
ಮೊದಲಿನಿಂದಲೂ ಏಕದಿನ ಕ್ರಿಕೆಟ್ ಎಂಬುದು ಭಾರತದ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿಗೆ ಹೇಳಿ ಮಾಡಿಸಿದ ಸ್ವರೂಪವಾಗಿದೆ. ಬ್ಯಾಟ್ನೊಂದಿಗೆ ಹೆಚ್ಚಿನ ರನ್ ಗಳಿಸುತ್ತಲೇ ಇದ್ದಾರೆ ಮತ್ತು ಹಲವು ದಾಖಲೆಗಳಿಗೆ ಕಾರಣರಾಗುತ್ತಿದ್ದಾರೆ.
ಈಗಾಗಲೇ ವಿರಾಟ್ ಕೊಹ್ಲಿ 50-ಓವರ್ಗಳ ಸ್ವರೂಪದಲ್ಲಿ 45 ಶತಕಗಳನ್ನು ಗಳಿಸಿ, ಭಾರತದ ಲೆಜೆಂಡ್ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ದಾಖಲೆ ಮುರಿಯುವ ಸಮೀಪದಲ್ಲಿದ್ದಾರೆ. ಸಚಿನ್ ತೆಂಡೂಲ್ಕರ್ ಅವರು ಏಕದಿನ ಕ್ರಿಕೆಟ್ನಲ್ಲಿ 49 ಶತಕ ಬಾರಿಸಿದ್ದಾರೆ.
ಇನ್ನು ಭಾರತದಲ್ಲಿಯೇ ನಡೆಯುವ 2023ರ ಏಕದಿನ ವಿಶ್ವಕಪ್ಗೆ ದಿನಗಣನೆ ಆರಂಭವಾಗಿದ್ದು, ರನ್ ಮಷಿನ್ ವಿರಾಟ್ ಕೊಹ್ಲಿ ಭಾರತದ ಅಭಿಯಾನವನ್ನು ಬ್ಯಾಟ್ನೊಂದಿಗೆ ಮುನ್ನಡೆಸಲು ಭಾರಿ ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿದೆ.
ಇದೇ ವೇಳೆ, ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಶನ್ ಅವರಂತಹ ಸ್ಫೋಟಕ ಬ್ಯಾಟರ್ಗಳನ್ನು ತಂಡಕ್ಕೆ ಆಯ್ಕೆ ಮಾಡಿಕೊಂಡರೂ, ವಿರಾಟ್ ಕೊಹ್ಲಿ ಬಹಳ ಮುಖ್ಯವಾದ ಪಾತ್ರ ವಹಿಸುತ್ತಾರೆ ಎಂದು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಭಾವಿಸಿದ್ದಾರೆ.
ಏಕದಿನ ಮತ್ತು ಟಿ20 ಕ್ರಿಕೆಟ್ನಲ್ಲಿ ಬ್ಯಾಟರ್ಗಳ ಪಾತ್ರದಲ್ಲಿನ ವ್ಯತ್ಯಾಸವನ್ನು ತಿಳಿಸಿದ ಗೌತಮ್ ಗಂಭೀರ್, ಸದ್ಯ ಉತ್ತಮ ಫಾರ್ಮ್ನಲ್ಲಿರುವ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಂತಹ ಆಟಗಾರರ ಅನುಭವವು ಭಾರತ ತಂಡಕ್ಕೆ ಮಹತ್ವದ್ದಾಗಿದೆ ಎಂದಿದ್ದಾರೆ.

"50 ಓವರ್ಗಳ ಸ್ವರೂಪದಲ್ಲಿ ನಿಮಗೆ ಪಂದ್ಯ ಗೆಲ್ಲಿಸುವ ಮತ್ತು ಅನುಭವಿ ಆಟಗಾರರ ಅಗತ್ಯವಿದೆ. ಟಿ20 ಕ್ರಿಕೆಟ್ನಲ್ಲಿ ಇನ್ನಿಂಗ್ಸ್ ಅನ್ನು ಮುನ್ನಡೆಸಲು ಅನುಭವ ಇಲ್ಲದಿದ್ದರೂ ನಡೆಯುತ್ತದೆ. ಅಲ್ಲಿ ಯಾರೂ ಅಗತ್ಯವಿಲ್ಲ ಎನಿಸುತ್ತದೆ. ಆದರ, ಏಕದಿನ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಅನುಭವವು ತುಂಬಾ ಮುಖ್ಯವಾಗಿರುತ್ತದೆ," ಸ್ಟಾರ್ ಸ್ಪೋರ್ಟ್ಸ್ನಲ್ಲಿನ ಮಾತುಕತೆಯಲ್ಲಿ ಗೌತಮ್ ಗಂಭೀರ್ ಹೇಳಿದರು.
"ಏಕದಿನ ವಿಶ್ವಕಪ್ನ ಭಾರತ ತಂಡದಲ್ಲಿ ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ ಅವರಂತಹ ಆಕ್ರಮಣಕಾರಿ ಬ್ಯಾಟರ್ಗಳನ್ನು ಆಯ್ಕೆ ಮಾಡಿಕೊಂಡರೆ, ಅವರು ತಮ್ಮ ಮೊದಲ ವಿಶ್ವಕಪ್ ಅನ್ನು ಆಡುತ್ತಾರೆ ಎಂಬುದನ್ನು ನಾವು ಮರೆಯಬಾರದು. ಹಾಗಾಗಿ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಅನುಭವವು ಬಹಳ ಮುಖ್ಯವಾಗಿದೆ," ಎಂದು ಗೌತಮ್ ಗಂಭೀರ್ ತಿಳಿಸಿದರು.
"ಭಾರತದ ಇಡೀ ಬ್ಯಾಟಿಂಗ್ ಲೈನ್ಅಪ್ ವಿರಾಟ್ ಕೊಹ್ಲಿ ಅಥವಾ ರೋಹಿತ್ ಶರ್ಮಾ ಸುತ್ತ ಹೇಗೆ ಸುತ್ತುತ್ತದೆ ಎಂದು ಈವರೆಗೆ ನೋಡಿದ್ದೇವೆ," ಎಂದು ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್ಮನ್ ಗೌತಮ್ ಗಂಭೀರ್ ಅಭಿಪ್ರಾಯಪಟ್ಟರು.
"ಆದ್ದರಿಂದ, ಮುಂಬರುವ ಏಕದಿನ ವಿಶ್ವಕಪ್ನಲ್ಲಿ ವಿರಾಟ್ ಕೊಹ್ಲಿ ಭಾರತ ತಂಡ ಪ್ರಶಸ್ತಿ ಗೆಲ್ಲಲು ಅತ್ಯಂತ ಪ್ರಮುಖ ಪಾತ್ರ ವಹಿಸಲಿದ್ದಾರೆ ಮತ್ತು ಅವರ ಪಾತ್ರ ಬಹಳ ಮುಖ್ಯ ಎಂದು ನನಗೆ ವೈಯಕ್ತಿಕವಾಗಿ ಅನಿಸುತ್ತಿದೆ," ಎಂದು 41 ವರ್ಷದ ಗೌತಮ್ ಗಂಭೀರ್ ಹೇಳಿದರು.