ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೆ ಟೀಮ್ ಇಂಡಿಯಾ ತಂಡವನ್ನು ಪ್ರಕಟಿಸಲಾಗಿದೆ. ಹಾರ್ದಿಕ್ ಪಾಂಡ್ಯ ನೇತೃತ್ವದ 15 ಆಟಗಾರರ ತಂಡದಲ್ಲಿ ಕೆಲ ಯುವ ಆಟಗಾರರಿಗೆ ಅವಕಾಶ ದೊರೆತಿದೆ. ಆದರೆ ಇನ್ನೂ ಕೆಲ ನಿರೀಕ್ಷಿತ ಆಟಗಾರರಿಗೆ ಅವಕಾಶ ದೊರೆಯದಿರುವುದರ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಿರುವ ಆಟಗಾರರ ಬಗ್ಗೆ ಆಕಾಶ್ ಚೋಪ್ರ ಪ್ರತಿಕ್ರಿಯೆ ನೀಡಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗೆ ಯುವ ಆಟಗಾರ ತಿಲಕ್ ವರ್ಮಾಗೆ ಅವಕಾಶ ದೊರೆತಿದೆ. ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಪರವಾಗಿ ಅದ್ಭುತ ಪ್ರದರ್ಶನ ನೀಡಿ ಮಿಂಚಿದ ತಿಲಕ್ ವರ್ಮಾ ಇದೇ ಮೊದಲ ಬಾರಿಗೆ ಭಾರತ ತಂಡದಲ್ಲಿ ಅವಕಾಶ ಪಡೆದುಕೊಂಡಿದ್ದಾರೆ. ತಿಲಕ್ ವರ್ಮಾ ಬದಲಿಗೆ ಮತ್ತೋರ್ವ ಯುವ ಆಟಗಾರ ರಿಂಕು ಸಿಂಗ್ಗೆ ಅವಕಾಶ ನೀಡಬೇಕಾಗಿತ್ತು ಎಂದಿದ್ದಾರೆ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಕಾಮೆಂಟೇಟರ್ ಆಕಾಶ್ ಚೋಪ್ರ.

ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ತಿಲಕ್ ವರ್ಮಾಗಿಂತ ರಿಂಕು ಸಿಂಗ್ ಉತ್ತಮ ಆಯ್ಕೆ ಎಂದಿದ್ದಾರೆ ಆಕಾಶ್ ಚೋಪ್ರ. ಈ ಬಾರಿಯ ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ರಿಂಕು ಸಿಂಗ್ 14 ಪಂದ್ಯಗಳಲ್ಲಿ 59.25 ಸರಾಸರಿಯಲ್ಲಿ 474 ರನ್ ಗಳಿಸಿದ್ದಾರೆ. ಕೆಕೆಆರ್ ಪರವಾಗಿ ಫಿನಿಷರ್ ಆಗಿ ಅದ್ಭುತ ಪ್ರದರ್ಶನ ನೀಡಿ ಎಲ್ಲರ ಗಮನಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ ರಿಂಕು ಸಿಂಗ್.
ಕೆಕೆಆರ್ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಪ್ಲೇಆಫ್ಗೆ ಪ್ರವೇಶ ಪಡೆಯಲು ವಿಫಲವಾಗಿದ್ದರು ಕೂಡ ಸಾಕಷ್ಟು ದಿಗ್ಗಜರು ರಿಂಕು ಸಿಂಗ್ ಆಟಕ್ಕೆ ವಿಶೇಷ ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ. ರವಿಶಾಸ್ತ್ರಿ ಮತ್ತು ಹರ್ಭಜನ್ ಸಿಂಗ್ ಅವರಂತಾ ದಿಗ್ಗಜರು ಯುಪಿ ಮೂಲದ ಈ ಬ್ಯಾಟರ್ ಭಾರತ ತಂಡದ ಕರೆ ಸ್ವೀಕರಿಸುವ ದಿನ ಹೆಚ್ಚು ದೂರವಿಲ್ಲ ಎಂದು ಅನಿಸಿಕೆ ಹಂಚಿಕೊಂಡಿದ್ದರು. ಆದರೆ ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೆ ಆಯ್ಕೆ ಮಾಡಿರುವ ತಂಡದಲ್ಲಿ ರಿಂಕು ಸಿಂಗ್ಗೆ ಅವಕಾಶ ದೊರೆತಿಲ್ಲ. ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ ಹಾಗೂ ಮುಕೇಶ್ ಕುಮಾರ್ ಇದೇ ಮೊದಲ ಬಾರಿಗೆ ಟಿ20 ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಟೀಮ್ ಇಂಡಿಯಾ ಟಿ20 ಸ್ಕ್ವಾಡ್: ಇಶಾನ್ ಕಿಶನ್ (ವಿಕೆಟ್ ಕೀಪರ್), ಶುಬ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ಸೂರ್ಯ ಕುಮಾರ್ ಯಾದವ್ (ಉಪನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ನಾಯಕ), ಅಕ್ಷರ್ ಪಟೇಲ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ರವಿ ಬಿಷ್ಣೋಯ್, ಅರ್ಶ್ದೀಪ್ ಸಿಂಗ್, ಉಮ್ರಾನ್ ಮಲಿಕ್, ಅವೇಶ್ ಖಾನ್, ಮುಖೇಶ್ ಕುಮಾರ್.