ಕ್ರಿಕೆಟ್ ಜಗತ್ತಿನಲ್ಲಿ ಸೆಪ್ಟೆಂಬರ್ 13ರಂದು ನಡೆದದ್ದೇನು?

ಸೆಪ್ಟೆಂಬರ್ 13ರ ಸೋಮವಾರದಂದು ಕ್ರಿಕೆಟ್ ಜಗತ್ತಿನಲ್ಲಿ ಹಲವಾರು ಪ್ರಮುಖ ವಿದ್ಯಮಾನಗಳು ಜರುಗಿವೆ. ಒಂದೆಡೆ ಸಾಕಷ್ಟು ವಿವಾದಗಳಿಗೆ ಕಾರಣವಾಗಿರುವ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಮ್ಯಾಥ್ಯೂ ಹೇಡನ್ ಮತ್ತು ವೆರ್ನಾನ್ ಫಿಲಾಂಡರ್ ತರಬೇತುದಾರರಾಗಿ ಆಯ್ಕೆಯಾಗಿದ್ದಾರೆ. ಮತ್ತೊಂದೆಡೆ ಮುಂದುವರಿಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಭಾಗವಹಿಸಲು ಯುಎಇ ತಲುಪಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ಅಭ್ಯಾಸ ಪಂದ್ಯವೊಂದರಲ್ಲಿ ಕಾಣಿಸಿಕೊಂಡು ಸಾಕಷ್ಟು ಚರ್ಚೆಗಳಿಗೆ ಕಾರಣರಾಗಿದ್ದಾರೆ. ಹೀಗೆ ಸೆಪ್ಟೆಂಬರ್ 13ರ ಸೋಮವಾರದಂದು ಕ್ರಿಕೆಟ್ ಜಗತ್ತಿನಲ್ಲಿ ನಡೆದಿರುವ ಘಟನೆಗಳ ಕಿರು ನೋಟ ಈ ಕೆಳಕಂಡಂತಿದೆ ನೋಡಿ.
* ಮುಂದುವರಿಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಸವಾಲುಗಳನ್ನು ಎದುರಿಸಲಿದ್ದಾರೆ ಎಂದು ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚೆಗಷ್ಟೇ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಟವನ್ನಾಡಿ ಬಂದಿದ್ದು ಯಾವುದೇ ಟಿ ಟ್ವೆಂಟಿ ಪಂದ್ಯವನ್ನಾಡದೇ ನೇರವಾಗಿ ಮುಂದುವರಿಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ ಹಾಗೂ ಯಾವುದೇ ಕ್ರಿಕೆಟ್ ಪಂದ್ಯವನ್ನಾಡದೇ ಎಬಿ ಡಿವಿಲಿಯರ್ಸ್ ನೇರವಾಗಿ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಹೀಗಾಗಿ ಈ ಇಬ್ಬರಿಗೂ ಇತ್ತೀಚಿನ ದಿನಗಳಲ್ಲಿ ಟಿ ಟ್ವೆಂಟಿ ಕ್ರಿಕೆಟ್ ಪಂದ್ಯಗಳನ್ನಾಡಿರುವ ಅನುಭವವಿಲ್ಲದೇ ಇರುವುದರಿಂದ ಮುಂದುವರಿಯಲಿರುವ ಐಪಿಎಲ್ ಟೂರ್ನಿ ಇಬ್ಬರಿಗೂ ಕಠಿಣ ಸವಾಲಾಗಲಿದೆ ಎಂದು ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.
* ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ದಕ್ಷಿಣ ಆಫ್ರಿಕಾ ತಂಡ ಪ್ರಕಟವಾದ ನಂತರ ತಂಡದಲ್ಲಿ ಸ್ಥಾನ ಪಡೆದುಕೊಳ್ಳದೇ ಹೊರಬಿದ್ದು ಮನನೊಂದಿರುವ ಇಮ್ರಾನ್ ತಾಹಿರ್ 'ನನ್ನನ್ನು ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಆಯ್ಕೆ ಮಾಡಲಿಲ್ಲ ಎನ್ನುವುದರ ಕುರಿತು ನನಗೆ ಬೇಸರವಾಗುತ್ತಿಲ್ಲ, ಬದಲಾಗಿ ನನ್ನ ಕರೆ ಮತ್ತು ಸಂದೇಶಗಳಿಗೆ ಸ್ಪಂದಿಸದೆ ಕಡೆಗಣಿಸುತ್ತಿರುವುದು ತುಂಬಾ ಬೇಸರ ತಂದಿದೆ. ಈ ಹಿಂದೆ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಅವಕಾಶ ನೀಡುತ್ತೇವೆ ಎಂದು ಹೇಳಿದ್ದ ಗ್ರೇಮ್ ಸ್ಮಿತ್ ನಾನು ಕಳುಹಿಸಿದ ಹಲವಾರು ಮೊಬೈಲ್ ಸಂದೇಶಗಳಿಗೆ ಉತ್ತರವನ್ನು ನೀಡಿಲ್ಲ ಹಾಗೂ ಕೋಚ್ ಆಗಿ ಆಯ್ಕೆಯಾದ ಮಾರ್ಕ್ ಬೌಷರ್ ಕೂಡ ನನ್ನ ಕರೆಯನ್ನು ಸ್ವೀಕರಿಸದೇ ಕಡೆಗಣಿಸಿದರು. ದೇಶಕ್ಕಾಗಿ ನಾನು ಹತ್ತು ವರ್ಷಗಳ ಕಾಲ ಕ್ರಿಕೆಟ್ ಆಡಿದ್ದೇನೆ, ಅದಕ್ಕಾದರೂ ನನಗೆ ನೀಡಬೇಕಾದ ಗೌರವವನ್ನು ನೀಡಿ' ಎಂದು ಅಸಮಾಧಾನವನ್ನು ಹೊರಹಾಕಿದ್ದಾರೆ.
* ಈ ಬಾರಿಯ ಐಪಿಎಲ್ ಎರಡನೇ ಚರಣದ ಪಂದ್ಯಕ್ಕೂ ಮುನ್ನ ಹೆಚ್ಚಿನ ಬದಲಾವನೆಯಾಗಿರುವ ತಂಡ ಎಂದರೆ ಅದು ಆರ್ಸಿಬಿ. ವಿರಾಟ್ ಕೊಹ್ಲಿ ನೇತೃತ್ವದ ತಂಡ ಅರ್ಧಕ್ಕರ್ಧ ವಿದೇಶಿ ಆಟಗಾರರು ಐಪಿಎಲ್ನ ಉಳಿದ ಪಂದ್ಯಗಳಿಂದ ಹೊರಗುಳಿಯುವ ನಿರ್ಧಾರ ಮಾಡಿದ್ದಾರೆ. ಇವರಿಗೆ ಬದಲಿ ಆಟಗಾರರನ್ನು ಆರ್ಸಿಬಿ ಸೇರ್ಪಡೆಗೊಳಿಸಿದೆ. ಹಾಗಿದ್ದರೂ ಕೊಹ್ಲಿ ಪಡೆ ಹೆಚ್ಚಿನ ಸಮಸ್ಯೆಯನ್ನು ಎದುರಿಸಲಿದೆ ಎಂಬ ಅಭಿಪ್ರಾಯವನ್ನು ಚೋಪ್ರ ವ್ಯಕ್ತಪಡಿಸಿದ್ದಾರೆ. ಡೇನಿಯಲ್ ಸ್ಯಾಮ್ಸ್, ಆಡಮ್ ಜಂಪಾ, ಕೇನ್ ರಿಚರ್ಡ್ಸನ್, ಫಿನ್ ಅಲೆನ್ ಮತ್ತು ಸ್ಕಾಟ್ ಕುಗೆಲೆಜ್ನ್ ಐಪಿಎಲ್ನಿಂದ ಹೊರಗುಳಿದಿದ್ದು ಇವರ ಸ್ಥಾನಕ್ಕೆ ಆರ್ಸಿಬಿ ಟಿಮ್ ಡೇವಿಡ್, ದುಷ್ಮಂತ ಚಮೀರಾ, ವನಿಂದು ಹಸರಂಗ ಮತ್ತು ಜಾರ್ಜ್ ಗಾರ್ಟನ್ ಅವರನ್ನು ಸೇರ್ಪಡೆಗೊಳಿಸಿದೆ.
* ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಪಂದ್ಯ ಟೆಸ್ಟ್ ಆರಂಭಗೊಳ್ಳದೇ ಸ್ಥಗಿತಗೊಂಡ ಬಳಿಕ ಇಂಗ್ಲೆಂಡ್ ರದ್ದಾದ ಪಂದ್ಯದಿಂದ ಉಂಟಾಗಿರುವ ನಷ್ಟವನ್ನು ತುಂಬಲು ವಿಮೆಯ ಹಣ ಪಡೆಯಲು ಪ್ರಯತ್ನಿಸುತ್ತಿದೆಯೇ ಹೊರತು ಪುನಃ ಪಂದ್ಯವನ್ನು ನಡೆಸುವ ಯಾವುದೇ ಚಿಂತನೆಯನ್ನೂ ಇಟ್ಟುಕೊಂಡಿಲ್ಲ ಎಂದು ಸಲ್ಮಾನ್ ಬಟ್ ಕಿಡಿಕಾರಿದರು.
* ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ರಮೀಜ್ ರಾಜ ಅಧಿಕೃತವಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ಮುಂದಿನ ಮೂರು ವರ್ಷಗಳ ಕಾಲ ರಮೀಜ್ ರಾಜ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥನಾಗಿ ಸೇವೆ ಸಲ್ಲಿಸಲಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಎಲೆಕ್ಷನ್ ಕಮಿಶನರ್ ಹಾಗೂ ಮಾಜಿ ನ್ಯಾಯಾಧೀಶರಾದ ಶೇಕ್ ಅಜ್ಮತ್ ಅಧ್ಯಕ್ಷತೆಯಲ್ಲಿ ನ್ಯಾಶನಲ್ ಹೈ ಪರ್ಫಾರ್ಮೆನ್ಸ್ ಸೆಂಟರ್ನಲ್ಲಿ ವಿಶೇಷ ಸಭೆಯನ್ನು ನಡೆಸಿದ ಬಳಿಕ ರಮೀಜ್ ರಾಜಾ ಪಿಸಿಬಿ ಅಧ್ಯಕ್ಷರಾಗಿ ಅಧಿಕಾರವನ್ನು ವಹಿಸಿಕೊಂಡಿದ್ದಾರೆ
* ಮತ್ತೊಂದೆಡೆ ಈ ದಿನದ ಬೆಳ್ಳಂಬೆಳಿಗ್ಗೆ ವಿರಾಟ್ ಕೊಹ್ಲಿ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಗಿದ ನಂತರ ಏಕದಿನ ಮತ್ತು ಟಿ ಟ್ವೆಂಟಿ ತಂಡಗಳ ನಾಯಕತ್ವದಿಂದ ಕೆಳಗಿಳಿಯಲಿದ್ದು ನೂತನ ನಾಯಕನಾಗಿ ರೋಹಿತ್ ಶರ್ಮಾ ನೇಮಕವಾಗಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಹೀಗೆ ಟೀಮ್ ಇಂಡಿಯಾದ ನಾಯಕತ್ವ ಬದಲಾವಣೆ ಕುರಿತು ಸುದ್ದಿ ಹರಿದಾಡುತ್ತಿದ್ದಂತೆ ಎಚ್ಚೆತ್ತ ಬಿಸಿಸಿಐ ಟಿ ಟ್ವೆಂಟಿ ಟೂರ್ನಿ ಮುಗಿದ ನಂತರವೂ ಕೂಡ ನಾಯಕತ್ವದ ಬದಲಾವಣೆ ಮಾಡುವ ಕುರಿತು ಯಾವುದೇ ರೀತಿಯ ಚರ್ಚೆಗಳು ಆಗಿಲ್ಲ ಸದ್ಯ ಹರಿದಾಡುತ್ತಿರುವ ಸುದ್ದಿ ಸರಿಯಾದದ್ದಲ್ಲ ಎಂದು ಸ್ಪಷ್ಟನೆಯನ್ನು ನೀಡುವುದರ ಮೂಲಕ ವಿರಾಟ್ ಕೊಹ್ಲಿಯೇ ಎಲ್ಲಾ ಆವೃತ್ತಿಗಳಲ್ಲೂ ಟೀಮ್ ಇಂಡಿಯಾದ ನಾಯಕನಾಗಿ ಇರಲಿದ್ದಾರೆ ಎಂಬುದನ್ನು ಖಚಿತಪಡಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications