ಲಂಡನ್, ಜೂನ್ 19 : "ಪಾಕಿಸ್ತಾನ ಎಷ್ಟು ರನ್ನಿಗೆ ಆಲೌಟಾಗಬಹುದು?" ಮಿನಿ ತೊಟ್ಟು ನಿಂತಿದ್ದ ದಢೂತಿ ಮಹಿಳೆಯ ಪ್ರಶ್ನೆಗೆ ದಶಕಗಳ ಕಾಲ ಕ್ರಿಕೆಟ್ ರಂಗವನ್ನು ಆಳಿದ ಮೂವರು ದಿಗ್ಗಜರಾದ ಸುನೀಲ್ ಗವಾಸ್ಕರ್, ರವಿ ಶಾಸ್ತ್ರಿ ಮತ್ತು ವಿವಿಎಸ್ ಲಕ್ಷ್ಮಣ್ ಅವರ ಬಳಿ ಸಿದ್ಧ ಉತ್ತರವಿತ್ತು.
ಒಬ್ಬರಿಗೊಬ್ಬರು ತಮಾಷೆ ಮಾಡುತ್ತ, ನಗಾಡಿಕೊಳ್ಳುತ್ತ ನಿಂತಿದ್ದ ಮೂವರಲ್ಲಿ ಮೊದಲ ಉತ್ತರ ಸುನೀಲ್ ಗವಾಸ್ಕರ್ ಅವರಿಂದ ಬಂದಿತ್ತು.

"ಪಾಕಿಸ್ತಾನ 240 ರನ್ನಿಗೆ ಆಲೌಟಾಗುತ್ತದೆ. ಒಂದೇ ಒಂದು ರನ್ ಹೆಚ್ಚಿಗೆ ಹೊಡೆದರೆ ಈ ಮೀಸೆಯನ್ನು ಬೋಳಿಸುತ್ತೇನೆ" ಎಂದು ಸುನೀಲ್ ಗವಾಸ್ಕರ್, ಕೃತಕವಾಗಿ ಅಂಟಿಸಿಕೊಂಡಿದ್ದ ತಮ್ಮ ಮೀಸೆಯಡಿಯಲ್ಲಿ ಗಹಗಹಿಸಿ ನಕ್ಕರು.
ಪಕ್ಕದಲ್ಲೇ ನಿಂತಿದ್ದ ಮತ್ತೊಬ್ಬ ಮಾಜಿ ದಾಂಡಿಗ ವಿವಿಎಸ್ ಲಕ್ಷ್ಮಣ್ ಕೂಡ, "ನನಗೂ ಹಾಗೇ ಅನ್ನಿಸುತ್ತದೆ, ನಾಟ್ ಮೋರ್ ದಾನ್ ಟೂಫಾರ್ಟಿ" ಅಂತ ಬೋಳಾಗಿದ್ದ ಮೇಲ್ದುಟಿಯ ಮೇಲೆ ಅಂಟಿಸಿಕೊಂಡಿದ್ದ ಕೃತಕ ಮೀಸೆಯನ್ನು ತಿರುವಿದ್ದರು.
ನಾನೇನು ಕಮ್ಮಿ ಅಂತ ಕುರುಚಲು ಮೀಸೆಯಿರುವ ಕಾಮೆಂಟ್ರಿ ಪಂಟ ರವಿ ಶಾಸ್ತ್ರಿ ಕೂಡ, ಕೃತಕ ಮೀಸೆ ಅಂಟಿಸಲು ತಡಕಾಡುತ್ತ ಅವರಿಬ್ಬರ ಮಾತಿಗೆ ಸಮ್ಮತಿ ಸೂಚಿಸಿದರು.

ಇದು ಪಾಕಿಸ್ತಾನಿ ಆಟಗಾರರಿಗೆ ಕೇಳಿಸಿತೋ ಇಲ್ಲವೋ, ಅಥವಾ ಬೇರೆ ಯಾರಾದರೂ ಇವರು ಹೀಗೆ ಆಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರೋ, ತಿರುಗಿಬಿದ್ದರೆ ತಾವು ಎಂಥ ಆಟಗಾರರೆಂದು ತೋರಿಸಿಕೊಟ್ಟಿದ್ದಾರೆ.
ಕಾಮೆಂಟ್ರಿ ಪಂಟರುಗಳಂತೆ, ಪಾಕಿಸ್ತಾನ ಆಟಗಾರರನ್ನು 240ರೊಳಗಡೆ ಕೆಡವಿ ಹಾಕುತ್ತೇವೆ ಎಂದು ಅತಿಯಾದ ಆತ್ಮವಿಶ್ವಾಸದಿಂದ ಬೀಗುತ್ತಿದ್ದ ಭಾರತೀಯ ಆಟಗಾರರು ತಲೆತಗ್ಗಿಸುವಂತೆ ಆಟವಾಡಿ ಶರಣಾಗಿದ್ದಾರೆ.
ಪಾಕಿಸ್ತಾನಿ ತಂಡವನ್ನು ಕೇವಲವಾಗಿ ಕಂಡ ಈಮೂವರು ದಿಗ್ಗಜರು ಈಗ ಮೀಸೆ ಬೋಳಿಸಿಕೊಳ್ಳುತ್ತಾರಾ? ಇವರಿಗೆ ನಿಜವಾಗಿಯೂ ಅಷ್ಟೊಂದು ಅಭಿಮಾನವಿದ್ದಿದ್ದರೆ ದಿನನಿತ್ಯ ಭಾರತದ ಮೇಲೆ ಪಾಕ್ ಉಗ್ರರು ದಾಳಿ ಮಾಡುತ್ತಿರುವಾಗ, ಪಾಕಿಸ್ತಾನದ ವಿರುದ್ಧ ಆಡಲೇಬಾರದೆಂದು ಹೇಳಬಹುದಿತ್ತು.

ಅಲ್ಲಿ, ಭಾರತ ಗೆಲ್ಲಲೆಂದು, ಪಾಕಿಸ್ತಾನವನ್ನು ಸದೆಬಡಿಯಲೆಂದು ಭಾರತ ಮತ್ತು ಪಾಕಿಸ್ತಾನದ ಗಡಿಯಲ್ಲಿ ಚಪ್ಪಾಳೆ ತಟ್ಟಿ ಹುರಿದುಂಬಿಸುತ್ತಿದ್ದ ಭಾರತೀಯ ಸೇನೆಯ ಸೈನಿಕರು ತೀವ್ರ ನಿರಾಶೆಗೊಂಡು ಮತ್ತೆ ಗಡಿಯಲ್ಲಿ ತಮ್ಮ ಕರ್ತವ್ಯ ಮುಂದುವರಿಸಿದ್ದಾರೆ.
ಅಂದ ಹಾಗೆ, ಕಾಶ್ಮೀರದಲ್ಲಿ ಪಾಕಿಸ್ತಾನ ಗೆಲ್ಲುತ್ತಿದ್ದಂತೆ ಡೋಲು ಬಾರಿಸಿಕೊಂಡು, ಪಟಾಕಿಗಳನ್ನು ಸಿಡಿಸಿಕೊಂಡು, ಪಾಕಿಸ್ತಾನಕ್ಕೆ ಜೈಜೈಕಾರ ಹಾಕಿಕೊಂಡು ಯುವಕರು ಸಂಭ್ರಮಿಸಿರುವ ಚಿತ್ರಗಳು ಪಿಟಿಐನಲ್ಲಿ ದಂಡಿಯಾಗಿ ಸಿಗುತ್ತಿವೆ.