ಸೂರ್ಯಕುಮಾರ್ ಯಾದವ್ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್.. ಅಲ್ಲದೆ ಈಗ ಇವರ ಹೆಗಲಿಗೆ ಟೀಮ್ ಇಂಡಿಯಾ ಟಿ20 ನಾಯಕ ಜವಾಬ್ದಾರಿ ಸಹ ಬಿದ್ದಿದೆ. ಸಿಕ್ಕ ಅವಕಾಶವನ್ನು ಎರಡೂ ಕೈಗಳಲ್ಲಿ ಬಳಸಿಕೊಳ್ಳುವ ಸೂರ್ಯ ಧಮಾಕೆದಾರ ಪ್ರದರ್ಶನ ನೀಡುತ್ತಿದ್ದಾರೆ. ಸ್ಕೈ ಅವರ ನಾಯಕತ್ವದಲ್ಲಿ ಭಾರತ, ಶ್ರೀಲಂಕಾ ಪ್ರವಾಸದಲ್ಲಿ ಟಿ20 ಸರಣಿಯನ್ನು ಗೆದ್ದು ಕೊಂಡಿದೆ.
ಸೂರ್ಯಕುಮಾರ್ ಯಾದವ್ ಸದ್ಯ ರಜೆಯ ಮಜೆಯಲ್ಲಿದ್ದಾರೆ. ಸೂರ್ಯ ರಜೆಯ ವೇಳೆಯೂ ಸಾಮಾಜಿಕ ತಾಣದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ಸೂರ್ಯ ಅವರ ಒಂದು ವಿಡಿಯೋ ಸಖತ್ ವೈರಲ್ ಆಗಿದೆ. ಸಾಮಾನ್ಯವಾಗಿ ಬ್ಲ್ಯೂ ಜೆರ್ಸಿಯಲ್ಲಿ ಕಾಣಿಸಿಕೊಳ್ಳುವ ಸೂರ್ಯ ಅವರು ಈಗ ಬೇರೆ ಜೆರ್ಸಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಸೂರ್ಯ ಸದ್ಯ ಬಿಡುವಿನ ವೇಳೆಯನ್ನು ನ್ಯೂಯಾರ್ಕ್ನಲ್ಲಿ ಆನಂದಿಸುತ್ತಿದ್ದಾರೆ. ಶನಿವಾರ ಸ್ಕೈ ನ್ಯೂಯಾರ್ಕ್ನ ಯಾಂಕಿ ಸ್ಟೇಡಿಯಂನಲ್ಲಿ ಕಾಣಿಸಿಕೊಂಡರು. ಈ ಭೇಟಿಯ ವೇಳೆ ಮೇಜರ್ ಲೀಗ್ ಬೇಸ್ಬಾಲ್ನ ನ್ಯೂಯಾರ್ಕ್ ಯಾಂಕೀಸ್ ತಂಡದಿಂದ ಸೂರ್ಯಕುಮಾರ್ ಅವರನ್ನು ಗೌರವಿಸಲಾಯಿತು.
ಸೂರ್ಯಕುಮಾರ್ ಯಾದವ್ ಮೈದಾನಕ್ಕೆ ಎಂಟ್ರಿ ನೀಡುತ್ತಿದ್ದಂತೆ ಸ್ಟಾರ್ ಕ್ರಿಕೆಟ್ ಆಟಗಾರನಿಗೆ ಅದ್ಧೂರಿ ಸ್ವಾಗತ ನೀಡಲಾಯಿತು. ಈ ಸಮಯದಲ್ಲಿ, ಸೂರ್ಯ ಅವರಿಗೆ ಯಾಂಕೀಸ್ ಪಿನ್ಸ್ಟ್ರೈಪ್ ಜರ್ಸಿಯನ್ನು ನೀಡಲಾಯಿತು ಅದು ಅವರ ಕ್ರಿಕೆಟ್ ಜರ್ಸಿ ಸಂಖ್ಯೆಯೇ ಆಗಿತ್ತು. ಸೂರ್ಯಕುಮಾರ್ ಯಾದವ್ ಅವರ ಈ ಚಿತ್ರಗಳು ಮತ್ತು ವೀಡಿಯೊಗಳು ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ.
ಸೂರ್ಯಕುಮಾರ್ ಯಾದವ್ ಇತ್ತೀಚಿಗೆ ಭಾರತ ತಂಡದ ಚುಕ್ಕಾಣಿಯನ್ನು ಹಿಡಿದಿದ್ದಾರೆ. ವೆಸ್ಟ್ ಇಂಡೀಸ್ ಹಾಗೂ ಅಮೆರಿಕದಲ್ಲಿ ನಡೆದಿದ್ದ ಟಿ20 ವಿಶ್ವಕಪ್ನಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸುತ್ತಿದ್ದಂತೆ ರೋಹಿತ್ ಶರ್ಮಾ, ಚುಟುಕು ಕ್ರಿಕೆಟ್ಗೆ ವಿದಾಯ ಹೇಳಿದರು. ಇವರಿಂದ ತೆರವಾದ ಸ್ಥಾನವನ್ನು ಯಾರು ತುಂಬುತ್ತಾರೆ ಎಂಬ ಪ್ರಶ್ನೆಗಳು ಬಹುವಾಗಿ ಎಲ್ಲೆಡೆ ಚರ್ಚೆ ಆಗುತ್ತಿದ್ದವು. ಅಭಿಮಾನಿಗಳ ಟೀಮ್ ಇಂಡಿಯಾದ ನೂತನ ನಾಯಕ ಯಾರು ಆಗುತ್ತಾರೆ ನೋಡುತ್ತಾ ಇದ್ದರು.
ಶ್ರೀಲಂಕಾ ಸರಣಿಗೆ ಟೀಮ್ ಇಂಡಿಯಾವನ್ನು ಪ್ರಕಟಿಸುವ ವೇಳೆ ಹಾರ್ದಿಕ್ ಪಾಂಡ್ಯ ಅವರನ್ನು ಟಿ20 ಕ್ರಿಕೆಟ್ಗೆ ನಾಯಕರನ್ನಾಗಿ ಮಾಡುತ್ತಾರೆ ಎಂಬ ಸುದ್ದಿಗಳು ಇದ್ದವು. ಅಲ್ಲದೆ ರೋಹಿತ್ ಶರ್ಮಾ ಅವರನ್ನು ಏಕದಿನ ಸರಣಿಗೆ ನಾಯಕರನ್ನಾಗಿ ಮಾಡಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಎಲ್ಲರ ನಿರೀಕ್ಷೆಗಳು ಉಲ್ಟಾ ಹೊಡೆದಿದ್ದವು. ಬಿಸಿಸಿಐ ಆಯ್ಕೆ ಸಮಿತಿ ಹಾಗೂ ಮುಖ್ಯ ಕೋಚ್ ಗೌತಮ್ ಗಂಭೀರ್ ನಡುವೆ ನಡೆದ ಸಭೆಯಲ್ಲಿ ಸೂರ್ಯಕುಮಾರ್ ಯಾದವ್ಗೆ ಟೀಮ್ ಇಂಡಿಯಾ ಪಟ್ಟವನ್ನು ಕಟ್ಟಲಾಯಿತು. ಸ್ಕೈ ಹೆಸರಿಗೆ ಆಯ್ಕೆ ಸಮಿತಿ, ಕೋಚ್ ಹಸಿರು ನಿಶಾನೆ ನೀಡಿತು.
ಟಿ20 ವಿಶ್ವಕಪ್ನಲ್ಲಿ ಉಪನಾಯಕ ಸ್ಥಾನವನ್ನು ಹೊಂದಿದ್ದ ಹಾರ್ದಿಕ್ ಪಾಂಡ್ಯ ಅವರಿಗೆ ನಾಯಕತ್ವ ನೀಡಲಾಗುತ್ತದೆ ಎಂಬ ಮಾತುಗಳು ಇದ್ದವು. ಹಾರ್ದಿಕ್ ಸಹ ತಮ್ಮನ್ನು ತಾವು ಹಾಗೆ ಪ್ರಸ್ತುತ ಪಡಿಸಿಕೊಂಡಿದ್ದರು. ಆದರೆ ಈ ನಿರೀಕ್ಷೆಗಳು ಉಲ್ಟಾ ಹೊಡೆದಿದ್ದವು. ಶ್ರೀಲಂಕಾ ಪ್ರವಾಸದಲ್ಲಿ ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ನಾಯಕತ್ವದಲ್ಲಿ ಆಡಿದರು. ಪ್ರವಾಸದಲ್ಲಿ ಆಡಿದ ಮೂರು ಪಂದ್ಯಗಳ ಸರಣಿಯನ್ನು ಭಾರತ ಗೆದ್ದುಕೊಂಡಿತು.