ಶುಕ್ರವಾರ, ಅಕ್ಟೋಬರ್ 20ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2023ರ ಐಸಿಸಿ ಏಕದಿನ ವಿಶ್ವಕಪ್ನ 18ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ತಂಡಗಳು ರೋಚಕ ಕದನದಲ್ಲಿ ಸೆಣಸಾಡಲಿವೆ.
ಈ ಆವೃತ್ತಿಯಲ್ಲಿ ಬೆಂಗಳೂರಿನ ಸ್ಟೇಡಿಯಂ ತನ್ನ ಮೊದಲ ಪಂದ್ಯಕ್ಕೆ ಆತಿಥ್ಯ ವಹಿಸುತ್ತಿದೆ. 2023ರ ಏಕದಿನ ವಿಶ್ವಕಪ್ನ ದೊಡ್ಡ ಪಂದ್ಯಗಳಲ್ಲಿ ಇದು ಒಂದಾಗಿದ್ದು, ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ತಂಡ 1992ರ ಚಾಂಪಿಯನ್ಗೆ ಸವಾಲು ಹಾಕುತ್ತಿದೆ.

ಒಂದೆರಡು ದಿನಗಳ ಹಿಂದೆ, ದ್ವೀಪ ರಾಷ್ಟ್ರದ ವಿರುದ್ಧ ಭಾರಿ ಸುಧಾರಣೆ ತೋರಿಸಿದ ಆಸ್ಟ್ರೇಲಿಯಾ ತಂಡ, ಬೆಂಗಳೂರಿನಲ್ಲಿ ಇಂದು ಪಾಕಿಸ್ತಾನವನ್ನು ಸೋಲಿಸಲು ಸಿದ್ಧವಾಗಿದೆ.

ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ತಂಡ ಮೂರು ಪಂದ್ಯಗಳಲ್ಲಿ ಎರಡು ಗೆಲುವುಗಳನ್ನು ಪಡೆದಿದೆ. ಆದರೆ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದಲ್ಲಿ ಬಹಳಷ್ಟು ಸುಧಾರಣೆ ಮಾಡಬೇಕಾಗಿದೆ.
ಪಾಕಿಸ್ತಾನ ತಂಡ ಸಾಮೂಹಿಕ ಪ್ರದರ್ಶನ ನೀಡುವಲ್ಲಿ ವಿಫಲಾಗಿದೆ ಮತ್ತು ಇದು ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೂ ಮುನ್ನ ದೊಡ್ಡ ಸಮಸ್ಯೆಯಾಗಿದೆ. ಹೊಸ ಚೆಂಡಿನೊಂದಿಗೆ ಎದುರಾಳಿ ತಂಡದ ಬ್ಯಾಟಿಂಗ್ ಲೈನ್ಅಪ್ಗೆ ಹಾನಿ ಮಾಡಬಲ್ಲ ಶಾಹೀನ್ ಶಾ ಆಫ್ರಿದಿ ಜ್ವರದಿಂದ ಬಳಲುತ್ತಿದ್ದಾರೆ. ಇನ್ನು ಹ್ಯಾರಿಸ್ ರೌಫ್ ಭಾರತ ವಿರುದ್ಧ ರನ್ ಸೋರಿಕೆ ಮಾಡಿದ್ದರು.
ಪಾಕಿಸ್ತಾನ ತಂಡದ ಕೆಲವು ಆಟಗಾರರು ವೈರಲ್ ಜ್ವರದಿಂದ ಬಳಲುತ್ತಿದ್ದಾರೆ. ಆಘಾ ಸಲ್ಮಾನ್ ಜ್ವರದಿಂದ ಇನ್ನೂ ಚೇತರಿಸಿಕೊಂಡಿಲ್ಲ ಮತ್ತು ಆಯ್ಕೆಗೆ ಲಭ್ಯವಿಲ್ಲ. ಗೆಲುವಿನ ಹಳಿಗೆ ಮರಳಲು ಅಥವಾ ಗೆಲುವಿನ ಆವೇಗ ಉಳಿಸಿಕೊಳ್ಳಲು ಉಭಯ ತಂಡಗಳಿಗೆ ಈ ಪಂದ್ಯ ಮುಖ್ಯವಾಗಿದೆ.
ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವಿನ ವಿಶ್ವಕಪ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಕಡಿಮೆ. ಆದರೆ, ಬೆಂಗಳೂರಿನಲ್ಲಿ ದಿನವಿಡೀ ಮೋಡ ಕವಿದ ವಾತಾವರಣವನ್ನು ನೋಡಬಹುದು.
ಶುಕ್ರವಾರದಂದು ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 19 ಆಗಿರಲಿದೆ. ಆರ್ದ್ರತೆಯ ಮಟ್ಟವು ಶೇಕಡಾ 75ರಷ್ಟಿರುತ್ತದೆ ಮತ್ತು ಪಂದ್ಯದ ಸಮಯದಲ್ಲಿ ಗಾಳಿಯು ಗಂಟೆಗೆ 12 ಕಿಮೀ ವೇಗದಲ್ಲಿ ಬೀಸುವ ಸಾಧ್ಯತೆಯಿದೆ.
ಸಾಂಪ್ರದಾಯಿಕವಾಗಿ, ಚಿನ್ನಸ್ವಾಮಿ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದೆ. ವಿಕೆಟ್ನ ಎರಡೂ ಬದಿಯಲ್ಲಿ ಬೌಂಡರಿಗಳು ಚಿಕ್ಕದಾಗಿರುವುದರಿಂದ ಮೈದಾನದ ಗಾತ್ರವೂ ಬ್ಯಾಟರ್ಗಳ ಪರವಾಗಿರುತ್ತದೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (ಐಪಿಎಲ್) ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತವರು ಮೈದಾನದಲ್ಲಿ, ಅವರೇ ರನ್ಗಳ ಹರಿವನ್ನು ತಡೆಯಲು ವಿಫಲರಾಗಿದ್ದಾರೆ.
ಇದೇ ಕಾರಣಕ್ಕೆ ಬೆಂಗಳೂರಿನಲ್ಲಿ ರನ್ ರಕ್ಷಣೆ ಮಾಡುವುದು ದೊಡ್ಡ ಕೆಲಸವಾಗಿದೆ. ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಮಾಡಲು ಮತ್ತು ಗುರಿಯನ್ನು ಬೆನ್ನಟ್ಟಲು ನೋಡಬೇಕು. ವಿಶೇಷವಾಗಿ, ಪಾಕಿಸ್ತಾನವು ಇದೀಗ ಅವರ ಬೌಲಿಂಗ್ ನೋಡಿದರೆ ಚೇಸ್ ಮಾಡಲು ನೋಡಬೇಕು.
ಇನ್ನು ಆಡಮ್ ಝಂಪಾ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ಈ ಮೈದಾನದಲ್ಲಿ ಸಾಕಷ್ಟು ಕ್ರಿಕೆಟ್ ಆಡಿದ್ದಾರೆ ಮತ್ತು ಐದು ಬಾರಿಯ ಚಾಂಪಿಯನ್ಗಳಿಗೆ ಈ ಪಂದ್ಯದಲ್ಲಿ ಸಾಕಷ್ಟು ಉಪಯುಕ್ತರಾಗಲಿದ್ದಾರೆ.