ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ವಿಶ್ವ ಟೆಸ್ಟ್ ಚಾಂಪೊಯನ್ಶಿಪ್ನ ಫೈನಲ್ ಪಂದ್ಯ ಅಂತ್ಯವಾಗಿದ್ದು ಆಸ್ಟ್ರೇಲಿಯಾ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಟೀಮ್ ಇಂಡಿಯಾಗೆ ದಶಕದ ಬಳಿಕ ಐಸಿಸಿ ಟ್ರೋಫಿ ಗೆಲ್ಲುವ ಮತ್ತೊಂದು ಅವಕಾಶ ದೊರೆತಿದ್ದು ಆ ಅವಕಾಶವನ್ನು ಮತ್ತೊಮ್ಮೆ ಕೈಚೆಲ್ಲಿ ನಿರಾಸೆ ಅನುಭವಿಸಿದೆ. ಈ ಬಹುನಿರೀಕ್ಷಿತ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಎ ಎಲ್ಲಾ ವಿಭಾಗದಲ್ಲಿಯೂ ಭಾರತಕ್ಕಿಂತ ಮೇಲುಗೈ ಸಾಧಿಸಿದ್ದು ಅರ್ಹವಾಗಿಯೇ ಟ್ರೋಫಿ ಗೆದ್ದುಕೊಂಡಿದೆ.
ಟೀಮ್ ಇಂಡಿಯಾ ಈ ಪಂದ್ಯದಲ್ಲಿ ಹಿಡಿತ ಸಾಧಿಸುವ ಅವಕಾಶ ಕೊನೆಯ ಹಂತದವರೆಗೂ ಇತ್ತು. ಆದರೆ ಕೋಟ್ಯಂತರ ಅಭಿಮಾನಿಗಳ ನಿರೀಕ್ಷೆಯನ್ನು ಸಾಕಾರಗೊಳಿಸಲು ರೋಹಿತ್ ಪಡೆ ಮತ್ತೊಮ್ಮೆ ವಿಫಲವಾಗಿದೆ. ಈ ಸೋಲಿನ ಬಗ್ಗೆ ಈಗ ಪರಾಮರ್ಶೆಗಳು ನಡೆಯುತ್ತಿದ್ದು ಸೋಲಿಗೆ ಕಾರಣವಾದ ಅಂಶಗಳ ಬಗ್ಗೆ ಚರ್ಚೆಗಳು ಆರಂಭವಾಗಿದೆ. ಹಾಗಾದರೆ ಈ ಪಂದ್ಯದಲ್ಲಿ ಭಾರತ ತಂಡ ಸೋಲಿಗೆ ಕಾರಣವಾದ ಪ್ರಮುಖ ಮೂರು ಅಂಶಗಳು ಯಾವುದು? ಮುಂದೆ ಓದಿ..

ಸ್ಮಿತ್- ಹೆಡ್ ಜೊತೆಯಾಟ
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ನಲ್ಲಿ ಭಾರತ ತಂಡಕ್ಕೆ ಮೊದಲಿಗೆ ಆಘಾತ ನೀಡಿದ್ದು ಸ್ಟೀವ್ ಸ್ಮಿತ್ ಹಾಗೂ ಟ್ರೆವಿಸ್ ಹೆಡ್ ಜೋಡಿ. ಪಂದ್ಯದ ಆರಂಭದಲ್ಲಿ ಭಾರತದ ಬೌಲರ್ಗಳು ಆಸಿಸ್ ದಾಂಡಿಗರ ವಿರುದ್ಧ ಮೇಲುಗೈ ಸಾಧಿಸಿ ಪಂದ್ಯದಲ್ಲಿ ಹಿಡಿತ ಸಾಧಿಸುವ ಸೂಚನೆ ನೀಡಿದರು. ಆದರೆ ಟೀಮ್ ಇಂಡಿಯಾದ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದ್ದು ಸ್ಟೀವ್ ಸ್ಮಿತ್ ಹಾಗೂ ಟ್ರೆವಿಸ್ ಹೆಡ್. ಈ ಜೋಡಿ 4ನೇ ವಿಕೆಟ್ಗೆ ಬರೊಬ್ಬರಿ 285 ರನ್ಗಳ ಜೊತೆಯಾಟವನ್ನು ನೀಡುವ ಮೂಲಕ ತಂಡ ಬೃಹತ್ ಮೊತ್ತಗಳಿಸಲು ಕಾರಣವಾದರು. ಇಡೀ ಪಂದ್ಯವನ್ನು ಓಡಿದರೆ ಭಾರತ ಹಾಗೂ ಆಸ್ಟ್ರೇಲಿಯಾ ಮಧ್ಯೆ ದೊಡ್ಡ ವ್ಯತ್ಯಾಸಕ್ಕೆ ಕಾರಣವಾಗಿದ್ದೇ ಈ ಜೊತೆಯಾಟ.

ಆರಂಭಿಕ ಯಶಸ್ಸಿನ ಲಾಭ ಪಡೆಯಲು ಬೌಲರ್ಗಳು ವಿಫಲ
ಟೀಮ್ ಇಂಡಿಯಾ ಬೌಲರ್ಗ ಸ್ಥಿರವಾದ ಪ್ರದರ್ಶನ ನೀಡಲು ವಿಫಲವಾದರು ಎಂಬುದು ಕೂಡ ಒಪ್ಪಿಕೊಳ್ಳಬೇಕಾದ ಸತ್ಯ. ಆರಂಭದಲ್ಲಿ ಯಶಸ್ಸು ಪಡೆಯಲು ಸಾಧ್ಯವಾದರು ಕೂಡ ಆ ಯಶಸ್ಸನ್ನು ಮುಂದುವರಿಸಲು ಭಾರತ ತಂಡದ ಬೌಲರ್ಗಳಿಗೆ ಸಾಧ್ಯವಾಗಲಿಲ್ಲ. ಹಾಗಾಗಿ ಸ್ಟೀವ್ ಸ್ಮಿತ್ ಹಾಗೂ ಟ್ರೆವಿಸ್ ಹೆಡ್ ದೊಡ್ಡ ಜೊತೆಯಾಟ ನೀಡಲು ಕಾರಣವಾಗಿದ್ದು. ಇದು ಅಂತಿಮ ಇನ್ನಿಂಗ್ಸ್ನಲ್ಲಿಯೂ ಮುಂದುವರಿಯಿತು. ಅಲೆಕ್ಸ್ ಕ್ಯಾರಿ ಹಾಗೂ ಸ್ಟಾರ್ಕ್ ಅವರಿಂದಲೂ 93 ರನ್ಗಳ ಜೊತೆಯಾಟ ದುಬಾರಿಯಾಯಿತು.
ಕೈಕೊಟ್ಟ ಸ್ಟಾರ್ ಬ್ಯಾಟರ್ಗಳು
ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಪ್ರಮುಖ ಬ್ಯಾಟರ್ಗಳು ಕೈಕೊಟ್ಟಿದ್ದು ಕೂಡ ಸೋಲಿನ ಪ್ರಮುಖ ಕಾರಣಗಳಲ್ಲಿ ಒಂದು. ಸ್ವತಃ ನಾಯಕ ರೋಹಿತ್ ಶರ್ಮಾ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಶುಬ್ಮನ್ ಗಿಲ್, ಚೇತೇಶ್ವರ್ ಪೂಜಾರ ಎರಡು ಇನ್ನಿಂಗ್ಸ್ನಲ್ಲಿಯೂ ವೈಫಲ್ಯ ಅನುಭವಿಸಿದರೆ ವಿರಾಟ್ ಕೊಹ್ಲಿ ಕೊನೆಯ ಇನ್ನಿಂಗ್ಸ್ನಲ್ಲಿ ಭರವಸೆ ಮೂಡಿಸಿ ನಿರಾಸೆಗೊಳಿಸಿದರು. ಅಜಿಂಕ್ಯಾ ರಹಾಮೆ ಮಾತ್ರ ಎರಡು ಇನ್ನಿಂಗ್ಸ್ನಲ್ಲಿಯೂ ಭಾರತದ ಪರವಾಗಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ ಮಿಂಚಿದ್ದಾರೆ. ಒಟ್ಟಾರೆಯಾಗಿ ಭಾರತ ತಂಡಕ್ಕೆ ದೊಡ್ಡ ಜೊತೆಯಾಟ ದೊರೆಯದಿರುವುದು ಸೋಲಿಗೆ ಕಾರಣವಾಯಿತು.