
ಶುಕ್ರವಾರ, ಮಾರ್ಚ್ 10ರಂದು ನಡೆದ ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಯುಪಿ ವಾರಿಯರ್ಸ್ ವಿರುದ್ಧದ ಸೋಲಿನ ಬಳಿಕ ಪಂದ್ಯಾವಳಿಯಲ್ಲಿ ಸತತ ನಾಲ್ಕನೇ ಸೋಲು ಅನುಭವಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಮಹಿಳಾ ತಂಡ ಪ್ಲೇಆಫ್ ತಲುಪಲು ಕಷ್ಟಸಾಧ್ಯವೆನಿಸಿದೆ.
ಆಡಿದ ಎಲ್ಲ ಪಂದ್ಯಗಳಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ನಲ್ಲಿ ವೈಫಲ್ಯ ಅನುಭಸಿರುವ ಆರ್ಸಿಬಿ ತಂಡದ ಸೋಲಿಗೆ ಪ್ರತಿಕ್ರಿಸಿರುವ ನಾಯಕಿ ಸ್ಮೃತಿ ಮಂಧಾನ, ತಂಡದ ಕಳಪೆ ಬ್ಯಾಟಿಂಗ್ ಪ್ರದರ್ಶನದ ಜವಾಬ್ದಾರಿಯನ್ನು ತಾವೇ ಹೊತ್ತುಕೊಂಡರು.
ಮುಂಬೈನ್ ಬ್ರೆಬೋರ್ನ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿಕೊಂಡ ಆರ್ಸಿಬಿ 19.3 ಓವರ್ಗಳಲ್ಲಿ ಕೇವಲ 138 ರನ್ಗಳಿಗೆ ಆಲೌಟ್ ಆಯಿತು.
ಸಾಧಾರಣ ಗುರಿ ಬೆನ್ನಟ್ಟಿದ ಯುಪಿ ವಾರಿಯರ್ಸ್ ಯಾವುದೇ ವಿಕೆಟ್ ನಷ್ಟವಿಲ್ಲದೆ 42 ಎಸೆತಗಳು ಬಾಕಿ ಇರುವಂತೆಯೇ ಗುರಿಯನ್ನು ಮುಟ್ಟಿತು ಹಾಗೂ 10 ವಿಕೆಟ್ಗಳಿಂದ ಗೆಲುವು ಸಾಧಿಸಿತು. ಈ ಸೋಲು ಆರ್ಸಿಬಿ ತಂಡಕ್ಕೆ ಪಂದ್ಯಾವಳಿಯಲ್ಲಿ ಮುಂದಿನ ಹಂತಕ್ಕೆ ತಲುಪುವ ಸಾಧ್ಯತೆಗಳ ಮೇಲೆ ತೀವ್ರ ಪರಿಣಾಮ ಬೀರಿದೆ.

"ಕಳೆದ ನಾಲ್ಕು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನಡೆಯುತ್ತಿದೆ. ನಾವು ಉತ್ತಮವಾಗಿ ಇನ್ನಿಂಗ್ಸ್ ಪ್ರಾರಂಭಿಸುತ್ತೇವೆ, ನಂತರ ಒಂದರ ಹಿಂದೆ ಒಂದು ವಿಕೆಟ್ ಕಳೆದುಕೊಳ್ಳುತ್ತಿದ್ದೇವೆ. ಈ ಸೋಲಿನ ಅಪಾದನೆಯನ್ನು ನಾನು ತೆಗೆದುಕೊಳ್ಳುತ್ತೇನೆ. ಅಗ್ರ ಕ್ರಮಾಂಕದ ಬ್ಯಾಟರ್ ಆಗಿ, ಬೋರ್ಡ್ನಲ್ಲಿ ರನ್ಗಳನ್ನು ಕಲೆಹಾಕಬೇಕಾಗಿದೆ," ಎಂದು ಪಂದ್ಯದ ನಂತರ ಆರ್ಸಿನಿ ನಾಯಕಿ ಸ್ಮೃತಿ ಮಂಧಾನ ಹೇಳಿದರು.
ನಾಯಕಿ ಅಲಿಸ್ಸಾ ಹೀಲಿ ಕೇವಲ 47 ಎಸೆತಗಳಲ್ಲಿ ಅಜೇಯ 96 ರನ್ ಬಾರಿಸುವುದರೊಂದಿಗೆ, ಯುಪಿ ವಾರಿಯರ್ಸ್ ಮಹಿಳಾ ತಂಡ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ತಮ್ಮ ಎರಡನೇ ಜಯವನ್ನು ದಾಖಲಿಸಿದರು.
ಇದೇ ವೇಳೆ ಯುಪಿ ವಾರಿಯರ್ಸ್ ತಂಡದ ಪರ ಸೋಫಿ ಎಕ್ಲೆಸ್ಟೋನ್ ಮತ್ತು ದೀಪ್ತಿ ಶರ್ಮಾ ಅವರು ಪರಿಣಾಮಕಾರಿ ಬೌಲಿಂಗ್ ಮಾಡಿದರು. ನಿಯಮಿತವಾಗಿ ವಿಕೆಟ್ ಪಡೆದು ಆರ್ಸಿಬಿ ತಂಡವನ್ನು ಅಲ್ಪ ಮೊತ್ತಕ್ಕೆ ಕುಸಿಯುವಂತೆ ಮಾಡಿದರು.

ಉಳಿದ ಬ್ಯಾಟರ್ಗಳ ವೈಫಲ್ಯದ ನಡುವೆ ಎಲಿಸ್ ಪೆರ್ರಿ ಅವರ 39 ಎಸೆತಗಳಲ್ಲಿ 52 ರನ್ಗಳ ಜವಾಬ್ದಾರಿಯುತ ಇನ್ನಿಂಗ್ಸ್ನ ಹೊರತಾಗಿಯೂ, ಆರ್ಸಿಬಿ ತಂಡ ಬೌಲಿಂಗ್ನಲ್ಲಿ ಯಾವುದೇ ಪ್ರತಿರೋಧ ನೀಡಲಿಲ್ಲ.
ಮಧ್ಯಮ ಓವರ್ಗಳಲ್ಲಿನ ಯೋಜನೆಗಳ ಕುರಿತು ಸ್ಮೃತಿ ಮಂಧಾನ ಮಾತನಾಡಿ, "ಈ ಪಂದ್ಯದ ಮೊದಲು ನಾವು ಪ್ರತಿ ಓವರ್ಗೆ 7-8 ರನ್ಗಳನ್ನು ತೆಗೆದುಕೊಳ್ಳಬೇಕು ಎಂದು ನಾವು ಮಾತನಾಡಿದ್ದೆವು. ಆದರೆ ಯುಪಿ ವಾರಿಯರ್ಸ್ ವಿರುದ್ಧ ಅದು ಕಾರ್ಯರೂಪಕ್ಕೆ ಬರಲಿಲ್ಲ. ಅಗ್ರ ಕ್ರಮಾಂಕದ ಬ್ಯಾಟರ್ಗಳಾಗಿ ನಾವು ಉತ್ತಮವಾಗಿ ಬ್ಯಾಟಿಂಗ್ ಮಾಡಬೇಕಾಗಿದೆ ಮತ್ತು ಬೌಲರ್ಗಳನ್ನು ರಕ್ಷಿಸಲು ಉತ್ತಮ ಮೊತ್ತವನ್ನು ಗಳಿಸಬೇಕಿದೆ," ಎಂದು ತಿಳಿಸಿದರು.
2023ರ ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಆರ್ಸಿಬಿ ಮಹಿಳಾ ತಂಡ ಆಡಿದ ನಾಲ್ಕು ಪಂದ್ಯಗಳಲ್ಲಿ ನಾಲ್ಕನ್ನೂ ಸೋತು, ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಬಲಿಷ್ಠ ಆಟಗಾರ್ತಿಯರನ್ನು ಹೊಂದಿದ್ದರೂ ಪಂದ್ಯಾವಳಿಯಲ್ಲಿ ಆಡಿದ ಎಲ್ಲ ತಂಡಗಳ ವಿರುದ್ಧ ಸೋಲು ಅನುಭವಿಸಿರುವುದು ಹೀನಾಯವಾಗಿದೆ. ಎರಡನೇ ಸುತ್ತಿನಲ್ಲಾದರೂ ಗೆಲುವು ಸಾಧಿಸಲು ಎದುರು ನೋಡುತ್ತಿದೆ.