ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ಭಾರತದಲ್ಲಿ ನಡೆಯಲಿರುವ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ದಿನಗಣನೆ ಆರಂಭವಾಗಿದ್ದು, ಜೂನ್ 27ರಂದು ವಿಶ್ವಕಪ್ನ ಸಂಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.
ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳು ಸೆಣಸಾಡಲಿವೆ.

ಇನ್ನು ಟೀಂ ಇಂಡಿಯಾದ ಮೊದಲ ಪಂದ್ಯ ಅಕ್ಟೋಬರ್ 8ರಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯಲಿದೆ. ಅನಂತರ ಅಕ್ಟೋಬರ್ 15ರಂದು ಅಹಮದಾಬಾದ್ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಪಂದ್ಯ ನಡೆಯಲಿದೆ.
ಇದೇ ವೇಳೆ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಬಹು ನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಮೇಲೆ ಹೆಚ್ಚಿನ ಗಮನವನ್ನು ಕೇಂದ್ರೀಕರಿಸಲು ಪಾಕಿಸ್ತಾನ ತಂಡದ ಸ್ಟಾರ್ ಬೌಲರ್ ಶಾಹೀನ್ ಶಾ ಅಫ್ರಿದಿ ತಮ್ಮ ಅಸಮ್ಮತಿ ವ್ಯಕ್ತಪಡಿಸಿದ್ದಾರೆ.
ಈ ಹೈ-ವೋಲ್ಟೇಜ್ ಪಂದ್ಯವು ವಿಶ್ವಾದ್ಯಂತ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಹುಟ್ಟು ಹಾಕಿದೆ. ಆದರೆ ಶಾಹೀನ್ ಶಾ ಅಫ್ರಿದಿ ಪ್ರಕಾರ, ವಿಶ್ವಕಪ್ ಗೆಲ್ಲುವುದು ಪಾಕಿಸ್ತಾನ ತಂಡದ ಪ್ರಮುಖ ಗುರಿಯಾಗಿದೆ.
ಇದೀಗ ಶಾಹೀನ್ ಶಾ ಅಫ್ರಿದಿ ತನ್ನ ಸಹ ಆಟಗಾರರು ಮತ್ತು ಅಭಿಮಾನಿಗಳನ್ನು ಈ ಏಕೈಕ ಪಂದ್ಯದಿಂದ ತಮ್ಮ ಗಮನವನ್ನು ಬೇರೆ ಕಡೆ ಹರಿಸುವಂತೆ ಒತ್ತಾಯಿಸಿದರು. ಬದಲಿಗೆ ಸಂಪೂರ್ಣ ಏಕದಿನ ವಿಶ್ವಕಪ್ ಗೆಲ್ಲುವತ್ತ ಗಮನ ಸೆಳೆದರು.
"ನಾವು ಕೇವಲ ಭಾರತ ಮತ್ತು ಪಾಕಿಸ್ತಾನದ ಪಂದ್ಯದ ಬಗ್ಗೆ ಯೋಚಿಸುವುದನ್ನು ಮತ್ತು ಕೇಂದ್ರೀಕರಿಸುವುದನ್ನು ನಿಲ್ಲಿಸಬೇಕು. ಏಕೆಂದರೆ ಅದು ಕೇವಲ ಒಂದು ಪಂದ್ಯವಾಗಿದೆ. ವಿಶ್ವಕಪ್ ಗೆಲ್ಲುವುದು ಹೇಗೆ ಎಂಬುದರ ಕುರಿತು ನಾವು ನಮ್ಮ ಆಲೋಚನೆಗಳನ್ನು ಕೇಂದ್ರೀಕರಿಸಬೇಕಾಗಿದೆ ಮತ್ತು ತಂಡವಾಗಿ ಇದು ನಮ್ಮ ಗುರಿಯಾಗಿದೆ," ಎಂದು ಸ್ಥಳೀಯ ಪಾಕಿಸ್ತಾನ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಶಾಹೀನ್ ಅಫ್ರಿದಿ ತಿಳಿಸಿದರು.
ಮೊಣಕಾಲು ಗಾಯದಿಂದ ಚೇತರಿಸಿಕೊಂಡು ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳಿರುವದ ಶಾಹೀನ್ ಅಫ್ರಿದಿ ತಮ್ಮ ಫಿಟ್ನೆಸ್ ಬಗ್ಗೆ ಅನುಮಾನವನ್ನು ದೂರಮಾಡಿದರು. ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಪಾಕಿಸ್ತಾನ ತಂಡ ಪರ ಆಡುವ ತಮ್ಮ ಸಿದ್ಧತೆಯನ್ನು ತಿಳಿಸಿದರು. ಏಕದಿನ ವಿಶ್ವಕಪ್ ವರ್ಷದಲ್ಲಿ ಈ ಸರಣಿ ಪಾಕಿಸ್ತಾನ ತಂಡಕ್ಕೆ ದೊಡ್ಡ ಉತ್ತೇಜನ ನೀಡುತ್ತದೆ.
1992ರಲ್ಲಿ ಇಮ್ರಾನ್ ಖಾನ್ ನಾಯಕತ್ವದ ತಂಡ ಆಸ್ಟ್ರೇಲಿಯಾದಲ್ಲಿ ನಡೆದ ಏಕದಿನ ವಿಶ್ವಕಪ್ ನಂತರ, ಪಾಕಿಸ್ತಾನ ಮತ್ತೆ ವಿಶ್ವಕಪ್ ಗೆಲುವು ಕಂಡಿಲ್ಲ. ಆದರೆ, ಪಾಕಿಸ್ತಾನದ ಸಮೀಪದಲ್ಲೇ 2023ರ ಐಸಿಸಿ ಪಂದ್ಯಾವಳಿ ನಡೆಯುವಾಗ ಪಾಕಿಸ್ತಾನ ತಂಡವು ಪ್ರಶಸ್ತಿ ಎತ್ತಿ ಹಿಡಿಯಲು ಎದುರು ನೋಡುತ್ತಿದೆ.
ಮತ್ತೊಂದೆಡೆ, ಭಾರತ ತಂಡವು ಪಾಕಿಸ್ತಾನ ವಿರುದ್ಧ ವಿಶ್ವಕಪ್ ಪಂದ್ಯಾವಳಿಯಲ್ಲಿ ಒಮ್ಮೆಯೂ ಸೋತಿಲ್ಲ. ಈ ಬಾರಿಯೂ ರೋಹಿತ್ ಶರ್ಮಾ ನಾಯಕತ್ವದ ಭಾರತ ಈ ಪ್ರಭಾವಶಾಲಿ ದಾಖಲೆಯ ಸರಪಳಿಯನ್ನು ಮುಂದುವರಿಸಲು ಕಾಯುತ್ತಿದೆ.
ಎಂಎಸ್ ಧೋನಿ ನಾಯಕತ್ವದ ಭಾರತ ತಂಡ 2013ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿ ಗೆದ್ದ ನಂತರ, ಐಸಿಸಿ ಪಂದ್ಯಾವಳಿಯಲ್ಲಿ ಭಾರತ ಮತ್ತೆ ಚಾಂಪಿಯನ್ ಆಗದೆ ದಶಕ ಕಳೆದಿದೆ. ಅನಂತರದ ಹಲವು ಐಸಿಸಿ ಪಂದ್ಯಾವಳಿಗಳಲ್ಲಿ ನೆಚ್ಚಿನ ತಂಡವಾಗಿದ್ದರೂ, ಪ್ರಶಸ್ತಿ ಸಮೀಪ ತಲುಪಿ ಎಡವುತ್ತಿದೆ.
ಆದರೆ, ಮುಂಬರುವ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯು ಸಂಪೂರ್ಣವಾಗಿ ಭಾರತದಲ್ಲಿಯೇ ನಡೆಯಲಿದ್ದು, ರೋಹಿತ್ ಶರ್ಮಾ ಬಳಗಕ್ಕೆ 10 ವರ್ಷಗಳ ಐಸಿಸಿ ಪ್ರಶಸ್ತಿ ಬರವನ್ನು ನೀಗಿಸಿಕೊಳ್ಳಲು ಸುವರ್ಣಾವಕಾಶ ಒದಗಿದೆ. ತವರಿನಲ್ಲಿ ಆಡುವುದರಿಂದ ಭಾರತ ತಂಡ ಖಂಡಿತವಾಗಿಯೂ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ.