
ಗಯಾನಾ, ನವೆಂಬರ್ 12: ಮಹಿಳೆಯರ ವಿಶ್ವಕಪ್ ಟಿ20ಯಲ್ಲಿ ಭಾರತದ ವನಿತೆಯರು ಪಾಕಿಸ್ತಾನದ ತಂಡವನ್ನು ಸೋಲಿಸಿ ಬೀಗಿದ್ದಾರೆ.
ಎದುರಿಗಿದ್ದ ಗುರಿ ಸಾಧಾರಣವಾಗಿದ್ದರೂ, ಕೊನೆಯ ಘಟ್ಟದಲ್ಲಿ ಭಾರತ ಬೌಂಡರಿಗಳನ್ನು ಗಳಿಸಬೇಕಾದ ಒತ್ತಡಕ್ಕೆ ಸಿಲುಕಿತ್ತು. ರನೌಟ್, ಕ್ಯಾಚ್ ಮುಂತಾದ ಜೀವದಾನಗಳನ್ನು ಪಡೆದ ಭಾರತ ಆರು ಎಸೆತ ಬಾಕಿ ಇರುವಾಗ ಗೆಲುವಿನ ಗುರಿ ಮುಟ್ಟಿತ್ತು.
ಆದರೆ, ಪಾಕಿಸ್ತಾನವೇ ಭಾರತಕ್ಕೆ ಗೆಲುವನ್ನು ಉಡುಗೊರೆಯಾಗಿ ನೀಡಿತ್ತು. ಅದೂ ಬರೋಬ್ಬರಿ ಹತ್ತು ರನ್ಗಳನ್ನು ಪುಕ್ಕಟೆಯಾಗಿ ನೀಡುವ ಮೂಲಕ.
ನಿಜ. ಒಂದು ವೇಳೆ ಪಾಕಿಸ್ತಾನ ಆ ಹತ್ತು ರನ್ಗಳ ಕಾಣಿಕೆ ನೀಡದೆ ಇದ್ದಿದ್ದರೆ ಭಾರತದ ಗೆಲುವು ಕಷ್ಟವಾಗುತ್ತಿತ್ತು. ಕೊನೆಯ ಓವರ್ನಲ್ಲಿ ಹತ್ತು ರನ್ಗಳನ್ನು ಬಾರಿಸಬೇಕಾದ ಒತ್ತಡದ ಸ್ಥಿತಿಗೆ ಸಿಲುಕುತ್ತಿತ್ತು.

ಪಾಕಿಸ್ತಾನದ ಬ್ಯಾಟ್ಸ್ವುಮೆನ್ಗಳಾದ ನಿದಾ ದರ್ ಮತ್ತು ಬಿಸ್ಮಾ ಮರೂಫ್ ಇಬ್ಬರೂ ಬಿರುಸಿನ ಆಟವಾಡಿ ಅರ್ಧ ಶತಕ ದಾಖಲಿಸಿದ್ದರು. 13ನೇ ಓವರ್ನಲ್ಲಿ ಇಬ್ಬರೂ ಪಿಚ್ನ 'ಅಪಾಯಕಾರಿ' ಎಂದು ಪರಿಗಣಿಸಲಾದ ಜಾಗದಲ್ಲಿ ಓಡಿದರು. ಪಿಚ್ ಮಧ್ಯೆ ಈ ರೀತಿ ಓಡುವುದರಿಂದ ಪಿಚ್ ಹದಗೆಡುವ ಸಾಧ್ಯ ಇರುತ್ತದೆ. ಹೀಗಾಗಿ ಕ್ರಿಕೆಟ್ ನಿಯಮಾವಳಿಯಲ್ಲಿ ಪಿಚ್ ಮಧ್ಯೆ ಓಡಲು ಅವಕಾಶವಿಲ್ಲ.
ಪಾಕ್ ಆಟಗಾರ್ತಿಯರು ಮೊದಲ ಬಾರಿಗೆ ಈ ತಪ್ಪು ಎಸಗಿದಾಗ ಅವರಿಗೆ ಎಚ್ಚರಿಕೆ ನೀಡಲಾಯಿತು. 18ನೇ ಓವರ್ನ ಮೊದಲ ಎಸೆತದಲ್ಲಿ ಇದೇ ರೀತಿ ಪಿಚ್ನಲ್ಲಿ ಮತ್ತೆ ಓಡಿದರು. ಆಗ ಅವರಿಗೆ ಐದು ರನ್ಗಳ ಪೆನಾಲ್ಟಿ ರನ್ ವಿಧಿಸಲಾಯಿತು. ಅಂದರೆ ಈ ರನ್ ಭಾರತದ ಮೊತ್ತಕ್ಕೆ ಸೇರಿಕೊಂಡಿತು. ಆದರೂ ಇನ್ನಿಂಗ್ಸ್ನ ಕೊನೆಯ ಎಸೆತದಲ್ಲಿ ಮಹಿದಾ ಖಾನ್ ಮತ್ತು ನಿದಾ ದರ್ ಅದೇ ಪ್ರಮಾದವನ್ನು ಪುನರಾವರ್ತಿಸಿದರು. ಆಗ ಅಂಪೈರ್ಗಳು ಮತ್ತೆ ಐದು ರನ್ಗಳ ದಂಡ ವಿಧಿಸಿದರು.
ಪಾಕಿಸ್ತಾನ 20 ಓವರ್ಗಳಲ್ಲಿ 135 ರನ್ ಗಳಿಸಿದ್ದರೂ, ಅದರಲ್ಲಿ ಎರಡು ರನ್ಗಳನ್ನು ಕಳೆದುಕೊಂಡು 133 ರನ್ಗಳು ಮಾತ್ರ ಅದರ ಖಾತೆಯಲ್ಲಿ ದಾಖಲಾಯಿತು. ಹತ್ತು ರನ್ಗಳು ಭಾರತದ ಖಾತೆಗೆ ಸೇರಿಕೊಂಡಿದ್ದರಿಂದ ಅದು ಗೆಲ್ಲಲು 124 ರನ್ಗಳನ್ನು ಗಳಿಸಬೇಕಾಗಿತ್ತು.
ಕೊನೆಯಲ್ಲಿ ವೇದಾ ಕೃಷ್ಣಮೂರ್ತಿ ಬೌಂಡರಿ ಬಾರಿಸಿ ಆರು ಎಸೆತ ಇರುವಾಗ ಭಾರತಕ್ಕೆ ಗೆಲುವು ತಂದುಕೊಟ್ಟರು. ಇನ್ನೊಂದೆಡೆ ಭಾರತದ ಪರ ಮೊದಲ ಟಿ20 ಶತಕ ಬಾರಿಸಿರುವ ಶ್ರೇಯಸ್ಸು ಪಡೆದಿರುವ ನಾಯಕಿ ಹರ್ಮನ್ ಪ್ರೀತ್ ಕೌರ್ ಇದ್ದರು. ಆದರೆ, ದಂಡದ ರೂಪದಲ್ಲಿ ದೊರೆತ ಆ ಹತ್ತು ರನ್ ಸಿಗದೆ ಇದ್ದಿದ್ದರೆ ಭಾರತಕ್ಕೆ ಗೆಲುವು ಸುಲಭವಾಗುತ್ತಿರಲಿಲ್ಲ.