ಶನಿವಾರ, ಸೆಪ್ಟೆಂಬರ್ 2ರಂದು ಕ್ಯಾಂಡಿಯ ಪಲ್ಲೆಕೆಲೆ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2023ರ ಏಷ್ಯಾ ಕಪ್ ಪಂದ್ಯಾವಳಿಯ ಹೈ-ವೋಲ್ಟೇಜ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನದ ನಡುವಿನ ಹಣಾಹಣಿ ತೀವ್ರ ಕುತೂಹಲ ಮೂಡಿಸಿದೆ.
ಉಭಯ ದೇಶಗಳ ಅಭಿಮಾನಿಗಳು ಮಾತ್ರವಲ್ಲದೆ, ವಿಶ್ವದ ಕ್ರಿಕೆಟ್ ಪ್ರೇಮಿಗಳು ಭಾರತ ಮತ್ತು ಪಾಕಿಸ್ತಾನ ಪಂದ್ಯವನ್ನು ಅತ್ಯಂತ ಕಾತರದಿಂದ ವೀಕ್ಷಿಸುತ್ತಿದ್ದಾರೆ.
ಆದರೆ, ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರ ಗಮನ ಆಟದ ಮೇಲಿರದೆ, ಏಕಾಏಕಿ ಕ್ಯಾಮೆರಾಮನ್ ಕಡೆ ತಿರುಗಿತಲ್ಲದೆ, ಕೋಪಗೊಂಡ ಘಟನೆಯೂ ನಡೆಯಿತು.

ಭಾರತ ತಂಡ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಮಳೆ ಬಂದು ಪಂದ್ಯವನ್ನು ಸ್ಥಗಿತಗೊಳಿಸಿತು. ಆಗ ರೋಹಿತ್ ಶರ್ಮಾ ಪೆವಿಲಿಯನ್ನಲ್ಲಿ ಕೂತು ಮೈದಾನಕ್ಕೆ ಕವರ್ ಮಾಡಿದ್ದರ ಕುರಿತು ಮಾತನಾಡಿಕೊಳ್ಳುತ್ತಿದ್ದರು. ಆಗ ಕ್ಯಾಮೆರಾಮನ್ ಕ್ಯಾಮೆರಾ ಹಿಡಿದಾಗ ರೋಹಿತ್ ಶರ್ಮಾ ಈ ರೀತಿ ಪ್ರತಿಕ್ರಿಯಿಸಿದರು.
ರೋಹಿತ್ ಶರ್ಮಾ ವಿಕೆಟ್ ಒಪ್ಪಿಸಿದ ಬಳಿಕ ಭಾರತ ತಂಡದ ಬ್ಯಾಟಿಂಗ್ ಕ್ರಮಾಂಕದ ಪತನ ಆರಂಭವಾಯಿತು. ಶಾಹೀನ್ ಅಫ್ರಿದಿಗೆ ವಿಕೆಟ್ ಒಪ್ಪಿಸುವ ಮೊದಲು 22 ಎಸೆತಗಳಲ್ಲಿ ಕೇವಲ 11 ರನ್ ಗಳಿಸಿದರು.
ಇದಕ್ಕೂ ಮುನ್ನ ಮಳೆಯ ವಿರಾಮದ ನಂತರ, ರೋಹಿತ್ ಶರ್ಮಾ ತನ್ನ ಇನ್ನಿಂಗ್ಸ್ ಪುನರಾರಂಭಿಸಲು ತಯಾರಿ ನಡೆಸುತ್ತಿದ್ದಾಗ, ಡಗೌಟ್ನಲ್ಲಿ ಕ್ಯಾಮರಾಮ್ಯಾನ್ ಕಡೆಗೆ ತಮ್ಮ ಹತಾಶೆಯ ಕೋಪ ತೋರಿಸುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಶೀಘ್ರವಾಗಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಭಾರತೀಯ ನಾಯಕನ ಹತಾಶೆಯನ್ನು ಪ್ರದರ್ಶಿಸುತ್ತದೆ.
ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ, ಆರಂಭದಿಂದಲ್ಲಿ ಎದುರಾಳಿ ತಂಡದ ಬೌಲಿಂಗ್ ದಾಳಿಗೆ ತೀವ್ರ ಸಂಕಷ್ಟಕ್ಕೆ ಸಿಲುಕಿತು.
ಭಾರತದ ಅಗ್ರ ಕ್ರಮಾಂಕದ ಆಟಗಾರರಾದ ಶುಭ್ಮನ್ ಗಿಲ್ (10 ರನ್), ವಿರಾಟ್ ಕೊಹ್ಲಿ (4 ರನ್) ಮತ್ತು ಶ್ರೇಯಸ್ ಅಯ್ಯರ್ (14 ರನ್) ಗಮನಾರ್ಹ ಪ್ರಭಾವ ಬೀರಲು ವಿಫಲರಾದರು.
ಪಾಕಿಸ್ತಾನ ತಂಡದ ವೇಗಿ ಜೋಡಿಯಾದ ಹ್ಯಾರಿಸ್ ರೌಫ್ ಮತ್ತು ಶಾಹೀನ್ ಅಫ್ರಿದಿ ಮೋಡ ಕವಿದ ವಾತಾವರಣವನ್ನು ಸದುಪಯೋಗಪಡಿಸಿಕೊಂಡರು. ಭಾರತ ತಂಡ ಮೊದಲ 17 ಓವರ್ಗಳಲ್ಲಿ 4 ವಿಕೆಟ್ಗೆ 66 ರನ್ ಗಳಿಸಿತು.
ರೋಹಿತ್ ಶರ್ಮಾ ಔಟಾದ ನಂತರ ಪಂದ್ಯವು ಪಾಕಿಸ್ತಾನದ ಪರವಾಗಿ ತಿರುಗಿತು. ಶಾಹೀನ್ ಅಫ್ರಿದಿ ತನ್ನ ಪ್ರಭಾವಶಾಲಿ ಬೌಲಿಂಗ್ ಅನ್ನು ಮುಂದುವರೆಸಿದರು ಮತ್ತು ವಿರಾಟ್ ಕೊಹ್ಲಿ ರೂಪದಲ್ಲಿ ನಿರ್ಣಾಯಕ ವಿಕೆಟ್ ಪಡೆದರು.
ಹ್ಯಾರಿಸ್ ರೌಫ್ ಕೂಡ ಶುಭ್ಮನ್ ಗಿಲ್ಗೆ ಪೆವಿಲಿಯನ್ ದಾರಿ ತೋರಿಸಿದರು. ಇದು ಭಾರತ ತಂಡದ ಭರವಸೆಯನ್ನು ಮತ್ತಷ್ಟು ಕೆಡಿಸಿತು. ಶ್ರೇಯಸ್ ಅಯ್ಯರ್ ಅವರನ್ನು ಔಟ್ ಮಾಡಿದ ಹ್ಯಾರಿಸ್ ರೌಫ್ ಭಾರತ ತಂಡಕ್ಕೆ ಮತ್ತೊಂದು ಆಘಾತ ನೀಡಿದರು.
ಆರಂಭಿಕ ಕುಸಿತದ ನಡುವೆ ಮಧ್ಯಮ ಕ್ರಮಾಂಕದಲ್ಲಿ ಇಶಾನ್ ಕಿಶನ್ ಮತ್ತು ಹಾರ್ದಿಕ್ ಪಾಂಡ್ಯ ಭಾರತದ ಆಸರೆಯಾಗಿ ಹೊರಹೊಮ್ಮಿದರು. ಅತ್ಯಂತ ಆತ್ಮವಿಶ್ವಾಸದಿಂದ ಬ್ಯಾಟ್ ಬೀಸಿ ಅರ್ಧಶತಕ ದಾಖಲಿಸಿದರು.
ಉಪನಾಯಕ ಹಾರ್ದಿಕ್ ಪಾಂಡ್ಯ ಮತ್ತೊಂದು ತುದಿಯಿಂದ ಇಶಾನ್ ಕಿಶನ್ಗೆ ಸಾಥ್ ನೀಡಿದರು ಮತ್ತು ಭಾರತ ತಂಡ ಸ್ಪರ್ಧಾತ್ಮಕ ಮೊತ್ತಕ್ಕೆ ಕೊಂಡೊಯ್ಯುವಲ್ಲಿ ನೆರವಾದರು.