ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯ ಮುಕ್ತಾಯವಾಗಿದ್ದು ಟೀಮ್ ಇಂಡಿಯಾ ವಿರುದ್ಧ ಆಸ್ಟ್ರೇಲಿಯಾ ಭರ್ಜರಿ ಗೆಲುವು ಸಾಧಿಸಿ ಚಾಂಪಿಯನ್ ಪಟ್ಟಕ್ಕೇರಿದೆ. ಆಸ್ಟ್ರೇಲಿಯಾ ತಂಡದ ಈ ಸಾಧನೆಯ ಬಗ್ಗೆ ಎಲ್ಲೆಡೆಯಿಂದ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ. ಇದೇ ಸಂದರ್ಭದಲ್ಲಿ ಭಾರತದ ಸೋಲಿನ ವಿಚಾರವಾಗಿಯೂ ಪರಾಮರ್ಶೆಗಳು ಜೋರಾಗಿದ್ದು ಸೋಲಿನ ವಿಚಾರವಾಗಿ ನಾನಾ ಈತಿಯ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.
ಈ ಸಂದರ್ಭದಲ್ಲಿ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಕೂಡ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಎರಡನೇ ಆವೃತ್ತಿಯನ್ನು ಗೆದ್ದ ಆಸ್ಟ್ರೇಲಿಯಾ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಸಚಿನ್ ತೆಂಡೂಲ್ಕರ್ ಟೀಮ್ ಇಂಡಿಯಾದ ಆಡುವ ಬಳಗದ ಆಯ್ಕೆಯ ವಿಚಾರವಾಗಿ ಮಾಡಿದ ಒಂದು ನಿರ್ಧಾರದ ಬಗ್ಗೆ ಅಸಾಮಾಧಾನ ವ್ಯಕ್ತಪಡಿಸಿದ್ದು ಆ ಒಂದು ನಿರ್ಧಾರಕ್ಕೆ ಕಾರಣವೇನೆಂದು ಇನ್ನೂ ಅರ್ಥವಾಗಿಲ್ಲ ಎಂದಿದ್ದಾರೆ.

ಅಂದಹಾಗೆ ಸಚಿನ್ ತೆಂಡೂಲ್ಕರ್ಗೆ ಕಾಡುತ್ತಿರುವ ಆ ಪ್ರಶ್ನೆ ಟೀಮ್ ಇಂಡಿಯಾದ ಆಡುವ ಬಳಗದಲ್ಲಿ ಆರ್ ಅಶ್ವಿನ್ ಅವರನ್ನು ಹೊರಗಿಟ್ಟ ಬಗ್ಗೆ. ಟ್ವೀಟ್ ಮಾಡಿರುವ ಸಚಿನ್ ತೆಂಡೂಲ್ಕರ್ ಆರ್ ಅಶ್ವಿನ್ ಅವರನ್ನು ಆಡುವ ಬಳಗದಿಂದ ಹೊರಗಿಟ್ಟಿದ್ದು ಯಾವ ಕಾರಣಕ್ಕೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ನನ್ನಿಂದ ಸಾಧ್ಯವಾಗಿಲ್ಲ ಎಂದಿದ್ದಾರೆ. ಅಲ್ಲದೆ ನಂಬರ್ 1 ಬೌಲರ್ ಆಗಿರುವ ಅಶ್ವಿನ್ ಯಾವುದೇ ಪಿಚ್ನಲ್ಲಿಯಾದರೂ ಪ್ರದರ್ಶನ ನೀಡಬಲ್ಲ ಸಾಮರ್ಥ್ಯ ಹೊಂದಿರುವ ಆಟಗಾರ ಎಂದಿದ್ದಾರೆ.
ಸಚಿನ್ ಟ್ವೀಟ್ನಲ್ಲಿ ಏನಿದೆ?
"ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಗೆದ್ದ ಆಸ್ಟ್ರೇಲಿಯಾ ತಂಡಕ್ಕೆ ಅಭಿನಂದನೆಗಳು. ಸ್ಟೀವ್ ಸ್ಮಿತ್ ಹಾಗೂ ಟ್ರೆವಿಸ್ ಹೆಡ್ ಮೊದಲ ದಿನವೇ ಅದ್ಭುತವಾದ ಅಡಿಪಾಯ ಹಾಕಿಕೊಟ್ಟರು. ಅದು ಪಂದ್ಯವನ್ನು ಅವರತ್ತ ಹೊರಳುವಂತೆ ಮಾಡಿತು. ಭಾರತ ಕೂಡ ಪಂದ್ಯದಲ್ಲಿ ಉಳಿದುಕೊಳ್ಳಬೇಕಿದ್ದರೆ ಮೊದಲ ಇನ್ನಿಂಗ್ಸ್ನಲ್ಲಿ ದೊಡ್ಡ ಮೊತ್ತವನ್ನು ಕಲೆಹಾಕಬೇಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಆದರೂ ಕೆಲ ಒಳ್ಳೆಯ ಕ್ಷಣಗಳು ಭಾರತದ ಪರವಾಗಿಯೂ ಇದ್ದವು. ಆದರೆ ಆರ್ ಅಶ್ವಿನ್ ಅವರನ್ನು ಆಡುವ ಬಳಗದಿಂದ ಹೊರಗಿಡಲು ಕಾರಣವೇನು ಎಂಬುದಕ್ಕೆ ಉತ್ತರ ಕಂಡುಕೊಳ್ಳಲು ನನ್ನಿಂದ ಇನ್ನು ಕೂಡ ಸಾಧ್ಯವಾಗಿಲ್ಲ. ಆತ ವಿಶ್ವದ ನಂಬರ್ 1 ಟೆಸ್ಟ್ ಬೌಲರ್"

"ಈಗಾಗಲೇ ಪಂದ್ಯಕ್ಕೂ ಮುನ್ನ ಹೇಳಿದಂತೆ ಕೌಶಲ್ಯ ಹೊಂದಿರುವ ಸ್ಪಿನ್ನರ್ಗಳಿಗೆ ಟರ್ನಿಂಗ್ ಟ್ರ್ಯಾಕ್ನ ಅಗತ್ಯವಿರುವುದಿಲ್ಲ. ಅವರು ಅಲ್ಲಿನ ವಾತಾವರಣ ಹಾಗೂ ಪಿಚ್ನ ಮೇಲ್ಮೈಯನ್ನು ಬಳಸಿಕೊಂಡು ಏರಿಳಿತಗಳನ್ನು ಮಾಡಬಲ್ಲರು. ಒಂದು ವಿಚಾರವನ್ನು ಮರೆಯಬಾರದಾಗಿತ್ತು. ಆಸ್ಟ್ರೇಲಿಯಾ ತಂಡದ ಅಗ್ರ 8 ಬ್ಯಾಟರ್ಗಳ ಪೈಕಿ 5 ಮಂದಿ ಎಡಗೈ ಬ್ಯಾಟರ್ಗಳು" ಎಂದಿದ್ದಾರೆ ಸಚಿನ್ ತೆಂಡೂಲ್ಕರ್.