ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಟೀಮ್ ಇಂಡಿಯಾ ಹಾಗೂ ಆಸ್ಟ್ರೇಲಿಯಾದ ಆಟಗಾರರು ಈಗಾಗಲೇ ಇಂಗ್ಲೆಂಡ್ಗೆ ಪ್ರಯಾಣಿಸಿದ್ದು ಕೊನೆಯ ಹಂತದ ಸಿದ್ಧತೆಗಳನ್ನು ಮಾಡುತ್ತಿದ್ದಾರೆ. ಐಪಿಎಲ್ನಲ್ಲಿ ಆಡಿದ್ದ ಸ್ಟಾರ್ ಆಟಗಾರರು ಟೆಸ್ಟ್ ಮಾದರಿಗೆ ಒಗ್ಗಿಕೊಳ್ಳುವ ಅಗತ್ಯವಿದ್ದು ಆ ನಿಟ್ಟಿನಲ್ಲಿ ಮೈದಾನದಲ್ಲಿ ಬೆವರುಳಿಸುತ್ತಿದ್ದಾರೆ. ಎರಡು ತಂಡಗಳು ಕೂಡ ಬಲಿಷ್ಠ ಆಟಗಾರರ ಪಡೆಯೊಂದಿಗೆ ಮಹತ್ವದ ಪಂದ್ಯಕ್ಕೆ ಸಿದ್ಧತೆ ನಡೆಸುತ್ತಿದೆ. ಟೀಮ್ ಇಂಡಿಯಾ ಈ ಫೈನಲ್ ಪಂದ್ಯಕ್ಕೂ ಮುನ್ನ ಎರಡು ಇಂಟರ್ ಸ್ಕ್ವಾಡ್ ಪಂದ್ಯಗಳನ್ನು ಆಡಲಿದೆ
ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಮಾಜಿ ಕೋಚ್ ರವಿ ಶಾಸ್ತ್ರಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ನಲ್ಲಿ ಆಡಬೇಕಾದ ಆಡುವ ಬಳಗವನ್ನು ಹೆಸರಿಸಿದ್ದಾರೆ. ಜೂನ್ 7ರಿಂದ ಆರಂಭವಾಗಲಿರುವ ಈ ಐತಿಹಾಸಿಕ ಪಂದ್ಯದ ಇಂಗ್ಲೆಂಡ್ ನೆಲದಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಬೇಕಿದ್ದರೆ ಯಾವೆಲ್ಲಾ ಆಟಗಾರರು ಕಣಕ್ಕಿಳಿಯಬೇಕು ಎಂಬುದನ್ನು ಉಲ್ಲೇಖಿಸಿದ್ದಾರೆ ರವಿ ಶಾಸ್ತ್ರಿ.

ಪ್ರಸ್ತುತ ಕಾಮೆಂಟೇಟರ್ ಆಗಿರುವ ಮಾಜಿ ಕ್ರಿಕೆಟಿಗ ಹಾಗೂ ಮಾಜಿ ಕೋಚ್ ರವಿ ಶಾಸ್ತ್ರಿ ನಾಯಕ ರೋಹಿತ್ ಶರ್ಮಾ ಹಾಗೂ ಶುಬ್ಮನ್ ಗಿಲ್ ಅವರನ್ನು ಆರಂಭಿಕ ಆಟಗಾರರನ್ನಾಗಿ ಆಯ್ಕೆ ಮಾಡಿದ್ದಾರೆ. ಅದಾದ ಬಳಿಕದ ಕ್ರಮಾಂಕದಲ್ಲಿ ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯಾ ರಹಾನೆ ಮಧ್ಯಮ ಕ್ರಮಾಂಕದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. "ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯದಂತಾ ಮಹತ್ವದ ಪಂದ್ಯದಲ್ಲಿ ಆಡುವ ವಾತಾವರಣಕ್ಕೆ ಸೂಕ್ತವಾಗುವಂಥಾ ಆಟಗಾರರನ್ನು ಆಯ್ಕೆ ಮಾಡಬೇಕು. ಕಳೆದ ಬಾರಿ ಸೌಥಾಂಫ್ಟನ್ನಲ್ಲಿ ಆಡುವಾಗ ಬಹಳ ಮಳೆಯ ವಾತಾವರಣವಿತ್ತು" ಎಂದಿದ್ದಾರೆ ರವಿ ಶಾಸ್ತ್ರಿ.
ವಿಕೆಟ್ ಕೀಪರ್ ಆಯ್ಕೆ ಮಾಡಿದ ಶಾಸ್ತ್ರಿ
ಇನ್ನು ಈ ಮಹತ್ವದ ಪಂದ್ಯದಲ್ಲಿ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಯಾರಾಗಬೇಕು ಎಂಬ ಪ್ರಶ್ನೆಗೆ ರವಿ ಶಾಸ್ತ್ರಿ ನೀಡಿರುವ ಆಯ್ಕೆ ಕುತೂಹಲಕಾರಿಯಾಗಿದೆ. ಭಾರತ ಇಬ್ಬರು ಸ್ಪಿನ್ನರ್ಗಳೊಂದಿಗೆ ಆಡುತ್ತಿದ್ದರೆ ಆಗ ಕೆಎಸ್ ಭರತ್ ಅವರು ವಿಕೆಟ್ ಕೀಪರ್ ಆಗಿ ಆಡಬೇಕು ಎಂದಿದ್ದಾರೆ."ವಿಕೆಟ್ ಕೀಪರ್ ಯಾರಾಗಬೇಕು ಎಂಬುದು ಯಾರೆಲ್ಲಾ ಆಡುತ್ತಿದ್ದಾರೆ ಎಂಬುದನ್ನು ಗಮನಿಸಿ ನಿರ್ಧರಿಸಬೇಕು. ಇಬ್ಬರು ಸ್ಪಿನ್ನರ್ಗಳು ಆಡುತ್ತಿದ್ದರೆ ಆಗ ಬಹುಶಃ ಕೆಎಸ್ ಭರತ್. ಇಲ್ಲದಿದ್ದರೆ ಇಶಾನ್ ಕಿಶನ್ ಅವರತ್ತ ನೋಡಬೇಕು ಎಂದಿದ್ದಾರೆ ಶಾಸ್ತ್ರಿ
ಬೌಲಿಂಗ್ ವಿಭಾಗ ಹೀಗಿದೆ
ಇನ್ನು ರವಿ ಶಾಸ್ತ್ರಿ ಆಲ್ರೌಂಡರ್ ಹಾಗೂ ಬೌಲಿಂಗ್ ವಿಭಾಗದಲ್ಲಿ ರವೀಂದ್ರ ಜಡೇಜಾ ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಹಾಗೂ ಶಾರ್ದೂಲ್ ಠಾಕೂರ್ ಆವರನ್ನು ಆಯ್ಕೆ ಮಾಡಿದ್ದಾರೆ. ಇನ್ನು ಉಮೇಶ್ ಯಾದವ್ ಅಥವಾ ರವಿಚಂದ್ರನ್ ಅಶ್ವಿನ್ ಇಬ್ಬರಲ್ಲಿ ಒಬ್ಬರು ಆಡಬೇಕು ಎಂದು ಸಂಪೂರ್ಣ 11ರ ಬಳಗವನ್ನು ಆಯ್ಕೆ ಮಾಡಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೆ ಆಯ್ಕೆಯಾದ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆಎಸ್ ಭರತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನದ್ಕಟ್, ಮತ್ತು ಇಶಾನ್ ಕಿಶನ್ (ವಿಕೆಟ್ ಕೀಪರ್).