
ಲಂಡನ್, ಜೂನ್ 26: ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತದ ವೇಗಿ ಭುವನೇಶ್ವರ್ ಕುಮಾರ್ ಗಾಯಕ್ಕೀಡಾಗಿದ್ದರು. ಭುವಿ ಬದಲಿಗೆ ಮೊಹಮ್ಮದ್ ಶಮಿ ತಂಡದಲ್ಲಿ ಸ್ಥಾನ ಪಡೆದಿದ್ದರು. ಅಫ್ಘಾನ್ ವಿರುದ್ಧದ ಪಂದ್ಯದಲ್ಲಿ ಶಮಿ ಉತ್ತಮ ಪ್ರದರ್ಶನವನ್ನೂ ನೀಡಿದ್ದರು. ಆದರೆ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಕ್ಕೆ ಶಮಿ ಮತ್ತು ಭುವಿ ಇಬ್ಬರಲ್ಲಿ ಯಾರು ಆಡಬೇಕು ಎಂಬ ಪ್ರಶ್ನೆಗೆ ಸಚಿನ್, ಭುವಿಯನ್ನು ಸೂಚಿಸಿದ್ದಾರೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ಪಾಕಿಸ್ತಾನ ವಿರುದ್ಧ ಆಡುವಾಗ ಹ್ಯಾಮ್ಸ್ಟ್ರಿಂಗ್ ಗಾಯಕ್ಕೀಡಾದ ಭುವನೇಶ್ವರ್ ಪಂದ್ಯದ ಮಧ್ಯದಲ್ಲೇ ಮೈದಾನದಿಂದ ಹೊರ ನಡೆದಿದ್ದರು. ಸದ್ಯ ಚೇತರಿಸಿಕೊಳ್ಳುತ್ತಿರುವ ಭುವಿ, ನೆಟ್ ಅಭ್ಯಾಸ ನಡೆಸುತ್ತಿರುವ ವಿಡಿಯೋವನ್ನು ಬಿಸಿಸಿಐ ಬುಧವಾರ (ಜೂನ್ 26) ಪೋಸ್ಟ್ ಮಾಡಿದೆ.
ಅಫ್ಘಾನ್ ವಿರುದ್ಧದ ಪಂದ್ಯದಲ್ಲಿ ಮೊಹಮ್ಮದ್ ಶಮಿ ಹ್ಯಾಟ್ರಿಕ್ ವಿಕೆಟ್ ಸೇರಿ ಒಟ್ಟು ನಾಲ್ಕು ವಿಕೆಟ್ ಪಡೆದಿದ್ದರು. ಆದರೂ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಭುವಿ ಕಾಣಿಸಿಕೊಳ್ಳಬೇಕು ಎಂದು ಸಚಿನ್ ಅಭಿಪ್ರಾಯಿಸಿದ್ದಾರೆ. ಇದಕ್ಕೆ ಕಾರಣವನ್ನೂ ಹೇಳಿಕೊಂಡಿದ್ದಾರೆ.
'ಭುವಿ ಒಂದುವೇಳೆ ಸಂಪೂರ್ಣ ಚೇತರಿಸಿಕೊಂಡಿದ್ದರೆ ನಾನು ಭುವಿಗೆ ಆದ್ಯತೆ ಕೊಡುತ್ತೇನೆ. ಯಾಕೆಂದರೆ ಅವರಿಗೆ ಚೆಂಡನ್ನು ಸ್ವಿಂಗ್ ಮಾಡುವ ಸಾಮರ್ಥ್ಯವಿದೆ. ಸ್ವಿಂಗ್ ಬಲದ ಮೂಲಕ ಭುವಿ ವಿಂಡೀಸ್ ಟಾಸ್ ಆರ್ಡರ್ ಬ್ಯಾಟ್ಸ್ಮನ್ಗಳನ್ನು ಸಂಕಟಕ್ಕೀಡು ಮಾಡಬಲ್ಲರು' ಎಂದು ಭಾರತದ ಅಧಿಕೃತ ಕ್ರಿಕೆಟ್ ಪ್ರಸಾರಕದೊಂದಿಗೆ ಮಾತನಾಡುತ್ತ ಸಚಿನ್ ಹೇಳಿದ್ದಾರೆ.
ಗುರುವಾರ (ಜೂನ್ 27) ಮ್ಯಾನ್ಚೆಸ್ಟರ್ನ ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ಕಾದಾಡಲಿವೆ. ಆಡಿರುವ 5 ಪಂದ್ಯಗಳಲ್ಲಿ 4ರಲ್ಲಿ ಗೆದ್ದಿರುವ ಭಾರತ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ವಿಂಡೀಸ್ ವಿರುದ್ಧವೂ ಕೊಹ್ಲಿ ಬಳಗ ಮೇಲುಗೈ ಸಾಧಿಸುವ ನಿರೀಕ್ಷೆಯಿದೆ. ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆಯೂ ಇದೆ.