ಭಾರತದ ಎರಡನೇ ಅತ್ಯುನ್ನತ ಕ್ರೀಡಾ ಗೌರವವಾದ ಅರ್ಜುನ ಪ್ರಶಸ್ತಿಯನ್ನು ಹಿಂದಿನ ನಾಲ್ಕು ವರ್ಷಗಳ ಅವಧಿಯಲ್ಲಿ ಉತ್ತಮ ಪ್ರದರ್ಶನ ಮತ್ತು ನಾಯಕತ್ವ, ಕ್ರೀಡಾ ಮನೋಭಾವ ಮತ್ತು ಶಿಸ್ತಿನ ಪ್ರಜ್ಞೆಯ ಗುಣಗಳನ್ನು ಅವಲೋಕಿಸಿ ನೀಡಲಾಗುತ್ತದೆ.
ಮಂಗಳವಾರ, ಜನವರಿ 9ರಂದು ಭಾರತ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ಸೇರಿದಂತೆ, ದೇಶದ 26 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಆದಾಗ್ಯೂ, ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಅವರು ಭಾರತ ತಂಡಕ್ಕಾಗಿ ಎರಡು ಬಾರಿ ವಿಶ್ವಕಪ್ ಗೆದ್ದಿದ್ದಾರೆ ಮತ್ತು ಒಂದು ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಟ್ಟಿದ್ದಾರೆ. ಅಲ್ಲದೆ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅವರನ್ನು ಅತ್ಯಂತ ಯಶಸ್ವಿ ನಾಯಕನನ್ನಾಗಿ ಗುರುತಿಸಿದೆ. ಆದರೆ, ಅವರಿಗೆ ಅರ್ಜುನ ಪ್ರಶಸ್ತಿಯನ್ನು ಏಕೆ ನೀಡಲಾಗಿಲ್ಲ ಎಂದು ಕೆಲವು ಅಭಿಮಾನಿಗಳು ಆಶ್ಚರ್ಯಪಟ್ಟುಕೊಳ್ಳಬಹುದು.
ಅರ್ಜುನ ಪ್ರಶಸ್ತಿ ಪಡೆಯುವುದಕ್ಕೂ ಮುನ್ನವೇ ಖೇಲ್ ರತ್ನ ಪ್ರಶಸ್ತಿ ಪಡೆದಿರುವುದು ಎಂಎಸ್ ಧೋನಿ ಮಾತ್ರ ಎಂಬುದು ಸತ್ಯ. 2007ರಲ್ಲಿ ಅವರು ಅತ್ಯುನ್ನತ ಪ್ರಶಸ್ತಿಯಾದ ರಾಜೀವ್ ಗಾಂಧಿ ಖೇಲ್ ರತ್ನವನ್ನು ಪಡೆದರು, ಇದು ಭಾರತದ ಅತ್ಯುನ್ನತ ಕ್ರೀಡಾ ಗೌರವವಾಗಿದೆ.
ಹೀಗಾಗಿ, ಅತ್ಯುನ್ನತ ಕ್ರೀಡಾ ಗೌರವ ಪಡೆದ ಬಳಿಕ, ಅದಕ್ಕಿಂತ ಕೆಳಗಿನ ಪ್ರಶಸ್ತಿಯನ್ನು ನೀಡಲಾಗುವುದಿಲ್ಲ ಎಂಬುದು ಗಮನಾರ್ಹ ಸಂಗತಿ. ಎಂಎಸ್ ಧೋನಿ ಮೊದಲೇ ಖೇಲ್ ರತ್ನ ಪ್ರಶಸ್ತಿ ಪಡೆದ ನಂತರ, ಅರ್ಜುನ ಪ್ರಶಸ್ತಿಗೆ ಪರಿಗಣಿಸಲಾಗುವುದಿಲ್ಲ.
ಕಳೆದ ವರ್ಷ ಭಾರತದಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್ನಲ್ಲಿ ಮೊಹಮ್ಮದ್ ಶಮಿ 24 ವಿಕೆಟ್ಗಳೊಂದಿಗೆ, ಪಂದ್ಯಾವಳಿಯ ಪ್ರಮುಖ ವಿಕೆಟ್ ಟೇಕರ್ ಆಗಿ ಮುಗಿಸಿದರು ಮತ್ತು ಹಲವು ದಾಖಲೆಗಳನ್ನು ಮುರಿದರು. ಭಾರತ ತಂಡವು ಫೈನಲ್ಗೆ ತಲುಪುವಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸಿದ್ದರು.
ಮೊಹಮ್ಮದ್ ಶಮಿ ಅವರು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2021-23ರಲ್ಲಿ ರನ್ನರ್ ಅಪ್ ಆಗಿ ಮುಗಿಸಿದ ಭಾರತದ ತಂಡದ ಭಾಗವಾಗಿದ್ದರು.
ಕ್ರೀಡಾ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಅರ್ಜುನ ಪ್ರಶಸ್ತಿ ಸ್ವೀಕರಿಸಿದ ನಂತರ, ಭಾರತೀಯ ಕ್ರಿಕೆಟ್ನ ಹಲವು ಹಾಲಿ ಹಾಗೂ ಮಾಜಿ ಸದಸ್ಯರು ವೇಗಿ ಮೊಹಮ್ಮದ್ ಶಮಿ ಅವರನ್ನು ಬಿಸಿಐಐ ಅಭಿನಂದಿಸಿದೆ.
"ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರತಿಷ್ಠಿತ ಅರ್ಜುನ ಪ್ರಶಸ್ತಿಯನ್ನು ಪಡೆದ ಭಾರತ ತಂಡದ ವೇಗಿ ಮೊಹಮ್ಮದ್ ಶಮಿ ಅವರಿಗೆ ಸ್ಮರಣೀಯ ಕ್ಷಣವಾಗಿದೆ," ಎಂದು ಬರೆದುಕೊಂಡಿದೆ.
ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಮೊಹಮ್ಮದ್ ಶಮಿಯನ್ನು ಅಭಿನಂದಿಸಿದ್ದಾರೆ. ಮುಬಾರಕ್ ಹೋ ಲಾಲಾ ಎಂದು ವಿರಾಟ್ ಕೊಹ್ಲಿ ಬರೆದುಕೊಂಡಿದ್ದಾರೆ.
ವಿಶ್ವಕಪ್ ನಂತರ ಗಾಯದ ಹಿನ್ನಡೆಯನ್ನು ಎದುರಿಸುತ್ತಿದ್ದರೂ, ಮೊಹಮ್ಮದ್ ಶಮಿ ಅವರು ಆಟಕ್ಕೆ ಮರಳುವ ಬಗ್ಗೆ ಆಶಾವಾದಿಯಾಗಿದ್ದಾರೆ. ಶಮಿಯ ಪುನರ್ವಸತಿ ನಡೆಯುತ್ತಿದ್ದು, ಮುಂಬರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಫಿಟ್ ಆಗಿರುವ ವಿಶ್ವಾಸವನ್ನು ಆಟಗಾರ ವ್ಯಕ್ತಪಡಿಸಿದ್ದಾರೆ.