ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ರ ಟೂರ್ನಿ ಆರಂಭಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಫೈಟ್ ಆರಂಭವಾಗಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ಆಗಮನಿಸಿದ ಸಿಎಸ್ಕೆ ನಾಯಕ ಋತುರಾಜ್ ಗಾಯಕ್ವಾಡ್ ಆರ್ಸಿಬಿ ಅಭಿಮಾನಿಗಳನ್ನು ಅವಮಾನಿಸಿದ್ದಾರೆ. ಇದಾದ ನಂತರ ಋತುರಾಜ್ ಗಾಯಕ್ವಾಡ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಅಲ್ಲದೆ, ಋತುರಾಜ್ ಗಾಯಕ್ವಾಡ್ ಕುರಿತು ಆರ್ಸಿಬಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡುತ್ತಿದ್ದಾರೆ.
ಋತುರಾಜ್ ಗಾಯಕ್ವಾಡ್ ಆರ್ಸಿಬಿ ಅಭಿಮಾನಿಗಳ ವಿರುದ್ಧ ಸುಳ್ಳು ಆರೋಪ ಮಾಡಿರುವುದು ಭಾರೀ ಆಕ್ರೋಶಕ್ಕೆ ದಾರಿ ಮಾಡಿಕೊಟ್ಟಿದೆ. ಕಾರ್ಯಕ್ರಮವೊಂದರ ವೇಳೆ ಋತುರಾಜ್ ಗಾಯಕ್ವಾಡ್ ಮಾಡಿರುವ ಆರೋಪದ ವಿಡಿಯೋ ಸಾಮಾಜಿಕ ಜಾಲತಾಣಗಳನ್ನು ಸಖತ್ ಸದ್ದು ಮಾಡುತ್ತಿದೆ.

ಬೆಂಗಳೂರಿನಲ್ಲಿ ನಡೆದ ಖಾಸಗಿ ಕಂಪನಿಯ ಕಾರ್ಯಕ್ರಮವೊಂದಕ್ಕೆ ಋತುರಾಜ್ ಗಾಯಕ್ವಾಡ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ವೇದಿಕೆ ಮೇಲೆ ಇದ್ದ ಗಾಯಕ್ವಾಡ್ ಅವರನ್ನು ಕಾರ್ಯಕ್ರಮದ ನಿರೂಪಕರು ಮಾತನಾಡಿಸಿದ್ದು, ಪ್ರಶ್ನೆಯೊಂದನ್ನು ಕೇಳಲಾಗಿದೆ. ಇದಕ್ಕೆ, ಪ್ರತಿಕ್ರಿಯಿಸಿದ ಗಾಯಕ್ವಾಡ್ ಮಾತನಾಡಲು ಮುಂದಾದಾಗ ಮೈಕ್ ಆಫ್ ಆಗಿತ್ತು. ಇದರಿಂದ ಋತುರಾಜ್ ಕೊಂಚ ಇರಿಸು ಮುರಿಸುಗೊಂಡರು. ತಕ್ಷಣ ಎಚ್ಚೆತ್ತ ನಿರೂಪಕರು 'ಋತುರಾಜ್ ಅವರ ಮೈಕ್ ಅನ್ನು ನೀವು ಹೇಗೆ ಆಫ್ ಮಾಡುತ್ತೀರಾ ಎಂದು ಮೈಕ್ ಅಪ್ರೇಟರ್ಗೆ ಕೇಳಿದರು. ಈ ವೇಳೆ ಕೂಡಲೇ ಪ್ರಕ್ರಿಯಿಸಿದ ಗಾಯಕ್ವಾಡ್, 'ಬಹುಶಃ ಆರ್ಸಿಬಿಯವರು ಯಾರೋ ಮೈಕ್ ಅನ್ನು ಆಫ್ ಮಾಡಿರಬೇಕು ಎಂದು ಹೇಳಿದರು.
ಋತುರಾಜ್ ಗಾಯಕ್ವಾಡ್ ಹೇಳಿಕೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆರ್ಸಿಬಿ ಅಭಿಮಾನಿಗಳು ಋತುರಾಜ್ ಗಾಯಕ್ವಾಡ್ ವಿರುದ್ಧ ಸಿಟ್ಟಿಗೆದ್ದಿದ್ದಾರೆ. ಘಟನೆ ಬಗ್ಗೆ ಕಾಮೆಂಟ್ ಮಾಡಿರುವ ಆರ್ಸಿಬಿ ಅಭಿಮಾನಿಗಳು, ಚಿನ್ನಸ್ವಾಮಿ ಮೈದಾನದ ಮುಂದಿನ ವಾಟರ್ ಬಾಟಲ್ ಸಪ್ಲೈಯರ್ ಎಂದು ಗಾಯಕ್ವಾಡ್ ಕಾಲೆಳೆದಿದ್ದಾರೆ. ಇಷ್ಟಕ್ಕೂ ಸುಮ್ಮನಾಗದ ಆರ್ಸಿಬಿ ಅಭಿಮಾನಿಗಳು ಬಿಎಂಟಿಸಿ ಬಸ್ ಪ್ರಯಾಣಿಕರಿಗೆ ವಾಟರ್ ಬಾಟಲ್ ಮಾರುತ್ತಿರುವ ರೀತಿ ಗಾಯಕ್ವಾಡ್ ಅವರ ಫೋಟೋವೊಂದನ್ನು ಎಡೀಟ್ ಮಾಡಿ ವೈರಲ್ ಮಾಡುತ್ತಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ ಆರ್ಸಿಬಿ ಮತ್ತು ಸಿಎಸ್ಕೆ ತಂಡಗಳ ನಡುವಿನ ಪಂದ್ಯ ರೋಚಕತೆ ಜೊತೆಗೆ ಭಾರೀ ಕೂತುಹಲ ಮೂಡಿಸಿರುತ್ತದೆ. ಮೈದಾನದಲ್ಲಿ ಸಿಎಸ್ಕೆ ಎದುರು ಆರ್ಸಿಬಿ ಹಲವು ಪಂದ್ಯಗಳನ್ನು ಸೋತಿರಬಹುದು. ಆದರೆ ಮೈದಾನದ ಹೊರೆಗೆ ಆರ್ಸಿಬಿ ಅಭಿಮಾನಿಗಳು ಎಂದಿಗೂ ಸಿಎಸ್ಕೆ ಅಭಿಮಾನಿಗಳ ಮುಂದೆ ಸೋತಿಲ್ಲ. ಸಿಎಸ್ಕೆ ಅಭಿಮಾನಿಗಳ ಕಾಲೆಳೆಯುವಲ್ಲಿ ಆರ್ಸಿಬಿ ಫ್ಯಾನ್ಸ್ ಮೇಲುಗೈ ಸಾಧಿಸಿದ್ದಾರೆ. ಐಪಿಎಲ್ 2024ರ ಕೊನೆ ಲೀಗ್ ಹಂತದ ಪಂದ್ಯದಲ್ಲಿ ಸಿಎಸ್ಕೆ ತಂಡವನ್ನು ಆರ್ಸಿಬಿ ಹೀನಾಯವಾಗಿ ಸೋಲಿಸಿ ಪ್ಲೇ ಆಫ್ ಪ್ರವೇಶಿಸಿತ್ತು. ಅದರೆ ಆರ್ಸಿಬಿ ಪ್ಲೇ ಆಫ್ನಲ್ಲಿ ಸೋಲು ಕಂಡಿತ್ತು.