ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ಭಾರತದಲ್ಲಿ ನಡೆಯುವ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಐಸಿಸಿ ಮತ್ತು ಬಿಸಿಸಿಐ ಅಂತಿಮ ವೇಳಾಪಟ್ಟಿ ಮಾಡಿದ್ದು, ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆಯನ್ನು ಆರಂಭಿಸಿದೆ.
ಇದೇ ವೇಳೆ ಭಾರತ ತಂಡವು ತಮ್ಮ ಅಗ್ರ 7ರಲ್ಲಿ ಮೂವರು ಎಡಗೈ ಆಟಗಾರರನ್ನು ಆಯ್ಕೆ ಮಾಡಬೇಕು ಎಂದು ಭಾರತದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಸಲಹೆ ನೀಡಿದ್ದಾರೆ.

ಸ್ಟಾರ್ ಸ್ಪೋರ್ಟ್ಸ್ನಲ್ಲಿ ಮಾತನಾಡಿದ ರವಿಶಾಸ್ತ್ರಿ, 2023ರ ಏಕದಿನ ವಿಶ್ವಕಪ್ನಲ್ಲಿ ಭಾರತ ತಂಡಕ್ಕೆ ಎಡಗೈ ಬ್ಯಾಟರ್ಗಳ ಅಗತ್ಯವಿದೆ ಮತ್ತು ಇದು ತಂಡದಲ್ಲಿ ಸಾಕಷ್ಟು ವೈವಿಧ್ಯತೆಯನ್ನು ತರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಲೈನ್ಅಪ್ನಲ್ಲಿ ಖಚಿತವಾಗಿ ಆಡಲಿದ್ದು, ಈ ಬ್ಯಾಟರ್ಗಳನ್ನು ಹೊರತುಪಡಿಸಿ ಇಶಾನ್ ಕಿಶನ್, ತಿಲಕ್ ವರ್ಮಾ ಮತ್ತು ರವೀಂದ್ರ ಜಡೇಜಾ ಅವರಂತಹ ಎಡಗೈ ಆಟಗಾರರನ್ನು ಸೇರಿಸಿಕೊಳ್ಳಬೇಕು ಎಂದು ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ತಿಳಿಸಿದರು.
"ಇಬ್ಬರು ಎಡಗೈ ಬ್ಯಾಟ್ಸ್ಮನ್ಗಳು ಬೇಕು ಎಂದು ಆಯ್ಕೆ ಸಮಿತಿ ಬಯಸುತ್ತಿದೆ. ಆದರೆ, ನಾನು ಮೂರು ಸ್ಥಾನಗಳಲ್ಲಿ ಎಡಗೈ ಆಟಗಾರರನ್ನು ಆಡಿಸಬೇಕು ಎಂದು ಭಾವಿಸುತ್ತೇನೆ. ಟಾಪ್ ನಾಲ್ವರು ಆಟಗಾರರನ್ನು ಹೊರತುಪಡಿಸಿ, ಆಯ್ಕೆಗಾಗರು ಮೂರು ಎಡಗೈ ಆಟಗಾರರನ್ನು ಯೋಚಿಸಬೇಕು," ಎಂದು ಹೇಳಿದರು.

ಸದ್ಯಕ್ಕೆ ತಿಲಕ್ ವರ್ಮಾ ಆಯ್ಕೆ ಸಮಿತಿ ಎದುರು ಇರುವ ಸಂಭಾವ್ಯ ಹೆಸರಾಗಿದೆ. ಆತನನ್ನು ತಂಡಕ್ಕೆ ಕರೆತನ್ನಿ. ಯಶಸ್ವಿ ಜೈಸ್ವಾಲ್ ಉತ್ತಮವೆಂದು ಭಾವಿಸಿದರೆ, ಅವರನ್ನು ಆಯ್ಕೆ ಮಾಡಿ,'' ಎಂದು ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಸ್ಟಾರ್ ಸ್ಪೋರ್ಟ್ಸ್ನಲ್ಲಿ ಏಕದಿನ ವಿಶ್ವಕಪ್ಗಾಗಿ ಭಾರತದ ಸಂಭಾವ್ಯ ಆಡುವ 11ರ ಬಳಗದ ಕುರಿತು ಚರ್ಚಿಸುವಾಗ ಸಲಹೆ ನೀಡಿದರು.
ಇಶಾನ್ ಕಿಶನ್ ಅವರನ್ನು ಆರಂಭಿಕ ಸ್ಥಾನಕ್ಕೆ ರವಿಶಾಸ್ತ್ರಿ ಬೆಂಬಲಿಸಿದ್ದು, ಭಾರತವು ಏಕದಿನ ವಿಶ್ವಕಪ್ ಮತ್ತು ಏಷ್ಯಾ ಕಪ್ಗೆ ಮುಂಚಿತವಾಗಿ ಆಕ್ರಮಣಕಾರಿ ಎಡಗೈ ಆಟಗಾರನನ್ನು ಬೆಂಬಲಿಸಿದೆ ಎಂದರು.
"ಕಳೆದ 6ರಿಂದ 8 ತಿಂಗಳುಗಳಿಂದ ಇಶಾನ್ ಕಿಶನ್ ಅವರನ್ನು ನಿರಂತರವಾಗಿ ಆಡಿಸಿದ್ದಾರೆ ಮತ್ತು ಅವರು ವಿಕೆಟ್ ಕೀಪಿಂಗ್ ಮಾಡಬೇಕೆಂದು ಬಯಸಿದರೆ, ಯಾವುದೇ ಸಂದರ್ಭದಲ್ಲಿ ಬರುತ್ತಾರೆ," ಎಂದು ತಿಳಿಸಿದರು.

"ರವೀಂದ್ರ ಜಡೇಜಾ ಸೇರಿದಂತೆ ಅಗ್ರ 7 ಆಟಗಾರರಲ್ಲಿ ಮೂವರು ಎಡಗೈ ಆಟಗಾರರಿರಬೇಕು. ಇಶಾನ್ ಕಿಶನ್ ಕಳೆದ 15 ತಿಂಗಳಿಂದ ವಿಕೆಟ್ ಕೀಪಿಂಗ್ ಮಾಡುತ್ತಿದ್ದಾರೆ. ಬೇರೆ ಆಟಗಾರರತ್ತ ನೋಡುವುದೇಕೆ?," ಎಂದು ರವಿಶಾಸ್ತ್ರಿ ಹೇಳಿದರು.
ಇನ್ನು ತಿಲಕ್ ವರ್ಮಾ ಅವರನ್ನು ನಂಬರ್ 4 ಸ್ಥಾನಕ್ಕೆ ರವಿಶಾಸ್ತಿ ಬೆಂಬಲಿಸಿದ್ದಾರೆ ಮತ್ತು ಕಳೆದ ಕೆಲವು ತಿಂಗಳುಗಳಲ್ಲಿ ಯುವ ಆಟಗಾರ ಮಾಡಿದ ರೀತಿಯನ್ನು ತಾವು ನಿಜವಾಗಿಯೂ ಇಷ್ಟಪಟ್ಟಿರುವುದಾಗಿ ಭಾರತದ ಮಾಜಿ ನಾಯಕ ಹೇಳಿದರು.
ಭಾರತ ತಂಡ ಏಕದಿನ ಸ್ವರೂಪದಲ್ಲಿ ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್ ಅವರಂತಹ ಹಲವು ಬ್ಯಾಟರ್ಗಳನ್ನು 4ನೇ ಕ್ರಮಾಂಕದಲ್ಲಿ ಪ್ರಯತ್ನಿಸಿದೆ. ಆದರೆ ಅವರಲ್ಲಿ ಯಾರೂ ಆ ಸ್ಥಾನವನ್ನು ತಮ್ಮದಾಗಿಸಿಕೊಳ್ಳಲು ವಿಫಲರಾದರು.
ತಿಲಕ್ ವರ್ಮಾ ಇನ್ನೂ ಏಕದಿನ ಪಂದ್ಯದಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿಲ್ಲ. ಆದರೆ ವೆಸ್ಟ್ ಇಂಡೀಸ್ ವಿರುದ್ಧ ಟಿ20 ಸರಣಿಯಲ್ಲಿ ಭಾರತ ಪರ ಟಾಪ್ ಸ್ಕೋರರ್ ಆಗಿದ್ದರು.
"ತಿಲಕ್ ವರ್ಮಾ ಅವರ ಆಟದಿಂದ ತುಂಬಾ ಪ್ರಭಾವಿತನಾಗಿದ್ದೇನೆ. ನನಗೆ ಅಂತಹ ಎಡಗೈ ಆಟಗಾರ ಬೇಕು ಮತ್ತು ನಾನು ನಿಜವಾಗಿಯೂ ತಂಡದಲ್ಲಿ ಆತನಿರಬೇಕು ಎಂದು ಬಯಸುತ್ತೇನೆ," ಎಂದು ರವಿಶಾಸ್ತ್ರಿ ತಿಳಿಸಿದರು.