನ್, ಕ್ರಿಸ್ ವೋಕ್ಸ್ ಮತ್ತು ಜಾನಿ ಬೇರ್ಸ್ಟೋ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ ಎಂದು ವರದಿಯಾಗಿದೆ. ಡಾವಿಡ್ ಮಲನ್ ಪಂಜಾಬ್ ಕಿಂಗ್ಸ್ ತಂಡದ ಆಟಗಾರ, ಕ್ರಿಸ್ ವೋಕ್ಸ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರ ಮತ್ತು ಜಾನಿ ಬೇರ್ಸ್ಟೋ ಸನ್ ರೈಸರ್ಸ್ ಹೈದರಾಬಾದ್ ತಂಡದ ಆಟಗಾರನಾಗಿದ್ದಾರೆ.
* ಭಾರತ ಮತ್ತು ಇಂಗ್ಲೆಂಡ್ ನಡುವೆ ಮ್ಯಾಂಚೆಸ್ಟರ್ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಐದನೇ ಟೆಸ್ಟ್ ಪಂದ್ಯ ಆರಂಭವಾಗುವುದಕ್ಕೆ ಕೆಲ ಗಂಟೆಗಳು ಬಾಕಿ ಇರುವಾಗ ಪಂದ್ಯ ರದ್ದುಗೊಂಡು ಮುಂದೂಡಲ್ಪಟ್ಟಿತು. ಆದರೆ ಇದಕ್ಕೂ ಮುನ್ನ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಬಳಿ ಪಂದ್ಯವನ್ನು ಒಂದೆರಡು ದಿನಗಳ ಕಾಲ ಮುಂದೂಡುವಂತೆ ವಿರಾಟ್ ಕೊಹ್ಲಿ ಮನವಿಯನ್ನು ಮಾಡಿದ್ದರು. ತಂಡದಲ್ಲಿ ಕೊರೊನಾ ಭೀತಿಯಿದೆ, ಹೀಗಾಗಿ ಒಂದೆರಡು ದಿನಗಳ ಕಾಲ ಪಂದ್ಯವನ್ನು ಮುಂದೂಡಿದರೆ ಅನುಕೂಲವಾಗುತ್ತದೆ ಎಂಬ ನಿಟ್ಟಿನಿಂದ ವಿರಾಟ್ ಕೊಹ್ಲಿ ಈ ಮನವಿಯನ್ನು ಮಾಡಿದ್ದರು. ಆದರೆ ವಿರಾಟ್ ಕೊಹ್ಲಿ ಮನವಿಯನ್ನು ಪರಿಗಣಿಸದ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಕೊಹ್ಲಿ ಸಲಹೆಯನ್ನು ತಳ್ಳಿ ಹಾಕಿ ಪಂದ್ಯವನ್ನು ಮುಂದಿನ ದಿನಗಳಲ್ಲಿ ನಡೆಸುತ್ತೇವೆಂದು ಹೇಳಿ ರದ್ದು ಮಾಡಿತು.
* ಸೆಪ್ಟೆಂಬರ್ 11ರ ಶನಿವಾರದಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ವೇಗಿ ಕೈಲ್ ಜೆಮಿಸನ್ ಯುಎಇ ತಲುಪಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿಕೊಂಡಿದ್ದಾರೆ. ಕೈಲ್ ಜೆಮಿಸನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿಕೊಂಡಿರುವ ವಿಷಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ ತಿಳಿಸಿದೆ
* ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಆಯ್ಕೆ ಮಾಡಲಾಗಿರುವ ಪಾಕಿಸ್ತಾನ ತಂಡದ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಶೋಯೆಬ್ ಅಖ್ತರ್ ಪಾಕಿಸ್ತಾನ ಟೀಮ್ ಆಯ್ಕೆಗಾರರಾದ ಮೊಹಮ್ಮದ್ ವಾಸೀಂ ವಿರುದ್ಧ ಕಿಡಿಕಾರಿದ್ದಾರೆ. "ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ರಚಿಸಲಾಗಿರುವ ಪಾಕಿಸ್ತಾನ ತಂಡದ ಆಟಗಾರರ ಬದಲಾವಣೆ ಬಹು ಶೀಘ್ರದಲ್ಲಿಯೇ ನಡೆಯಲಿದೆ. ಇಂತಹ ಕೆಟ್ಟ ತಂಡವನ್ನು ಆಯ್ಕೆ ಮಾಡಿರುವ ಮೊಹಮ್ಮದ್ ವಾಸಿಂ ಓರ್ವ ಸಮಯದ ಗೊಂಬೆ ಅಷ್ಟೇ" ಎಂದು ಶೋಯೆಬ್ ಅಖ್ತರ್ ಕಿಡಿಕಾರಿದ್ದಾರೆ.
ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ಪಾಕಿಸ್ತಾನ ತಂಡ ಬಲಿಷ್ಠವಾಗಿರಬೇಕೆಂದರೆ ಈ ಕೆಳಕಂಡ ಎಲ್ಲಾ ಆಟಗಾರರು ಕೂಡ ತಂಡದಲ್ಲಿರಬೇಕು, ಈಗಿರುವ ತಂಡದೊಂದಿಗೆ ಟೂರ್ನಿಯಲ್ಲಿ ಭಾಗವಹಿಸಿದರೆ ಸೋಲು ಖಚಿತ ಎಂದು ಶೋಯೆಬ್ ಅಖ್ತರ್ ಅಭಿಪ್ರಾಯಪಟ್ಟಿದ್ದಾರೆ. ಬಾಬರ್ ಅಜಮ್, ಮೊಹಮ್ಮದ್ ಹಫೀಜ್, ಮೊಹಮ್ಮದ್ ರಿಜ್ವಾನ್, ಶೋಯೆಬ್ ಮಲಿಕ್, ಇಮಾದ್ ವಾಸಿಂ, ಶಾದಬ್ ಖಾನ್, ಶಾಹೀನ್ ಅಫ್ರಿದಿ, ಹಸನ್ ಅಲಿ, ಶಹನವಾಜ್ ದಹನಿ, ಫಹೀಮ್ ಅಶ್ರಫ್, ಮೊಹಮ್ಮದ್ ಅಮೀರ್, ಫಖರ್ ಜಮಾನ್, ಮತ್ತು ಹುಸೇನ್ ತಲತ್