ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯಕ್ಕೆ ಇನ್ನು ಬೆರಳೆಣಿಕೆಯ ದಿನಗಳು ಮಾತ್ರವೇ ಬಾಕಿಯಿದೆ. ಜೂನ್ 7ರಿಂದ ಆರಂಭವಾಗಲಿರುವ ಈ ಪ್ರತಿಷ್ಠಿತ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್ನ ಎರಡು ಬಲಿಷ್ಠ ತಂಡಗಳಾದ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಸೆಣೆಸಾಡಲಿದ್ದು ವಿಶ್ವ ಕ್ರಿಕೆಟ್ನ ಚಿತ್ತ ಈಗ ಈ ಪಂದ್ಯದತ್ತ ನೆಟ್ಟಿದೆ. ಇಂಗ್ಲೆಂಡ್ನ ಲಂಡನ್ನಲ್ಲಿರುವ ದಿ ಓವಲ್ ಕ್ರೀಡಾಂಗಣದಲ್ಲಿ ಈ ಪಂದ್ಯ ಆಯೋಜನೆಯಾಗಲಿದ್ದು ಟೀಮ್ ಇಂಡಿಯಾದ ಬಹುತೇಕ ಆಟಗಾರರು ಈಗಾಗಲೇ ಲಂಡನ್ಗೆ ಪ್ರಯಾಣ ಬೆಳೆಸಿದ್ದಾರೆ.
ಇನ್ನು ಈ ರಣರೋಚಕ ಕಾದಾಟದ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು ಯಾವ ತಂಡ ಟೆಸ್ಟ್ ಮಾದರಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಲಿದೆ ಎಂಬ ಕುತೂಹಲ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದ ಮಾಜಿ ನಾಯಕ ಹಾಗೂ ದಿಗ್ಗಜ ಕ್ರಿಕೆಟಿಗ ರಿಕಿ ಪಾಂಟಿಂಗ್ ಪ್ರತಿಕ್ರಿಯೆ ನೀಡಿದ್ದು ಓರ್ವ ಭಾರತೀಯ ಆಟಗಾರ ಆಸ್ಟ್ರೇಲಿಯಾ ತಂಡಕ್ಕೆ ನಿಜಕ್ಕೂ ಕಂಟಕವಾಗಲಿದ್ದಾನೆ ಎಂದು ಹೇಳಿದ್ದಾರೆ. ಕುತೂಹಲಕಾರಿಯೇನೆಂದರೆ ಅದು ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅಥವಾ ಭಾರತದ ಯುವ ಸೆನ್ಸೇಶನ್ ಆಟಗಾರ ಶುಬ್ಮನ್ ಗಿಲ್ ಅಲ್ಲ. ಪಾಂಟಿಂಗ್ ಹೆಸರಿಸಿದ ಆ ಆಟಗಾರನೇ ಚೇತೇಶ್ವರ್ ಪೂಜಾರ.

ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯದ ಹಿನ್ನೆಲೆಯಲ್ಲಿ ಮಾತನಾಡಿದ ರಿಕಿ ಪಾಂಟಿಂಗ್ ಫೈನಲ್ ಪಂದ್ಯದಲ್ಲಿ ಭಾರತಕ್ಕಿಂತ ಆಸ್ಟ್ರೇಲಿಯಾ ತಂಡಕ್ಕೆ ಗೆಲುವಿನ ಅವಕಾಶ ಹೆಚ್ಚಿದೆ ಎಂದಿದ್ದು ಇಂಗ್ಲೆಂಡ್ ವಾತಾವರಣ ಇದಕ್ಕೆ ಕಾರಣ ಎಂದಿದ್ದಾರೆ. ಭಾರತಕ್ಕಿಂತ ಆಸಿಸ್ ತಂಡಕ್ಕೆ ಇಂಗ್ಲೆಂಡ್ ವಾತಾವರಣ ಹೆಚ್ಚು ಸೂಕ್ತವಾಗಿರುವ ಕಾರಣ ಆಸಿಸ್ ತಂಡಕ್ಕೆ ಲಾಭ ಹೆಚ್ಚಿದೆ ಎಂದು ಪಾಂಟಿಂಗ್ ಹೇಳಿದ್ದಾರೆ. ಆದರೆ ಈ ಹಿಂದೆಯೂ ಸಾಕಷ್ಟು ಬಾರಿ ಆಸ್ಟ್ರೇಲುಯಾ ತಂಡಕ್ಕೆ ಹಿನ್ನಡೆಯುಂಟು ಮಾಡಿರುವ ಚೇತೇಶ್ವರ್ ಪೂಜಾರ ಈ ಪಂದ್ಯದಲ್ಲಿ ಆಸಿಸ್ ತಂಡಕ್ಕೆ ಕಾಡಲಿದ್ದಾರೆ ಎಂದಿದ್ದಾರೆ. ಪ್ಯಾಟ್ ಕಮ್ಮಿನ್ಸ್ ಹಾಗೂ ಅವರ ತಂಡ ಪೂಜಾರ ಅವರನ್ನು ಸಾಧ್ಯವಾದಷ್ಟು ಬೇಗ ಔಟ್ ಮಾಡುವ ಪ್ರಯತ್ನ ಮಾಡಬೇಕು ಎಂದಿದ್ದಾರೆ.
"ಆಸ್ಟ್ರೇಲಿಯಾ ತಂಡ ಹೆಚ್ಚಾಗಿ ಚೇತೇಶ್ವರ್ ಪೂಜಾರ ಬಗ್ಗೆಯೇ ಚರ್ಚೆ ಮಾಡುತ್ತಾರೆ. ಯಾಕೆಂದರೆ ಈ ಹಿಂದೆಯೂ ಆತ ಸಾಕಷ್ಟು ಸಂದರ್ಭಗಳಲ್ಲಿ ತಂಡಕ್ಕೆ ಕಂಟಕವಾಗಿದ್ದಾರೆ. ಆತನನ್ನು ಸಾಧ್ಯವಾದಷ್ಟು ಬೇಗನೆ ಆಸ್ಟ್ರೇಲಿಯಾ ತಂಡ ಔಟ್ ಮಾಡುವತ್ತ ಗಮನಹರಿಸಬೇಕು" ಎಂದಿದ್ದಾರೆ ಮಾಜಿ ನಾಯಕ ರಿಕಿ ಪಾಂಟಿಂಗ್.
ಚೇತೇಶ್ವರ್ ಪೂಜಾರ ಹೊರತುಪಡಿಸಿದರೆ ಆಸ್ಟ್ರೇಲಿಯಾ ತಂಡ ವಿರಾಟ್ ಕೊಹ್ಲಿ ಬಗ್ಗೆ ಮಾತನಾಡುತ್ತಾರೆ. ಆತ ಕೂಡ ಆಸ್ಟ್ರೇಲಿಯಾಗೆ ಅಪಾಯಕಾರಿಯಾಗಬಲ್ಲರು ಎಂದಿದ್ದಾರೆ ಪಾಂಟಿಂಗ್. "ಆಸ್ಟ್ರೇಲಿಯಾ ತಂಡಕ್ಕೆ ಚೇತೇಶ್ವರ್ ಪೂಜಾರ ಬಳಿಕ ಹೆಚ್ಚು ಅಪಾಯವನ್ನುಂಟು ಮಾಡಬಲ್ಲ ಆಟಗಾರ ಎಂದರೆ ಅದು ವಿರಾಟ್ ಕೊಹ್ಲಿ. ಅದರಲ್ಲಿ ಯಾವುದೇ ಅನುಮಾನವಿಲ್ಲ" ಎಂದಿದ್ದಾರೆ ಆಸಿಸ್ ಮಾಜಿ ನಾಯಕ.
ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯಕ್ಕೆ ತಮ್ಮ ಸ್ಕ್ವಾಡ್ಅನ್ನು ಅಂತಿಮಗೊಳಿಸಿದೆ. ಭಾರತ ತಂಡದ ಮೀಸಲು ಆಟಗಾರರ ಪಟ್ಟಿಯಲ್ಲಿ ಬದಲಾವಣೆಯಾಗಿದ್ದು ಋತುರಾಜ್ ಗಾಯಕ್ವಾಡ್ ಬದಲಿಗೆ ಯಶಸ್ವಿ ಜೈಸ್ವಾಲ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.