
ನವದೆಹಲಿ, ಮೇ 15: ದಿನೇಶ್ ಕಾರ್ತಿಕ್ ಅವರು ಅನುಭವಿ ಮತ್ತು ಒತ್ತಡದ ಸಂದರ್ಭಗಳನ್ನು ನಿಭಾಯಿಸುವ ಗುಣವಿರುವವರು. ಇದಕ್ಕಾಗಿ ಅವರನ್ನು ಭಾರತ ವಿಶ್ವಕಪ್ ತಂಡದಲ್ಲಿ ರಿಷಬ್ ಪಂತ್ ಬದಲಿಗೆ ಎರಡನೇ ವಿಕೆಟ್ ಕೀಪರ್ ಆಗಿ ಆರಿಸಲಾಗಿದೆ ಎಂದು ಭಾರತ ತಂಡದ ಕಪ್ತಾನ ವಿರಾಟ್ ಕೊಹ್ಲಿ ಹೇಳಿಕೊಂಡಿದ್ದಾರೆ.
ಭಾರತ ವಿಶ್ವಕಪ್ ತಂಡದಲ್ಲಿ ಎಂಎಸ್ ಧೋನಿ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿ ಕಾಣಿಸಿಕೊಂಡಿದ್ದರು. ಇನ್ನು ಎರಡನೇ ಆಯ್ಕೆಯ ವಿಕೆಟ್ ಕೀಪರ್ ಸ್ಥಾನಕ್ಕೆ ಆಯ್ಕೆ ಸಮಿತಿಯು ಪಂತ್ ಬದಲಿಗೆ 33ರ ಹರೆಯದ ದಿನೇಶ್ ಕಾರ್ತಿಕ್ ಅವರನ್ನು 15 ಜನರ ವಿಶ್ವಕಪ್ ತಂಡದಲ್ಲಿ ಹೆಸರಿಸಿತ್ತು.
ಮೇ 23ರ ವರೆಗೂ ಭಾರತ ತಂಡದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಲು ಅವಕಾಶವಿದೆ. ಮೇ 30ರಿಂದ ಇಂಗ್ಲೆಂಡ್ ಮತ್ತು ವೇಳ್ಸ್ನಲ್ಲಿ ವಿಶ್ವಕಪ್ ಪಂದ್ಯಾಟ ಆರಂಭಗೊಳ್ಳಲಿದ್ದು, ಭಾರತ, 21ರ ಹರೆಯದ ಪಂತ್ ಅವರನ್ನು ಕಳೆದುಕೊಳ್ಳುತ್ತಿದೆ ಎಂಬ ಮಾತುಗಳು ಕ್ರಿಕೆಟ್ ವಲಯದಲ್ಲಿ ಕೇಳಿ ಬರುತ್ತಿವೆ.
ದಿನೇಶ್ ಕಾರ್ತಿಕ್ ಬಗ್ಗೆ ಮಾತನಾಡುತ್ತ ಕೊಹ್ಲಿ, 'ಒತ್ತಡದ ಸಂದರ್ಭಗಳಿದ್ದಾಗ ದಿನೇಶ್ ಕಾರ್ತಿಕ್ ಹಿಡಿತ ಸಾಧಿಸುತ್ತಾರೆ. ದಿನೇಶ್ ಈ ಗುಣ ಆಯ್ಕೆ ಸಮಿತಿಯಲ್ಲಿರುವ ಎಲ್ಲರನ್ನೂ ಮನವರಿಕೆ ಮಾಡಿದೆ. ಅಲ್ಲದೆ ದಿನೇಶ್ ಒಬ್ಬ ಅನುಭವಿ ಆಟಗಾರ ಕೂಡ' ಎಂದಿದ್ದಾರೆ.