ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲು ಕಾಣುವ ಮೂಲಕ ಮತ್ತೊಂದು ಐಸಿಸಿ ಟ್ರೋಫಿಯನ್ನು ಗೆಲ್ಲುವ ಅವಕಾಶದಿಂದ ಭಾರತ ವಂಚಿತವಾಯಿತು. ಈ ಸೋಲಿನ ಬಗ್ಗೆ ನಾನಾ ರೀತಿಯ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು ಚರ್ಚೆಗಳು ಜೋರಾಗಿದೆ. ಮಾಜಿ ಕ್ರಿಕೆಟಿಗ ಹಾಗೂ ಕಾಮೆಂಟೇಟರ್ ಆಕಾಶ್ ಚೋಪ್ರ ಕೂಡ ಈ ಸೋಲಿನ ಬಗ್ಗೆ ವಿಮರ್ಶೆ ಮಾಡಿದ್ದು ಕುತೂಹಲಕಾರಿ ಅಭಿಪ್ರಾಯವೊಂದನ್ನು ಹಂಚಿಕೊಂಡಿದ್ದಾರೆ.
ಪ್ರತಿ ಬಾರಿ ಭಾರತ ಐಸಿಸಿ ಕಪ್ಗಳನ್ನು ಸೋತಾಗಲೂ ನಾಯಕತ್ವದ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿದ್ದವು. ಅದೇ ಕಾರಣದಿಂದಾಗಿ ವಿರಾಟ್ ಕೊಹ್ಲಿ ಭಾರತ ತಂಡದ ನಾಯಕತ್ವವನ್ನು ತೊರೆಯುವಂತಾ ಸನ್ನಿವೇಶಗಳು ಉದ್ಭವಿಸಿವು. ಆದರೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ ಸೋಲಿನ ಬಳಿಕ ಆಕಾಶ್ ಚೋಪ್ರ ಭಾರತದ ಸೋಲಿನ ಹಿಂದೆ ಸಮಸ್ಯೆಯಿರುವುದು ನಾಯಕತ್ವದಲ್ಲಿ ಅಲ್ಲ, ಬೇರೆಲ್ಲೋ ಸಮಸ್ಯೆಯಿದೆ ಎಂದಿದ್ದಾರೆ ಆಕಾಶ್ ಚೋಪ್ರ.

ಪಂದ್ಯದ ಬಳಿಕ ಆಕಾಶ್ ಚೋಪ್ರ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ್ದು ಈ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಆಸ್ಟ್ರೇಲಿಯಾ ತಂಡ ಭಾರತವನ್ನು ಅದ್ಭುತವಾಗಿ ಮಣಿಸಿದೆ ಎಂದಿದ್ದಾರೆ. ಕೊನೆಯ ದಿನದ ಮೊದಲ ಸೆಶನ್ನಲ್ಲಿಯೇ ಭಾರತ ತಂಡದ 7 ವಿಕೆಟ್ಗಳನ್ನು ಕಿತ್ತು ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್ ತಂಡ ಎನಿಸಿಕೊಂಡಿದ್ದು ಈ ಸಾಧನೆ ಮಾಡಿದ ಎರಡನೇ ತಂಡವಾಗಿದೆ.
"ಆಸ್ಟ್ರೇಲಿಯಾ ಭಾರತವನ್ನು ಅದ್ಭುತವಾಗಿ ಮಣಿಸಿದೆ. ಈ ಗೆಲುವಿನೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಚಾಂಪಿಯನ್ ಪಟ್ಟಕ್ಕೇರಿರುವ ಆಸ್ಟ್ರೇಲಿಯಾ ಐಸಿಸಿಯ ಎಲ್ಲಾ ಟ್ರೋಫಿಗಳನ್ನು ಗೆದ್ದುಕೊಂಡ ಮೊದಲ ತಂಡೆನಿಸಿಕೊಂಡಿದೆ. ಇನ್ನು ನಮ್ಮ ಬಗ್ಗೆ ನಾವು ಮಾತನಾಡಬೇಕಾದರೆ 2013ರ ಬಳಿಕ ನಮ್ಮ ನಿರೀಕ್ಷೆಗಳು ಕಣ್ಣೀರಾಗಿ ಹೊರಹೋಗುತ್ತಿವೆ" ಎಂದಿದ್ದಾರೆ ಆಕಾಶ್ ಚೋಪ್ರ.
"ಉತ್ತಮ ಆಟವನ್ನು ಆಡಿಯೂ ಕಳೆದ ಹತ್ತು ವರ್ಷಗಳಿಂದ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ನಾಯನನ್ನು ಕೂಡ ಬದಲಾಯಿಸಿರುವುದರಿಂದಾಗಿ ಆತ್ಮವಿಮರ್ಶೆಯ ಅಗತ್ಯವಿದೆ. ಈ ಮೊದಲು ಕೊಹ್ಲಿ ಒಳ್ಳೆಯ ನಾಯಕನಲ್ಲ ಆತನನ್ನು ಬದಲಾಯಿಸಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿತ್ತು. ಆದರೆ ಮತ್ತೋಬ್ಬ ನಾಯಕ ಬಂದರೂ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ಅಂದರೆ ಸಮಸ್ಯೆ ನಾಯಕತ್ವದಲ್ಲಿ ಇಲ್ಲ. ಬೇರೆಲ್ಲೋ ಇದೆ" ಎಂದಿದ್ದಾರೆ ಆಕಾಶ್ ಚೋಪ್ರ.
ಇನ್ನು ಇದೇ ಸಂದರ್ಭದಲ್ಲಿ ಆಕಾಶ್ ಚೋಪ್ರ, ಐಸಿಸಿ ಟೂರ್ನಿಗಳಲ್ಲಿ ಟ್ರೋಫಿಯನ್ನು ಗೆಲ್ಲಲು 10 ವರ್ಷ ಬಹಳ ಸುದೀರ್ಘ ಸಮಯ. ಈ ವಿಚಾರವಾಗಿ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಮಾತನಾಡಬೇಕು ಎಂದಿದ್ದಾರೆ. ಇನ್ನು ಈ ವರ್ಷಾಂತ್ಯದಲ್ಲಿ ಭಾರತದಲ್ಲಿಯೇ ಏಕದಿನ ವಿಶ್ವಕಪ್ ಟೂರ್ನಿ ನಡೆಯಲಿದ್ದು ಭಾರತಕ್ಕೆ ವಿಶ್ವಕಪ್ ಗೆಲ್ಲುವ ಮತ್ತೊಂದು ಅದ್ಭುತ ಅವಕಾಶವಿದೆ.