ಭಾರತ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿ ಬುಧವಾರದಿಂದ ಆರಂಭವಾಗಲಿದೆ. ಡೊಮೆನಿಕಾದಲ್ಲಿ ನಡೆಯಲಿರುವ ಈ ಪಂದ್ಯಕ್ಕೆ ಎರಡು ತಂಡಗಳು ಕೂಡ ಈಗಾಗಲೇ ಸಿದ್ಧತೆಯನ್ನು ನಡೆಸಿದ್ದು ಕಾದಾಟಕ್ಕೆ ಸಂಪೂರ್ಣವಾಗಿ ಸಜ್ಜಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯದ ಬಳಿಕ ಸುದೀರ್ಘ ಒಂದು ತಿಂಗಳ ವಿರಾಮದ ಬಳಿಕ ಭಾರತ ತಂಡ ಮತ್ತೊಂದು ಕದನಕ್ಕೆ ಸಿದ್ಧವಾಗಿದ್ದು ಈ ಪಂದ್ಯದ ಆಡುವ ಬಳಗದಲ್ಲಿ ಯಾವೆಲ್ಲಾ ಆಟಗಾರರು ಸ್ಥಾನವನ್ನು ಪಡೆದುಕೊಳ್ಳಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
ಇದೀಗ ಈ ಪಂದ್ಯದ ಆರಂಭದ ಹಿಂದಿನ ದಿನ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಪಂದ್ಯದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಡೊಮೆನಿಕಾದಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯಬಹುದಾದ ಟೀಮ್ ಇಂಡಿಯಾದ ಸಂಭಾವ್ಯ ಆಡುವ ಬಳಗವನ್ನು ಹರ್ಭಜನ್ ಸಿಂಗ್ ಹೆಸರಿಸಿದ್ದಾರೆ.

ಹರ್ಭಜನ್ ಸಿಂಗ್ ಟೀಮ್ ಇಂಡಿಯಾದ ಆರಂಭಿಕ ಸ್ಥಾನದಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳದೆ ಈ ತಂಡವನ್ನು ಹೆಸರಿಸಿದ್ದು ರೋಹಿತ್ ಶರ್ಮಾ ಹಾಗೂ ಶುಬ್ಮನ್ ಗಿಲ್ ಆರಂಭಿಕರಾಗಿ ಕಣಕ್ಕಿಳಿಯಬಹುದು ಎಂದಿದ್ದಾರೆ. ಇನ್ನು ಭಾರತ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿರುವ ಜಯ್ದೇವ್ ಉನಾದ್ಕಟ್ ಈ ಪಂದ್ಯದಲ್ಲಿ ಆಡುವ ಬಳಗದಲ್ಲಿ ಸ್ಥಾನವನ್ನು ಪಡೆದುಕೊಳ್ಳಬಹುದು ಎಂದಿದ್ದಾರೆ. ಕಳೆದ ಡಿಸೆಂಬರ್ನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಉನಾದ್ಕಟ್ ಆಡುವ ಬಳಗದಲ್ಲಿ ಅವಕಾಶವನ್ನು ಪಡೆದುಕೊಂಡಿದ್ದರು.
"ಶುಬ್ಮನ್ ಗಿಲ್ ಅವರು ನೀಡುತ್ತಿರುವ ಪ್ರದರ್ಶನದ ಕಾರಣದಿಂದಾಗಿ ಸಹಜವಾಗಿಯೇ ತಂಡದಲ್ಲಿ ಸ್ಥಾನ ಪಡೆದುಕೊಳ್ಳುತ್ತಾರೆ. ಅವರ ಕ್ರಮಾಂಕವನ್ನು ಕೂಡ ಬದಲಾಯಿಸುವಂತಿಲ್ಲ. ಯಶಸ್ವಿ ಜೈಸ್ವಾಲ್ ಅವರನ್ನು ಮೂರನೇ ಕ್ರಮಾಂಕದಲ್ಲಿ ಆಡಿಸಲು ಬಯಸುತ್ತೇನೆ. ಅವರು ಚೊಚ್ಚಲ ಪಂದ್ಯದಲ್ಲಿ ಸಾಕಷ್ಟು ರನ್ಗಳಿಸುವ ವಿಶ್ವಾಸವಿದೆ. ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯಾ ರಹಾನೆ 4 ಮತ್ತು 5ನೇ ಕ್ರಮಾಂಕದಲ್ಲಿ ಆಡುತ್ತಾರೆ" ಎಂದು ತಮ್ಮ ಯೂಟ್ಯೂಬ್ ಚಾನೆಲ್ನ್ಲಲಿ ವಿವರಿಸಿದ್ದಾರೆ ಹರ್ಭಜನ್ ಸಿಂಗ್.
ಇನ್ನು ರವೀಂದ್ರ ಜಡೇಜಾ ಹಾಗೂ ಆರ್ ಅಶ್ವಿನ್ ಇಬ್ಬರಿಗೂ ತಂಡದಲ್ಲಿ ಹರ್ಭಜನ್ ಅವಕಾಶ ನೀಡಿದ್ದು ವಿಕೆಟ್ ಕೀಪರ್ ಆಗಿ ಶ್ರೀಕರ್ ಭರತ್ ಅವರನ್ನೇ ಹೆಸರಿಸಿದ್ದಾರೆ. ಈ ಮೂಲಕ ಮೊದಲ ಪಂದ್ಯದಲ್ಲಿ ಇಶಾನ್ ಕಿಶನ್ಗೆ ತಮ್ಮ ಪ್ರಕಾರ ಅವಕಾಶ ದೊರೆಯುವುದಿಲ್ಲ ಎಂದಿದ್ದಾರೆ ಹರ್ಭಜನ್. ಮೊಹಮ್ಮದ್ ಸಿರಾಜ್ ವೇಗದ ಬೌಲಿಂಗ್ನ ನೇತೃತ್ವ ವಹಿಸಲಿದ್ದಾರೆ ಎಂದು ಹೆಸರಿಸಿದ್ದಾರೆ.
ಮುಂದುವರಿದು ಅವರು ಬೌಲಿಂಗ್ ವಿಭಾಗದ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. "ನಾನು ಉನಾದ್ಕಟ್ ಅವರನ್ನು ಆಡಿಸಲು ಬಯಸುತ್ತೇನೆ. ಯಾಕೆಂದರೆ ದೇಶೀಯ ಕ್ರಿಕೆಟ್ನಲ್ಲಿ ಅವರು ಸುದೀರ್ಘ ಕಾಲದಿಂದ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದು ರಾಷ್ಟ್ರೀಯ ತಂಡದಲ್ಲಿ ಅವರಿಗೆ ಹೆಚ್ಚಿನ ಅವಕಾಶಗಳು ದೊರೆತಿಲ್ಲ. ಇನ್ನು 11ನೇ ಕ್ರಮಾಂಕದಲ್ಲಿ ಮುಕೇಶ್ ಕುಮಾರ್ ಅವರಿಗೆ ಅವಕಾಶ ನೀಡಲು ಬಯಸುತ್ತೇನೆ ಯಾಕೆಂದರೆ ರಣಜಿ ಟ್ರೋಫಿಯಲ್ಲಿ ಅವರು ಅದ್ಭುತ ಪ್ರದರ್ಶನ ನೀಡಿದ್ದಾರೆ" ಎಂದಿದ್ದಾರೆ ಹರ್ಭಜನ್ ಸಿಂಗ್.
ಹರ್ಭಜನ್ ಹೆಸರಿಸಿದ ಟೀಮ್ ಇಂಡಿಯಾ ಆಡುವ ಬಳಗ: ರೋಹಿತ್ ಶರ್ಮಾ, ಶುಬ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಅಜಿಂಕ್ಯಾ ರಹಾನೆ, ರವೀಂದ್ರ ಜಡೇಜಾ, ಆರ್ ಅಶ್ವಿನ್, ಶ್ರೀಕರ್ ಭರತ್(ವಿಕೆಟ್ ಕೀಪರ್) ಮೊಹಮ್ಮದ್ ಸಿರಾಜ್, ಜಯ್ದೇವ್ ಉನಾದ್ಕಟ್, ಮುಕೇಶ್ ಕುಮಾರ್