ಅಕ್ಟೋಬರ್ 5ರಂದು ಆರಂಭವಾಗಲಿರುವ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಮುಂಚಿತವಾಗಿ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯು ವಿಶ್ವಕಪ್ ಪಂದ್ಯ ಆಯೋಜಿಸುವ ಸ್ಥಳ ಪರಿಶೀಲನೆಗಾಗಿ ಮತ್ತು ಮೂಲಸೌಕರ್ಯ ಸಬ್ಸಿಡಿಗಳನ್ನು ನೀಡಲು ಉಪ ಸಮಿತಿಯನ್ನು ರಚಿಸಿದೆ.
ಈ ಹೊಸ ಬೆಳವಣಿಗೆಯನ್ನು ಈಗಾಗಲೇ ರಾಜ್ಯ ಕ್ರಿಕೆಟ್ ಸಂಸ್ಥೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಮತ್ತು ಸಂಪೂರ್ಣ ಪ್ರಕ್ರಿಯೆಗೆ ಸಂಬಂಧಿಸಿದ ಕೆಲಸವು ಶೀಘ್ರದಲ್ಲೇ ಪ್ರಾರಂಭವಾಗುವ ಸಾಧ್ಯತೆ ಇದೆ.

ಗಮನಾರ್ಹವೆಂದರೆ, ಬಿಸಿಸಿಐ ಐವರು ಪದಾಧಿಕಾರಿಗಳಾಗಿ ಬೇರೆ ಸಿಬ್ಬಂದಿಯನ್ನು ನೇಮಿಸಿಲ್ಲ. ಬದಲಾಗಿ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಕಾರ್ಯದರ್ಶಿ ಜಯ್ ಶಾ, ಖಜಾಂಚಿ ಆಶಿಶ್ ಸೆಹ್ಲಾರ್, ಉಪಾಧ್ಯಕ್ಷ ರಾಜೀವ್ ಶುಕ್ಲಾ ಮತ್ತು ಜಂಟಿ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ಎಲ್ಲಾ ಸ್ಥಳಗಳ ಪರಿಶೀಲನೆಯ ಸಂಪೂರ್ಣ ಕಾರ್ಯಾಚರಣೆಯನ್ನು ನೋಡಿಕೊಳ್ಳಲಿದ್ದಾರೆ.
ಮತ್ತೊಂದೆಡೆ, ಐಪಿಎಲ್ ಅಧ್ಯಕ್ಷ ಅರುಣ್ ಸಿಂಗ್ ಧುಮಾಲ್, ಮಾಜಿ ಖಜಾಂಚಿ ಅನಿರುದ್ಧ್ ಚೌಧರಿ, ಮಾಜಿ ಅಪೆಕ್ಸ್ ಕೌನ್ಸಿಲ್ ಸದಸ್ಯ ಪ್ರಭತೇಜ್ ಭಾಟಿಯಾ ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಎ ಶಂಕರ್ ಅವರು ಮೂಲಸೌಕರ್ಯ ಸಬ್ಸಿಡಿಗಳನ್ನು ನೀಡಲಿರುವ ಪದಾಧಿಕಾರಿಗಳಾಗಿದ್ದಾರೆ.

ಇದೇ ವೇಳೆ ಬಿಸಿಸಿಐ ಅಧಿಕಾರಿಗಳ ಪರಿಶೀಲನೆಗಾಗಿ ಭೇಟಿ ನೀಡುವ ಸ್ಥಳಗಳನ್ನು ವಿಂಗಡಿಸಲಾಗಿದೆ. 1983ರ ವಿಶ್ವಕಪ್ ವಿಜೇತ ಮತ್ತು ಪ್ರಸ್ತುತ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಅವರು ಅಹಮದಾಬಾದ್ ಮತ್ತು ಚೆನ್ನೈ ಮೈದಾನದ ಅಭಿವೃದ್ಧಿಯನ್ನು ನೋಡಿಕೊಳ್ಳಲಿದ್ದಾರೆ.
ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂ ಅತ್ಯಂತ ಪ್ರಮುಖ ಪಂದ್ಯಗಳನ್ನು ಆಯೋಜಿಸುತ್ತದೆ. ಇದರಲ್ಲಿ ಪಂದ್ಯಾವಳಿಯ ಉದ್ಘಾಟನಾ ಪಂದ್ಯ, ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಪಂದ್ಯ ಮತ್ತು ಪ್ರಮುಖ ಫೈನಲ್ ಪಂದ್ಯ ಸೇರಿವೆ. ಆದ್ದರಿಂದ, ಇದನ್ನು ವಿಶ್ವಕಪ್ನ ಪ್ರಮುಖ ಸ್ಥಳವೆಂದು ಪರಿಗಣಿಸಲಾಗಿದೆ.
ಮತ್ತೊಂದೆಡೆ, ಮುಂಬೈ ಮತ್ತು ಕೋಲ್ಕತ್ತಾ ಸ್ಥಳಗಳು ಪಂದ್ಯಾವಳಿಯ ಸೆಮಿಫೈನಲ್ ಪಂದ್ಯಗಳನ್ನು ಆಯೋಜಿಸಲಿದೆ. ಬಿಸಿಸಿಐ ಜಂಟಿ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರನ್ನು ಈ ಎರಡು ಸ್ಥಳಗಳು ಮತ್ತು ಅಭ್ಯಾಸ ಪಂದ್ಯಗಳನ್ನು ಆಯೋಜಿಸುವ ತಿರುವನಂತಪುರಂನ ಜವಾಬ್ದಾರಿ ವಹಿಸಲಾಗಿದೆ.
ಇನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ದೆಹಲಿ ಮತ್ತು ಧರ್ಮಶಾಲಾ ಸ್ಥಳಗಳನ್ನು ನೋಡಿಕೊಳ್ಳುತ್ತಾರೆ. ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರು ಹೈದರಾಬಾದ್ ಮತ್ತು ಬೆಂಗಳೂರು ಸ್ಥಳಗಳನ್ನು ನಿರ್ವಹಿಸಲಿದ್ದಾರೆ.
ಬಿಸಿಸಿಐ ಖಜಾಂಚಿ ಆಶಿಶ್ ಸೆಹ್ಲಾರ್ ಅವರು ಪುಣೆ, ಲಕ್ನೋ ಮತ್ತು ಗುವಾಹಟಿ ಸ್ಥಳಗಳನ್ನು ನೋಡಿಕೊಳ್ಳುತ್ತಾರೆ. ಇವುಗಳಲ್ಲಿ ಗುವಾಹಟಿ ಅಭ್ಯಾಸ ಪಂದ್ಯಗಳನ್ನು ಮಾತ್ರ ಆಯೋಜಿಸಲಿದೆ.
"ನಮ್ಮ ಹಂಚಿಕೆಯ ಗುರಿಗಳು ಮತ್ತು ಉದ್ದೇಶಗಳನ್ನು ಸಾಧಿಸಲು ಈ ಉಪಸಮಿತಿಗಳು ಉತ್ತಮವಾಗಿ ಕೆಲಸ ಮಾಡುತ್ತವೆ ಎಂದು ನಾವು ನಿರೀಕ್ಷಿಸುತ್ತೇವೆ. ಒಟ್ಟಾಗಿ, ನಾವು 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯ ಅದ್ಭುತವಾಗಿ ಯಶಸ್ವಿ ಮಾಡಬಹುದು. ಭಾರತೀಯ ಕ್ರಿಕೆಟ್ನಲ್ಲಿ ಮೂಲಸೌಕರ್ಯ ಮತ್ತು ಅಭಿವೃದ್ಧಿಯ ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸಬಹುದು," ಎಂದು ಬಿಸಿಸಿಐ ಕಾರ್ಯದರ್ಶಿ ಮೇಲ್ ಮೂಲಕ ರಾಜ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು ಕ್ರಿಕ್ಬಜ್ ವರದಿ ಮಾಡಿದೆ.