
ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಯಲ್ಲಿ ಮೂರು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಇತಿಹಾಸದಲ್ಲೇ ಮೊದಲ ಬಾರಿಗೆ ಲೀಗ್ ಹಂತದಲ್ಲೇ ತನ್ನ ಹೋರಾಟ ಮುಗಿಸಿದೆ. ಪಾಯಿಂಟ್ಸ್ ಟೇಬಲ್ನಲ್ಲಿ ಏಳನೇ ಸ್ಥಾನಿಯಾಗಿ ಸ್ಪರ್ಧೆಯನ್ನು ಕೊನೆಗೊಳಿಸಿದೆ.
ಪ್ಲೇ ಆಫ್ ಕನಸು ಕೈ ತಪ್ಪಿ ಹೋದ ಬಳಿಕ ಆಡಿದ ಮೂರು ಪಂದ್ಯಗಳನ್ನು ಸಿಎಸ್ಕೆ ಗೆದ್ದು ಬೀಗುವ ಮೂಲಕ ಟೂರ್ನಿಯಿಂದ ಹೊರನಡೆಯಿತು. ಆಡಿರುವ 14 ಪಂದ್ಯಗಳಲ್ಲಿ ಆರು ಗೆಲುವು ಮತ್ತು ಎಂಟು ಪಂದ್ಯಗಳಲ್ಲಿ ಸೋಲನ್ನು ಕಾಣುವ ಮೂಲಕ 12 ಪಾಯಿಂಟ್ಗಳೊಂದಿಗೆ ಧೋನಿ ಪಡೆ ಟೂರ್ನಿಗೆ ಗುಡ್ಬೈ ಹೇಳಿದೆ.
ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಎಂ.ಎಸ್ ಧೋನಿ ತನ್ನೆಲ್ಲಾ ಅಭಿಮಾನಿಗಳಿಗೆ ಸಂತೋಷದ ಸುದ್ದಿ ನೀಡಿದರು. ಟಾಸ್ ಸಮಯದಲ್ಲಿ ಡ್ಯಾನಿ ಮಾರಿಸನ್ ಅವರೊಂದಿಗೆ ಮಾತನಾಡುವಾಗ, ಮಾಜಿ ಭಾರತೀಯ ನಾಯಕ ಇದು ಅವರ ಕೊನೆಯ ಹಳದಿ ಜೆರ್ಸಿಯ ಪಂದ್ಯವೇ ಎಂದು ಕೇಳಿದಾಗ "ಖಂಡಿತವಾಗಿಯೂ ಅಲ್ಲ" ಎಂದು ಹೇಳಿದ್ದಾರೆ. ಈ ಮೂಲಕ ಧೋನಿ ಮುಂಬರುವ ಐಪಿಎಲ್ ಸೀಸನ್ನಲ್ಲಿ ಸಿಎಸ್ಕೆ ತಂಡವನ್ನು ಮುನ್ನೆಡಸಲಿದ್ದಾರೆ.
ಎಂ.ಎಸ್ ಧೋನಿ ಇದೇ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದರು. ಹೀಗಾಗಿ ಈ ಬಾರಿಯ ಐಪಿಎಲ್ ಸೀಸನ್ ಅವರಿಗೆ ಕೊನೆಯದ್ದು ಎಂದೇ ಊಹಾಪೋಹಗಳು ಹರಿದಾಡಿದ್ದವು. ಪರಿಣಾಮ ಬಹುತೇಕ ಪಂದ್ಯ ಮುಗಿದ ಬಳಿಕ ಎದುರಾಳಿ ತಂಡದ ಅನೇಕ ಯುವ ಆಟಗಾರರು ಎಂ.ಎಸ್ ಧೋನಿ ಅವರಿಂದ ಜೆರ್ಸಿಯನ್ನು ನೆನಪಿನ ಕಾಣಿಕೆಯಾಗಿ ಪಡೆದಿದ್ದರು. ಆದರೆ ಧೋನಿ ಎಲ್ಲಾ ಊಹಾಪೋಹಗಳಿಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ.
ಧೋನಿ ನಿವೃತ್ತಿ ಕುರಿತು ಡ್ಯಾನಿ ಮಾರಿಸನ್ ಕೇಳಿದ ಪ್ರಶ್ನೆಗೆ ಧೋನಿಯ ಉತ್ತರದ ಕುರಿತು ಚರ್ಚೆ ನಡೆಸಿದ ಸಿಎಸ್ಕೆ ಬೌಲರ್ ಲುಂಗಿ ಎನ್ಗಿಡಿ ಮತ್ತು ಫಾಫ್ ಡುಪ್ಲೆಸಿಸ್, ಸಿಎಸ್ಕೆ ತಂಡದಲ್ಲಿ ಧೋನಿಯ ಪ್ರಾಮುಖ್ಯತೆ ಕುರಿತು ಮಾತನಾಡಿದರು.
ಸಿಎಸ್ಕೆಗೆ ಎಂ.ಎಸ್ ಧೋನಿ ಏನು ಎಂಬುದರ ಬಗ್ಗೆ ಮಾತನಾಡಿದ ಡುಪ್ಲೆಸಿಸ್ ''ನೀವು ಸಿಎಸ್ಕೆ ಎಂದು ಹೇಳಿದಾಗ, ನೀವು ಎಂಎಸ್ ಧೋನಿಯ ಬಗ್ಗೆ ಯೋಚಿಸುತ್ತೀರಿ ಮತ್ತು ಐಪಿಎಲ್ಗೆ ಎಂಎಸ್ ಧೋನಿ ಆಡಲು ಅಗತ್ಯವಿದೆ. ಅಂತಹ ದೊಡ್ಡ ಆಟಗಾರ ಅವರು. ಅಭಿಮಾನಿಗಳು ಅವರನ್ನು ತುಂಬಾ ಪ್ರೀತಿಸುತ್ತಾರೆ, " ಎಂದು ದಕ್ಷಿಣ ಆಫ್ರಿಕಾ ಆಟಗಾರ ಹೇಳಿದ್ದಾರೆ.