ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯದಲ್ಲಿ ಸೆಣೆಸಾಡಲು ಟೀಮ್ ಇಂಡಿಯಾ ಹಾಗೂ ಆಸ್ಟ್ರೇಲಿಯಾ ತಂಡಗಳು ಸಿದ್ಧವಾಗಿದೆ. ಕಳೆದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯದಲ್ಲಿ ಕೈತಪ್ಪಿದ್ದ ಚಾಂಪಿಯನ್ ಪಟ್ಟವನ್ನು ಈ ಬಾರಿ ಹೇಗಾದರೂ ದಕ್ಕಿಸಿಕೊಳ್ಳಲೇಬೇಕೆಂದು ಟೀಮ್ ಇಂಡಿಯಾ ಸರ್ವ ಪ್ರಯತ್ನವನ್ನು ನಡೆಸುತ್ತಿದೆ. ಅದಕ್ಕಾಗಿ ಸಾಕಷ್ಟು ರಣತಂತ್ರಗಳು ಕೂಡ ಈಗ ಸಿದ್ಧವಾಗಿದೆ.
ಆದರೆ ಈ ಹಂತದಲ್ಲಿ ಟೀಮ್ ಇಂಡಿಯಾದ ಆಡುವ ಬಳಗದ ಆಯ್ಕೆ ವಿಚಾರವಾಗಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ದೊಡ್ಡ ಗೊಂದಲದಲ್ಲಿ ಸಿಲುಕಿದ್ದಾರೆ. ಬಹುತೇಕ ಕ್ರಮಾಂಖಗಳ ಬಗ್ಗೆ ಯಾವುದೇ ದ್ವಂದ್ವಗಳು ಇರದಿದ್ದರೂ ಎರಡು ಸ್ಥಾನಗಳು ಟೀಮ್ ಇಂಡಿಯಾ ನಾಯಕನ ಮೇಲೆ ಇನ್ನಿಲ್ಲದ ಒತ್ತಡವನ್ನುಂಟು ಮಾಡಿದೆ. ಕಳೆದ ಬಾರಿಯ ಫೈನಲ್ನಲ್ಲಿ ಅನುಭವಿಸಿದ ಹಿನ್ನಡೆಯಿಂದ ಪಾರಾಗಬೇಕಾದರೆ ಈ ವಿಚಾರವಾಗಿ ನಾಯಕ ಗಟ್ಟಿ ನಿರ್ಧಾರವನ್ನು ತೆಗೆದುಕೊಳ್ಳಬೇಕಿದೆ.

ವಿಕೆಟ್ ಕೀಪರ್ ಯಾರು?
ಟೀಮ್ ಇಂಡಿಯಾ ನಾಯಕನನ್ನು ಕಾಡುವ ಒಂದು ದೊಡ್ಡ ಪ್ರಶ್ನೆಯೆಂದರೆ ವಿಕೆಟ್ ಕೀಪರ್ ಆಯ್ಕೆ. ರಿಷಭ್ ಪಂತ್ ಅಲಭ್ಯತೆಯಲ್ಲಿ ಕೆಎಸ್ ಭರತ್ ಮೊದಲ ಆಯ್ಕೆಯಾಗಿದ್ದರೂ ಭರತ್ ಬ್ಯಾಟಿಂಗ್ನಲ್ಲಿ ಪರಿಣಾಮಕಾರಿಯಾಗಿಲ್ಲ. ಹೀಗಾಗಿ ಗೊಂದಲಕ್ಕೆ ದೂಡಿದೆ. ಇಶಾನ್ ಕಿಶನ್ಗೆ ಅವಕಾಶ ನೀಡಬೇಕು ಎಂಬ ಒತ್ತಡಗಳು ಹೆಚ್ಚಾಗುತ್ತಿದೆ. ಆದರೆ ಒಂದೂ ಟೆಸ್ಟ್ ಆಡದ ಇಶಾನ್ ಕಿಶನ್ ಅವರನ್ನು ನೇರವಾಗಿ ಇಂಥಾ ದೊಡ್ಡ ವೇದಿಕೆಯಲ್ಲಿ ಆಡಿಸುವ ಬಗ್ಗೆ ಆತಂಕವೂ ನಾಯಕನಿಗೆ ಇದೆ. ರಿಷಭ್ ಪಂತ್ ರೀತಿ ಬ್ಯಾಟಿಂಗ್ನಲ್ಲಿ ಆಕ್ರಮಣಕಾರಿಯಾಗಿ ಆಡುವ ಸಾಮರ್ಥ್ಯ ಇರುವ ಆಟಗಾರ ಇಶಾನ್ ಕಿಶನ್ ಎಂಬ ಕಾರಣಕ್ಕೆ ಇಶಾನ್ ಪರವಾಗಿ ಮಾತುಗಳು ಕೇಳಿ ಬರುತ್ತಿದೆ. ಹೀಗಾಗಿ ಈ ವಿಚಾರದಲ್ಲಿ ನಾಯನ ನಿರ್ಧಾರ ಕುತೂಹಲ ಮೂಡಿಸಿದೆ.
ಆರ್ ಅಶ್ವಿನ್ ಅಥವಾ ಉಮೇಶ್ ಯಾದವ್
ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಎಷ್ಟು ವೇಗಿಗಳೊಂದಿಗೆ ಕಣಕ್ಕಿಳಿಯಬೇಕು ಎಂಬುದು ಪ್ರಶ್ನೆಯಾಗಿದೆ. ಮೂವರು ವೇಗಿಗಳು ಹಾಗೂ ಇಬ್ಬರು ಸ್ಪಿನ್ನರ್ಗಳೊಂದಿಗೆ ಆಡಬೇಕಾ ಅಥವಾ ಓರ್ವ ಸ್ಪಿನ್ನರ್ ಹಾಗೂ ನಾಲ್ಕು ವೇಗಿಗಳನ್ನು ಕಣಕ್ಕಿಳಿಸಬೇಕಾ ಎಂಬುದು ಪ್ರಶ್ನೆಯಾಗಿದೆ. ಅಂದರೆ ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ ಹಾಗೂ ಉಮೇಶ್ ಯಾದವ್ ಈ ಇಬ್ಬರ ಪೈಕಿ ಒಬ್ಬರಿಗೆ ಮಾತ್ರವೇ ಆಡುವ ಬಳಗದಲ್ಲಿ ಅವಕಾಶ ದೊರೆಯಲಿದೆ. ಇದು ಕೂಡ ತಂಡದ ನಾಯಕನಿಗೆ ದೊಡ್ಡ ಗೊಂದಲವಾಗಿದೆ.
ಟೀಮ್ ಇಂಡಿಯಾಗೆ ಕಾಡುತ್ತಿದೆ ಆಲ್ರೌಂಡರ್ ವೇಗಿಯ ಕೊರತೆ
ಇನ್ನು ಈ ಸಂದರ್ಭದಲ್ಲಿ ತಂಡಕ್ಕೆ ನಿಜಕ್ಕೂ ಕಾಡುತ್ತಿರುವುದು ಆಲ್ರೌಂಡರ್ ವೇಗಿಯ ಕೊರತೆ. ಇಂಗ್ಲೆಂಡ್ನ ಬೌನ್ಸಿ ಪಿಚ್ಗಳಲ್ಲಿ ವೇಗದ ಬೌಲಿಂಗ್ ವಿಭಾಗದ ಪಾತ್ರ ನಿರ್ಣಾಯವಾಗಿರಲಿದೆ. ತಂಡದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದ ಮಧ್ಯೆ ಹೊಂದಾಣಿಕೆಗಾಗಿ ಮಧ್ಯಮ ಕ್ರಮಾಂಕದಲ್ಲಿ ವೇಗದ ಬೌಲಿಂಗ್ ಆಟಗಾರನ ಪಾತ್ರ ಮಹತ್ವ ಪಡೆದುಕೊಳ್ಳುತ್ತದೆ. ಇನ್ನು ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಇಬ್ಬರು ಕೂಡ ಸ್ಪಿನ್ ಬೌಲಿಂಗ್ ಜೊತೆಗೆ ಬ್ಯಾಟಿಂಗ್ ವಿಭಾಗದ ಬಲವನ್ನು ಕೂಡ ಹೆಚ್ಚಿಸಲಿದ್ದಾರೆ ಎಂಬುದು ಗಮನಾರ್ಹ. ಈ ಎಲ್ಲಾ ಲೆಕ್ಕಾಚಾರಗಳನ್ನು ನೋಡಿಕೊಂಡು ನಾಯಕ ರೋಹಿತ್ ಶರ್ಮಾ ಹಾಗೂ ಮ್ಯಾನೇಜ್ಮೆಂಟ್ನ ನಿರ್ಧಾರ ಸಾಕಷ್ಟು ಕುತೂಹಲ ಮೂಡಿಸಿದೆ.