ನವದೆಹಲಿ, ಏಪ್ರಿಲ್ 02: ವೆಸ್ಟ್ ಇಂಡೀಸ್ ವಿರುದ್ಧ ವಿಶ್ವ ಟಿ20 ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಅನುಭವಿಸಿದ್ದು, ಅಭಿಮಾನಿಗಳಿಗೆ ಸಹಜವಾಗಿ ಆಗಾತ ತಂದಿದೆ. ಸೋಲಿನ ಆಘಾತ ಸಹಿಸಿಕೊಳ್ಳಲಾಗದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ವಿಶ್ವ ಟಿ20 ಪಂದ್ಯಾವಳಿಯ ಎರಡನೇ ಉಪಾಂತ್ಯ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟಿಂಗ್ ಮಾಡಿ 193ರನ್ ಟಾರ್ಗೆಟ್ ನೀಡಿದ್ದಾಗ ಅಭಿಮಾನಿಗಳು ಥ್ರಿಲ್ ಆಗಿದ್ದರು. ಆದರೆ, ವೆಸ್ಟ್ ಇಂಡೀಸ್ ತಂಡ ಹೊಡಿ ಬಡಿ ಆಟವಾಡಿ ಪಂದ್ಯವನ್ನು 7 ವಿಕೆಟ್ ಗಳಿಂದ ಗೆದ್ದಿದ್ದು ಗ್ವಾಲಿಯರ್ ನ ಬಿ.ಟೆಕ್ ವಿದ್ಯಾರ್ಥಿನಿಗೆ ಸಹಿಸಿಕೊಳ್ಳಲು ಆಗಿಲ್ಲ. [ಸೋಲಿಗೆ ಧೋನಿ ಕೊಟ್ಟ 5 ಕಾರಣಗಳು]

ಗ್ವಾಲಿಯರ್ ನ ಪ್ರತಿಷ್ಠಿತ ಎಂ.ಐ.ಟಿ.ಎಸ್. ಕಾಲೇಜ್ ನಲ್ಲಿ ಬಿ ಟೆಕ್ ಇಂಜಿನಿಯರಿಂಗ್ ಓದುತ್ತಿದ್ದ ಸುರಭಿ ಕಂಥನ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಸುರಭಿಗೆ ಕ್ರಿಕೆಟ್ ಎಂದರೆ ಹುಚ್ಚು ಪ್ರೀತಿ. ಟೀಂ ಇಂಡಿಯಾ ಗೆಲುವಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಳು. ಆದರೆ, ಸೋಲು ಮಾರಣಾಂತಿಕವಾಗಿ ಪರಿಣಮಿಸಿದೆ.[ಡ್ಯಾನ್ಸ್ ಮಾಡಿದ ಗೇಲ್, ಬ್ರಾವೋ]
ಸುರಭಿ ತಂದೆ ಅಬಕಾರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು, ಅಮ್ಮ ಶಿಕ್ಷಕಿಯಾಗಿದ್ದಾರೆ.ಆತ್ಮಹತ್ಯೆಮಾಡಿಕೊಂಡ ಸುರಭಿ ಯಾವುದೇ ಸೂಸೈಡ್ ನೋಟ್ ಬರೆದಿಟ್ಟಿಲ್ಲವಾದರೂ ಆಕೆಯ ಸಾವಿಗೆ ಕ್ರಿಕೆಟ್ ಮೇಲಿನ ಹುಚ್ಚು ಅಭಿಮಾನ ಹಾಗೂ ಭಾರತದ ಸೋಲು ಕಾರಣ ಎಂದು ಆಪ್ತರು ಹೇಳಿದ್ದಾರೆ. ತನಿಖೆ ಮುಂದುವರೆದಿದೆ ಎಂದು ಮಧ್ಯಪ್ರದೇಶದ ಪೊಲೀಸ್ ವರಿಷ್ಠಾಧಿಕಾರಿ ಹರಿನಾರಾಯಣಚಾರಿ ಮಿಶ್ರ ಹೇಳಿದ್ದಾರೆ. ಈ ಸುದ್ದಿಯನ್ನು ಕೇಳಿಸಿಕೊಳ್ಳಿ