ಸೆಪ್ಟೆಂಬರ್ 15ರ ಬುಧವಾರದಂದು ಕ್ರಿಕೆಟ್ ಜಗತ್ತಿನಲ್ಲಿ ಹಲವಾರು ವಿದ್ಯಮಾನಗಳು ಜರುಗಿದ್ದು ಒಂದೆಡೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಆಟಗಾರ ಸ್ಯಾಮ್ ಕರನ್ ಇಂದು ಯುಎಇ ತಲುಪಿದ್ದು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೇರಿಕೊಂಡಿದ್ದಾರೆ. ಮತ್ತೊಂದೆಡೆ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಚುಟುಕು ಕ್ರಿಕೆಟ್ನ ಶ್ರೇಯಾಂಕಪಟ್ಟಿಯಲ್ಲಿ ಸಕಾರಾತ್ಮಕ ಸಾಧನೆ ಮಾಡಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗೆ ಕ್ರಿಕೆಟ್ ಜಗತ್ತಿನಲ್ಲಿ ಸೆಪ್ಟೆಂಬರ್ 15ರ ಬುಧವಾರದಂದು ನಡೆದಿರುವ ಘಟನೆಗಳ ಕಿರುನೋಟ ಈ ಕೆಳಕಂಡಂತಿದೆ ನೋಡಿ..
* ಮುಂದುವರಿಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಯ್ಕೆಯಾಗಿರುವ ವನಿಂದು ಹಸರಂಗ ಮತ್ತು ದುಷ್ಮಂತ ಚಮೀರ ಯುಎಇ ಪ್ರಯಾಣವನ್ನು ಕೈಗೊಂಡಿದ್ದು ಬೆಂಗಳೂರು ತಂಡವನ್ನು ಸೇರಿಕೊಂಡಿದ್ದಾರೆ.
* ಭಾರತ ಹಾಗೂ ಪಾಕಿಸ್ತಾನ ತಂಡಗಳು ಈ ಬಾರಿ ದುಬೈನ ದುಬೈ ಇಂಟರ್ನ್ಯಾಶನಲ್ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಲಿದೆ. ಅಕ್ಟೋಬರ್ 24ರಂದು ನಡೆಯಲಿರುವ ಈ ಪಂದ್ಯದಲ್ಲಿ ಭಾರತ ತಂಡ ಯಾವ ರೀತಿಯ ಆಡುವ ಬಳಗದೊಂದಿಗೆ ಕಣಕ್ಕಿಳಿಯಬೇಕು ಎಂಬುದಕ್ಕೆ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಉತ್ತರವನ್ನು ನೀಡಿದ್ದಾರೆ. ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಭಾರತದ ಬಲಿಷ್ಠ ಆಡುವ ಬಳಗ ಹೇಗಿರಬೇಕು ಎಂದು ಗಂಭೀರ್ ಹೆಸರಿಸಿದ್ದಾರೆ. ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಹೆಸರಿಸಿದ ಭಾರತೀಯ ತಂಡದ ಬ್ಯಾಟಿಂಗ್ ವಿಭಾಗದಲ್ಲಿ ಯಾವುದೇ ಅಚ್ಚರಿಯ ಬದಲಾವಣೆಗಳು ಇಲ್ಲ. ಆರಂಭಿಕರಾಗಿ ಭಾರತದ ಖಾಯಂ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಅವರನ್ನು ಗಂಭೀರ್ ಹೆಸರಿಸಿದ್ದಾರೆ. ಮೂರನೇ ಕ್ರಮಾಂಕದಲ್ಲಿ ನಾಯಕ ವಿರಾಟ್ ಕೊಹ್ಲಿಯನ್ನು ಸೂಚಿಸಿದರೆ ನಾಲ್ಕನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಹಾಗೂ ಐದನೇ ಕ್ರಮಾಂಕಕ್ಕೆ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ಹೆಸರು ಸೂಚಿಸಿದ್ದಾರೆ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಸಂಸದ ಗೌತಮ್ ಗಂಭೀರ್.
* ಕ್ರಿಕೆಟಿಗ ಕೃಷ್ಣಪ್ಪ ಗೌತಮ್ ಮತ್ತು ಅವರ ಪತ್ನಿ ಅರ್ಚನಾ ಸುಂದರ್ ತಂದೆ ತಾಯಿ ಆಗುತ್ತಿರುವ ಖುಷಿಯ ವಿಚಾರವನ್ನು ಕೃಷ್ಣಪ್ಪ ಗೌತಮ್ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಕೆಲವೊಂದಷ್ಟು ಫೋಟೋಗಳನ್ನು ಅಪ್ ಲೋಡ್ ಮಾಡುವ ಮೂಲಕ ಹಂಚಿಕೊಂಡಿದ್ದಾರೆ. ವಿಶೇಷವೆಂದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಜೆರ್ಸಿಯನ್ನು ಧರಿಸಿ ಕೃಷ್ಣಪ್ಪ ಗೌತಮ್ ಮತ್ತು ಅರ್ಚನಾ ಸುಂದರ್ ಫೋಟೋಗೆ ಪೋಸ್ ನೀಡಿದ್ದಾರೆ.
* ಹರ್ಷಲ್ ಪಟೇಲ್ ಇಲೆವೆನ್ ಮತ್ತು ದೇವದತ್ ಪಡಿಕ್ಕಲ್ ಇಲೆವೆನ್ ತಂಡಗಳ ನಡುವೆ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭ್ಯಾಸ ಪಂದ್ಯದಲ್ಲಿ ಎಬಿ ಡಿವಿಲಿಯರ್ಸ್ 46 ಎಸೆತಗಳಲ್ಲಿ ಶತಕವನ್ನು ಪೂರೈಸುವುದರ ಮೂಲಕ ಗಮನ ಸೆಳೆದಿದ್ದಾರೆ. ಕೇವಲ 46 ಎಸೆತಗಳಲ್ಲಿ ಶತಕವನ್ನು ಬಾರಿಸುವ ಎಬಿ ಡಿವಿಲಿಯರ್ಸ್ 10 ಸಿಕ್ಸರ್ ಮತ್ತು 7 ಬೌಂಡರಿಗಳನ್ನು ಸಿಡಿಸಿದರು. ಮೊದಲ 19 ಎಸೆತಗಳಲ್ಲಿ 19 ರನ್ ಗಳಿಸಿದ್ದ ಎಬಿ ಡಿವಿಲಿಯರ್ಸ್ 46 ಎಸೆತಗಳನ್ನು ಎದುರಿಸುವಷ್ಟೊತ್ತಿಗೆ 104 ರನ್ ಬಾರಿಸಿದ್ದಾರೆ. ಹೀಗೆ ಅಭ್ಯಾಸ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿರುವ ಎಬಿ ಡಿವಿಲಿಯರ್ಸ್ ಮುಂದಿನ ಪಂದ್ಯಗಳಲ್ಲಿ ಆಡುವ ಎದುರಾಳಿಗಳಿಗೆ ಎಚ್ಚರಿಕೆಯ ಮುನ್ಸೂಚನೆಯನ್ನು ನೀಡಿದ್ದಾರೆ. ಇನ್ನು ಎಬಿಡಿ ಜೊತೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮತ್ತೊಬ್ಬ ಆಟಗಾರ ಕೆಎಸ್ ಭರತ್ 47 ಎಸೆತಗಳಲ್ಲಿ 95 ರನ್ ಬಾರಿಸುವ ಮೂಲಕ ಅಮೋಘ ಪ್ರದರ್ಶನವನ್ನು ನೀಡಿದ್ದಾರೆ ಹಾಗೂ ಮೊಹಮ್ಮದ್ ಅಜರುದ್ದೀನ್ 43 ಎಸೆತಗಳಲ್ಲಿ 66 ರನ್ ಬಾರಿಸಿ ಗಮನ ಸೆಳೆದರು.
* ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಚುಟುಕು ಕ್ರಿಕೆಟ್ನ ಶ್ರೇಯಾಂಕಪಟ್ಟಿಯಲ್ಲಿ ಸಕಾರಾತ್ಮಕ ಸಾಧನೆ ಮಾಡಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದ್ದಾರೆ. ನಾಲ್ಕನೇ ಸ್ಥಾನದಲ್ಲಿದ್ದ ನ್ಯೂಜಿಲೆಂಡ್ ತಂಡದ ಆಟಗಾರ ಡೇವಿಡ್ ಕಾನ್ವೆಯನ್ನು ಕೊಹ್ಲಿ ಹಿಂದಿಕ್ಕುವ ಮೂಲಕ ಈ ಸಾಧನೆ ಮಾಡಿದ್ದಾರೆ.