ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ಭಾರತದಲ್ಲಿ ನಡೆಯಲಿರುವ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗಾಗಿ ದಿನಗಣನೆ ಆರಂಭವಾಗಿದ್ದು, ವಿಶ್ವದ 10 ಪ್ರಮುಖ ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸಲಿವೆ.
ಈಗಾಗಲೇ ಜೂನ್ 27ರಂದು ಹೆಚ್ಚು ನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಪಂದ್ಯವೂ ಸೇರಿದಂತೆ ಸಂಪೂರ್ಣ ವೇಳಾಪಟ್ಟಿಯನ್ನು ಐಸಿಸಿ ಪ್ರಕಟಿಸಿದೆ. ಈ ಪ್ರಕಾರ, ಅಕ್ಟೋಬರ್ 15ರಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಪರಸ್ಪರ ಸೆಣಸಾಡಲಿವೆ.

ಇದೇ ವೇಳೆ ಏಕದಿನ ವಿಶ್ವಕಪ್ನ ಭಾರತ ತಂಡದಲ್ಲಿ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಬದಲಿಗೆ ಎಡಗೈ ಚೈನಾಮನ್ ಸ್ಪಿನ್ನರ್ ಕುಲದೀಪ್ ಯಾದವ್ ಅವರನ್ನು ಆಯ್ಕೆ ಮಾಡಬೇಕೆಂದು ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಹೇಳಿದ್ದಾರೆ.
ಅಕ್ಟೋಬರ್ ಮತ್ತು ನವೆಂಬರ್ನಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಅಭಿಯಾನದಲ್ಲಿ ಭಾರತ ತಂಡದ ಬೌಲಿಂಗ್ ಸಂಯೋಜನೆಯನ್ನು ಚರ್ಚಿಸುವಾಗ ಸಂಜಯ್ ಮಂಜ್ರೇಕರ್ ಅವರು ಇಎಸ್ಪಿಎನ್ ಕ್ರಿಕ್ಇನ್ಫೋದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಭಾರತ ತಂಡದಲ್ಲಿ ಯುಜ್ವೇಂದ್ರ ಚಹಾಲ್ ಮತ್ತು ಕುಲದೀಪ್ ಯಾದವ್ ಇಬ್ಬರನ್ನೂ ಆಡಿಸಬಹುದೇ ಎಂಬ ಪ್ರಶ್ನೆಗೆ, ಅದು ಸಂಭವಿಸುವ ಸಾಧ್ಯತೆ ಕಡಿಮೆ ಎಂದು ಭಾರತ ತಂಡದ ಮಾಜಿ ಬ್ಯಾಟ್ಸ್ಮನ್ ಸಂಜಯ್ ಮಂಜ್ರೇಕರ್ ತಿಳಿಸಿದರು.
"ಬಹಳ ಅಪರೂಪದಲ್ಲಿ ಇದು ಎದುರಾಳಿ ತಂಡ ಯಾವುದು ಎನ್ನುವುದರ ಮೇಲೆ ಅವಲಂಬಿತವಾಗಿದೆ. ಎದುರಾಳಿ ತಂಡದಲ್ಲಿ ಮಣಿಕಟ್ಟಿನ ಸ್ಪಿನ್ ಬೌಲರ್ ವಿರುದ್ಧ ಆಡುವ ದೌರ್ಬಲ್ಯವಿದ್ದರೆ, ಕುಲದೀಪ್ ಯಾದವ್ ಮತ್ತು ಯುಜ್ವೇಂದ್ರ ಚಹಾಲ್ ಇಬ್ಬರೂ ಆಡುವ 11ರ ಬಳಗದಲ್ಲಿ ಆಡುವುದನ್ನು ನೋಡಬಹುದು," ಎಂದು ಸಂಜಯ್ ಮಂಜ್ರೇಕರ್ ಹೇಳಿದರು.
ಕುಲದೀಪ್ ಯಾದವ್ ಅವರು ಬ್ಯಾಟಿಂಗ್ನಲ್ಲಿ ದೊಡ್ಡ ರನ್ ಗಳಿಸದಿದ್ದರೂ, ಬೌಲಿಂಗ್ನಲ್ಲಿ ಹೆಚ್ಚಿನ ವಿಕೆಟ್ಗಳನ್ನು ಕಬಳಿಸುವ ಸಾಮರ್ಥ್ಯ ಹೊಂದಿದ್ದಾರೆ. ಅದಕ್ಕಾಗಿಯೇ ಕುಲದೀಪ್ ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯಲು ತಾವು ಬಯಸುವುದಾಗಿ ಸಂಜಯ್ ಮಂಜ್ರೇಕರ್ ವಿವರಿಸಿದರು.
"ನಾನು ಯುಜ್ವೇಂದ್ರ ಚಹಾಲ್ ತಂಡದ ಭಾಗವಾಗಿರುವುದನ್ನು ನೋಡುತ್ತೇನೆ. ಆದರೆ ಏಕದಿನ ಕ್ರಿಕೆಟ್ನಲ್ಲಿ ಸ್ಪಿನ್ನರ್ ಆಗಿ ಮಣಿಕಟ್ಟಿನ ಸ್ಪಿನ್ನರ್ ಆಗಿ ಕುಲದೀಪ್ ಯಾದವ್ ಅವರನ್ನು ನಾನು ಇಷ್ಟಪಡುತ್ತೇನೆ. ನಾನು ಇಲ್ಲಿ ಸ್ವಲ್ಪ ಟೆಕ್ನಿಕಲ್ ವಿಷಯಗಳಿಗೆ ಗಮನ ನೀಡುತ್ತೇನೆ. ನಿಮಗೆ ವಿಕೆಟ್ಗಳನ್ನು ಪಡೆಯುವ ಸ್ಪಿನ್ನರ್ ಅಗತ್ಯವಿದೆ," ಎಂದು ಭಾರತದ ಮಾಜಿ ಬ್ಯಾಟರ್ ಹೇಳಿದರು.
"ಆದ್ದರಿಂದ ವಿಶ್ವಕಪ್ನಲ್ಲಿ ಭಾರತ ತಂಡದ ಆಡುವ 11ರ ಬಳಗದಲ್ಲಿ ನನ್ನ ಮೊದಲ ಆಯ್ಕೆ ಮಣಿಕಟ್ಟಿನ ಸ್ಪಿನ್ನರ್ ಕುಲದೀಪ್ ಯಾದವ್ ಆಗಿದ್ದಾರೆ ಮತ್ತು ನಂತರ ನಾನು ಇತರ ಆಯ್ಕೆಗಳನ್ನು ನೋಡುತ್ತೇನೆ,'' ಎಂದು ಸಂಜಯ್ ಮಂಜ್ರೇಕರ್ ತಿಳಿಸಿದರು.
ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಭಾರತ ಏಕದಿನ ತಂಡದಲ್ಲಿ ಕುಲದೀಪ್ ಯಾದವ್ ಮತ್ತು ಯುಜ್ವೇಂದ್ರ ಚಾಹಲ್ ಇಬ್ಬರನ್ನೂ ಆಯ್ಕೆ ಮಾಡಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ಪ್ರವಾಸ ಕೈಗೊಳ್ಳಲಿದ್ದು, ಏಕದಿನ ವಿಶ್ವಕಪ್ಗೆ ಮುನ್ನ ಆಟಗಾರರ ಪ್ರದರ್ಶನ ಮಹತ್ವವಾಗಿದೆ.