ಮೀರ್ಪುರ, ಫೆಬ್ರವರಿ, 26: ಭಾರತದ ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್ ಪರ ಪಾಕಿಸ್ತಾನದ ಸ್ಪಿನ್ ಮಾಂತ್ರಿಕ ಸಕ್ಲೇನ್ ಮುಷ್ತಾಕ್ ಬೌಲಿಂಗ್ ಮಾಡಿದ್ದಾರೆ. ಟೀಂ ಇಂಡಿಯಾದಲ್ಲಿದ್ದರೂ ಹರ್ಭಜನ್ ಸಿಂಗ್ ಎಕ್ಸ್ ಟ್ರಾ ಪ್ಲೇಯರ್ ಆಗಿದ್ದಾರೆ ಎಂದು ಸಕ್ಲೇನ್ ಅನುಕಂಪ ವ್ಯಕ್ತಪಡಿಸಿದ್ದಾರೆ.
ಭಾರತ ತಂಡದಲ್ಲಿರುವ ಹರ್ಭಜನ್ ಸಿಂಗ್ ಗೆ ಕಳೆದ 7 ಟಿ20 ಪಂದ್ಯಗಳಲ್ಲಿ ಒಮ್ಮೆಯೂ ಅವಕಾಶ ಸಿಕ್ಕಿಲ್ಲ. ಇದು ನಿಜಕ್ಕೂ ಒಬ್ಬ ವಿಶ್ವ ದರ್ಜೆಯ ಬೌಲರ್ ನನ್ನು ನಡೆಸಿಕೊಳ್ಳುವ ಪರಿ ಅಲ್ಲ ಎಂದು ಸಕ್ಲೇನ್ ದೂಸ್ರಾ ಎಸೆದಿದ್ದಾರೆ.[ಭಾರತದಲ್ಲಿ ಆಡಲು ಪಾಕಿಸ್ತಾನಕ್ಕೆ ಅಡ್ಡಿ ಇಲ್ಲ, ಭದ್ರತೆ ಬೇಕಂತೆ!]

ತಂಡದೊಳಕ್ಕೆ ಅಶ್ವಿನ್ ಬಂದಿರುವುದಕ್ಕೂ ಹರ್ಭಜನ್ ಅವರನ್ನು ಹೊರಕ್ಕೆ ಇಡುವುದಕ್ಕೂ ಸಂಬಂಧವೇ ಇಲ್ಲ. ಸಾಧಕನನ್ನು ಇಷ್ಟಬಂದಂತೆ ಬಲಿಪಶುವನ್ನಾಗಿ ಮಾಡುತ್ತಿರುವುದು ಖೇದ ತಂದಿದೆ ಎಂದು ಸಕ್ಲೇನ್ ಹೇಳಿದ್ದಾರೆ.
ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ ನಲ್ಲಿ ವಿಕೆಟ್ ಗಳ ಗೊಂಚಲು ಪಡೆದ ಹರ್ಭಜನ್ ಅವರನ್ನು ಭಾರತ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ಎಲ್ಲ ಆಟಗಾರರು ಒಮ್ಮೊಮ್ಮೆ ಫಾರ್ಮ್ ಕಳೆದುಕೊಳ್ಳುತ್ತಾರೆ. ಆದರೆ ಮತ್ತೆ ಅವರಿಗೆ ಅವಕಾಶ ನೀಡಿದರೆ ಆತ್ಮವಿಶ್ವಾಸದಿಂದ ಹಿಂತಿರುಗುತ್ತಾರೆ ಎಂದು ಸಕ್ಲೇನ್ ಹೇಳಿದ್ದಾರೆ.