
ಅಹಮದಾಬಾದ್ ಟೆಸ್ಟ್ ಡ್ರಾನಲ್ಲಿ ಅಂತ್ಯವಾಗುವ ಮುನ್ನ ನ್ಯೂಜಿಲೆಂಡ್ ಶ್ರೀಲಂಕಾ ವಿರುದ್ಧ 2 ವಿಕೆಟ್ಗಳ ರೋಚಕ ಜಯ ಸಾಧಿಸುವ ಮೂಲಕ ಭಾರತ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೆ ಅರ್ಹತೆ ಪಡೆದುಕೊಂಡಿದೆ. ಜೂನ್ 7ರಿಂದ 11ರವರೆಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ನಡೆಯಲಿದೆ.
ಆಸ್ಟ್ರೇಲಿಯಾ ಮತ್ತು ಭಾರತ ಈ ಫೈನಲ್ ಪಂದ್ಯದಲ್ಲಿ ಚಾಂಪಿಯನ್ ಪಟ್ಟಕ್ಕಾಗಿ ಸೆಣೆಸಲಿವೆ. ಭಾರತ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಅರ್ಹತೆ ಪಡೆಯುತ್ತಿದ್ದಂತೆ ಭಾರತ ತಂಡದ ಪ್ಲೇಯಿಂಗ್ ಇಲೆವೆನ್ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ.
ಭಾರತದಲ್ಲಿನ ಪರಿಸ್ಥಿತಿಗೂ ಇಂಗ್ಲೆಂಡ್ನಲ್ಲಿ ಪರಿಸ್ಥಿತಿಗೂ ಸಾಕಷ್ಟು ವ್ಯತ್ಯಾಸವಿರುತ್ತದೆ. ಭಾರತದಲ್ಲಿ ಆಡಿದಂತೆ ಮೂವರು ಸ್ಪಿನ್ನರ್ ಗಳ ಜೊತೆ ಇಂಗ್ಲೆಂಡ್ನಲ್ಲಿ ಆಡಲು ಸಾಧ್ಯವಿಲ್ಲ. ಓವಲ್ ಅಂಗಳದಲ್ಲಿ ವೇಗಿಗಳು ಮಹತ್ವದ ಪಾತ್ರ ವಹಿಸಲಿದ್ದಾರೆ.
ಕ್ರಿಕೆಟಿಗೆ ದಿನೇಶ್ ಕಾರ್ತಿಕ್ ಇದೇ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಅಕ್ಷರ್ ಪಟೇಲ್ ಬದಲಿಗೆ ಶಾರ್ದುಲ್ ಠಾಕೂರ್ ಅವರನ್ನು ಆಡಿಸಬೇಕು ಎಂದು ಹೇಳಿದ್ದಾರೆ. ಅಕ್ಷರ್ ಬದಲಿಗೆ ಶಾರ್ದುಲ್ ಯಾಕೆ ಆಡಬೇಕು ಎನ್ನುವ ಬಗ್ಗೆ ವಿವರಣೆಯನ್ನು ಕೂಡ ನೀಡಿದ್ದಾರೆ.

ಇಬ್ಬರು ಸ್ಪಿನ್ನರ್ ಗಳು ಸಾಕು ಎಂದ ದಿನೇಶ್ ಕಾರ್ತಿಕ್
ಓವಲ್ ಅಂಗಳದಲ್ಲಿ ಇಬ್ಬರು ಸ್ಪಿನ್ನರ್ ಗಳು ಆಡಿದರೆ ಸಾಕಾಗುತ್ತದೆ. ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಆಡುವ ಬಳಗದಲ್ಲಿ ಸ್ಥಾನ ಪಡೆದುಕೊಳ್ಳುತ್ತಾರೆ. ಆದರೆ ಅಕ್ಷರ್ ಪಟೇಲ್ ಹೊಡಗುಳಿಯಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಇಂಗ್ಲೆಂಡ್ನ ವೇಗದ ಪಿಚ್ ಪರಿಗಣಿಸಿ ರೋಹಿತ್ ಶರ್ಮಾ ಮತ್ತು ತಂಡ ಒಬ್ಬ ಸ್ಪಿನ್ನರ್ನೊಂದಿಗೆ ಆಡುವ ಬಗ್ಗೆ ಕೂಡ ಚಿಂತಿಸಬಹುದು ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.
"ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಫಿಟ್ ಆಗಿದ್ದರೆ, ಅಕ್ಷರ್ ಪಟೇಲ್ ಆಡುವ ಬಳಗದಿಂದ ಹೊರಗುಳಿಯಬೇಕಾಗುತ್ತದೆ. ಅಕ್ಷರ್ ಪಟೇಲ್ ಬದಲಿಗೆ ಶಾರ್ದೂಲ್ ಠಾಕೂರ್ ಅವಕಾಶ ಪಡೆಯುತ್ತಾರೆ ಎಂದು ನಾನು ಭಾವಿಸುತ್ತೇನೆ. ಪ್ರಾಮಾಣಿಕವಾಗಿ ಹೇಳುವುದಾದರೆ, ಕಳೆದ ಬಾರಿ ಫೈನಲ್ನಲ್ಲಿ ಇಬ್ಬರು ಸ್ಪಿನ್ನರ್ಗಳನ್ನು ಆಡಿಸಿ ತಪ್ಪು ಮಾಡಿದೆವು" ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.

ಸರಿಯಾದ ನಿರ್ಧಾರ ಮಾಡುವುದು ಮುಖ್ಯ
ರಿಷಬ್ ಪಂತ್ ಮತ್ತು ಬುಮ್ರಾ ಭಾರತ ತಂಡದಲ್ಲಿ ಇಲ್ಲದೇ ಇರುವುದು ಹಿನ್ನಡೆಯಾಗಿದೆ. ಇಂಗ್ಲೆಂಡ್ ಪಿಚ್ನಲ್ಲಿ ಬುಮ್ರಾ ಮಾರಕವಾಗುತ್ತಿದ್ದರು, ಗಾಯದ ಸಮಸ್ಯೆಯಿಂದ ಅವರು ಹೊರಗುಳಿದಿದ್ದಾರೆ. ಪಂತ್ ಕೂಡ ಅಪಘಾತದಲ್ಲಿ ಗಾಯಗೊಂಡ ನಂತರ ಚೇತರಿಸಿಕೊಳ್ಳುತ್ತಿದ್ದಾರೆ.
ಶಾರ್ದೂಲ್ ಠಾಕೂರ್ ವೇಗದ ಬೌಲರ್ ಆಗಿದ್ದು, ಬ್ಯಾಟಿಂಗ್ನಲ್ಲಿ ಕೂಡ ಮಿಂಚುವ ಸಾಮರ್ಥ್ಯ ಹೊಂದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಕ್ಷರ್ ಪಟೇಲ್ ಬೌಲಿಂಗ್ನಲ್ಲಿ ಸಫಲವಾಗದಿದ್ದರೂ, ಬ್ಯಾಟಿಂಗ್ನಲ್ಲಿ ಭಾರತಕ್ಕೆ ಅಮೂಲ್ಯ ಕೊಡುಗೆ ನೀಡಿದ್ದರು.