
ಕಾನ್ಪುರದ ಗ್ರೀನ್ಪಾರ್ಕ್ನಲ್ಲಿ ನಡೆಯುತ್ತಿರುವ ಭಾರತ-ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ನ ಮೂರನೇ ದಿನದಾಟದಲ್ಲಿ ಟೀಂ ಇಂಡಿಯಾ ಬೌಲರ್ಸ್ ನ್ಯೂಜಿಲೆಂಡ್ ವಿಕೆಟ್ ಪಡೆಯಲು ಪರದಾಡುತ್ತಿದ್ದಾರೆ. ಕಿವೀಸ್ ಓಪನರ್ಸ್ ಅದಾಗಲೇ ಶತಕದ ಜೊತೆಯಾಟದ ಮೂಲಕ ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ. ಜೊತೆಗೆ ಬೃಹತ್ ಮೊತ್ತ ಪೇರಿಸುವ ಯೋಜನೆ ಮುಂದಿದೆ.
ವಿಕೆಟ್ ಪಡೆಯಲು ಟೀಂ ಇಂಡಿಯಾ ಬೌಲರ್ಸ್ ನಿರಂತರ ಕಠಿಣ ಶ್ರಮ ಒಂದು ಕಡೆಯಾದ್ರೆ, ಮೂರನೇ ದಿನದಾಟದ ಆರಂಭದಲ್ಲಿ ಆಶ್ಚರ್ಯ ಕಾದಿತ್ತು. ವಿಕೆಟ್ ಕೀಪರ್ ವೃದ್ದಿಮಾನ್ ಸಾಹ ಬದಲು ಕೆ.ಎಸ್. ಭರತ್ ಗ್ಲೌಸ್ ತೊಟ್ಟು ಕಣಕ್ಕಿಳಿದರು.
ಇದನ್ನು ನೋಡಿದ ಅಭಿಮಾನಿಗಳು ವೃದ್ದಿಮಾನ್ ಸಾಹಾಗೆ ಏನಾಯಿತು? ಎನ್ನುವಷ್ಟರಲ್ಲಿ ಬಿಸಿಸಿಐ ಸಾಹ ಇಂಜ್ಯುರಿ ಕುರಿತು ಅಪ್ಡೇಟ್ ನೀಡಿದೆ. ಹೌದು, ವೃದ್ದಿಮಾನ್ ಸಾಹ ಅವರ ಕುತ್ತಿಗೆಗೆ ಪೆಟ್ಟಾಗಿರುವ ಪರಿಣಾಮ ನೋವಿನಿಂದ ಬಳಲುತ್ತಿದ್ದಾರೆ. ಹೀಗಾಗಿ ಇವರನ್ನು ಬಿಸಿಸಿಐ ವೈದ್ಯಕೀಯ ತಂಡ ಪರೀಕ್ಷೆ ನಡೆಸುತ್ತಿದೆ. ಹೀಗಾವಿ ಇವರ ಬದಲಿಗೆ ಕೆ.ಎಸ್ ಭರತ್ ಕೀಪಿಂಗ್ ಗ್ಲೌಸ್ ತೊಟ್ಟು ಕಣಕ್ಕಿಳಿಯುತ್ತಿದ್ದಾರೆ ಎಂದು ಬಿಸಿಸಿಐ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ತಿಳಿಸಿದೆ.
ರಿಷಭ್ ಪಂತ್ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಪ್ಲೇಯಿಂಗ್ 11ನಲ್ಲಿ ಸ್ಥಾನ ಪಡೆದ 37 ವರ್ಷದ ವೃದ್ದಿಮಾನ್ ಸಾಹಾ ಟೀಮ್ ಇಂಡಿಯಾದ ಮೊದಲ ಇನ್ನಿಂಗ್ಸ್ನಲ್ಲಿ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದರು. 12 ಎಸೆತಗಳನ್ನ ಎದುರಿಸಿ ಕೇವಲ 1ರನ್ ಗೆ ಟಿಮ್ ಸೌಥಿಗೆ ವಿಕೆಟ್ ಒಪ್ಪಿಸಿದ್ರು. ಇದಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರಿಂದ ತೀವ್ರ ಟೀಕೆ ಎದುರಿಸಿದ್ರು.
ವೃದ್ದಿಮಾನ್ ಸಾಹಾ ಬದಲು ಕೆ.ಎಸ್ ಭರತ್ಗೆ ಅವಕಾಶ ನೀಡಬೇಕಿತ್ತು ಎಂದು ಅಭಿಮಾನಿಗಳು ಕಿಡಿಕಾರಿದ್ರು. ಅಷ್ಟರೊಳಗೆ ಕುತ್ತಿಗೆಯ ನೋವಿನಿಂದಾಗಿ ಸಾಹ ತಂಡದಿಂದ ಹೊರಗುಳಿದಿದ್ದು, ಸ್ಟ್ಯಾಂಡ್ ಬೈ ವಿಕೆಟ್ ಕೀಪರ್ ಕೆ.ಎಸ್ ಭರತ್ ಕೀಪಿಂಗ್ ಗ್ಲೌಸ್ ತೊಟ್ಟಿದ್ದಾರೆ.
ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ 345 ರನ್ಗಳಿಗೆ ಆಲೌಟ್ ಆದ ಬಳಿಕ, ನ್ಯೂಜಿಲೆಂಡ್ ಎರಡನೇ ದಿನದಾಟದಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆಯಿತು. ನ್ಯೂಜಿಲೆಂಡ್ ಆರಂಭಿಕ ಜೋಡಿ ಶತಕದ ಜೊತೆಯಾಟವಾಡಿದ್ರೆ, ಶತಕದತ್ತ ಹೆಜ್ಜೆಯಿಟ್ಟಿದ್ದ ಯಂಗ್ ವಿಲ್ಗೆ ರವಿಚಂದ್ರನ್ ಅಶ್ವಿನ್ ಖೆಡ್ಡಾ ತೋಡಿದ್ರು. ಯಂಗ್ ವಿಲ್ 89ರನ್ಗಳಿಸಿದ್ದಾಗ ವಿಕೆಟ್ ಕೀಪರ್ ಕೆ.ಎಸ್ ಭರತ್ ಹಿಡಿದ ಅದ್ಭುತ ಕ್ಯಾಚ್ಗೆ ಪೆವಿಲಿಯನ್ ಸೇರಿಕೊಂಡ್ರು. ಇದು ಭರತ್ಗೆ ಮೊದಲ ಅಂತರಾಷ್ಟ್ರೀಯ ಬಲಿಯಾಗಿದೆ.
ಇನ್ನು ನಾಯಕ ಕೇನ್ ವಿಲಿಯಮ್ಸನ್ (18) ತಾಳ್ಮೆಯ ಆರಂಭ ಪಡೆದ್ರೂ ಊಟದ ವಿರಾಮಕ್ಕೆ ಕೆಲ ಎಸೆತ ಬಾಕಿ ಇರುವಂತೆಯೇ ಉಮೇಶ್ ಯಾದವ್ ಬೌಲಿಂಗ್ನಲ್ಲಿ ಎಲ್ಬಿಡಬ್ಲ್ಯೂ ಬಲೆಗೆ ಬಿದ್ರು. ಊಟದ ವಿರಾಮದ ಹೊತ್ತಿಗೆ ನ್ಯೂಜಿಲೆಂಡ್ 2 ವಿಕೆಟ್ ನಷ್ಟಕ್ಕೆ 197 ರನ್ ಕಲೆಹಾಕಿದೆ. ಟಾಮ್ ಲಥಾಮ್ ಅಜೇಯ 82 ರನ್ ಕಲೆಹಾಕಿದ್ದಾರೆ.