
ಮ್ಯಾಂಚೆಸ್ಟರ್, ಜೂನ್ 16: ವಿಶ್ವಕಪ್ ಸಮರದಲ್ಲಿ ಮತ್ತೊಮ್ಮೆ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗಿವೆ. ಮಳೆರಾಯನ ಕೃಪೆ ಸಿಕ್ಕಿದ್ದು, ಭಾರತ ಮೊದಲು ಬ್ಯಾಟಿಂಗ್ ಮಾಡುತ್ತಿದ್ದು, ಪಾಕಿಸ್ತಾನದ ಬೌಲರ್ ಗಳು ಉತ್ತಮ ಬೌಲಿಂಗ್ ಪ್ರದರ್ಶಿಸಿದ್ದಾರೆ.
ಪಂದ್ಯಕ್ಕೂ ಸಾಮಾಜಿಕ ಜಾಲ ತಾಣಗಳಲ್ಲಿ ಪರಸ್ಪರ ಕಾಲೆಳೆಯುವುದು, ಅಣಕಿಸುವುದು, ಗೇಲಿ ಮಾಡುವುದು ನಡೆದಿತ್ತು. ಪಂದ್ಯ ಮುಗಿದರೂ ಟ್ರೆಂಡ್ ಮುಂದುವರೆಯಲಿದೆ. ಈ ನಡುವೆ ಮಳೆ ಭೀತಿ ನಡುವೆ ಓಲ್ಡ್ ಟ್ರಾಫರ್ಡ್ ಮೈದಾನಕ್ಕೆ ಮುಗಿಬಿದ್ದಿದ್ದು, ಮೈದಾನವಲ್ಲದೆ, ಫ್ಯಾನ್ ಪಾರ್ಕ್ ಕೂಡಾ ನಿರ್ಮಿಸಲಾಗಿದೆ. ಈ ನಡುವೆ ಪಾಕಿಸ್ತಾನಿ ಅಭಿಮಾನಿಯೊಬ್ಬ ಕುದುರೆ ಸವಾರಿ ಮೂಲಕ ಮೈದಾನಕ್ಕೆ ಎಂಟ್ರಿಕೊಟ್ಟಿದ್ದು ಎಲ್ಲರ ಗಮನ ಸೆಳೆದಿದೆ.
ಪಾಕಿಸ್ತಾನ ಬಾವುಟ ಹಿಡಿದು ಕುದುರೆ ಏರಿ, ಮೈದಾನದ ಕಡೆ ಬರುತ್ತಿರುವ ಅಭಿಮಾನಿಯ ರಾಯಲ್ ಎಂಟ್ರಿ ವಿಡಿಯೋ ವೈರಲ್ ಆಗುತ್ತಿದೆ. ಮೈದಾನದಲ್ಲಿ ಎರಡು ಕಡೆ ಅಭಿಮಾನಿಗಳು ತುಂಬಿ ಕೊಂಡಿದ್ದು, ಸಂಭ್ರಮದಿಂದ ಕೇಕೇ ಹಾಕಿ ಕುಣಿಯುತ್ತಿದ್ದಾರೆ. ಅಭಿಮಾನಿಗಳ ಹರ್ಷೋದ್ಗಾರದಿಂದ ಮೈದಾನದಲ್ಲಿ ಮಿಂಚಿನ ಸಂಚಾರ ಮೂಡಿದೆ.
ಇದಕ್ಕೂ ಮುನ್ನ ಟಾಸ್ ಗೆದ್ದ ಪಾಕಿಸ್ತಾನದ ನಾಯಕ ಸರ್ಫರಾಜ್ ಅಹ್ಮದ್ ಅವರು ಮೊದಲು ಫೀಲ್ಡಿಂಗ್ ಮಾಡಲು ಆಯ್ಕೆ ಮಾಡಿಕೊಂಡಿದ್ದಾರೆ. ಇಲ್ಲಿ ತನಕ ಐಸಿಸಿ ಆಯೋಜನೆಯ 6 ಕದನದಲ್ಲಿ ಟಾಸ್ ಗೆದ್ದಿದ್ದ ನಾಯಕರು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು. ಇದೆ ಮೊದಲ ಬಾರಿಗೆ ಟಾಸ್ ಗೆದ್ದ ನಾಯಕ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.