ಕ್ರಿಕೆಟ್ನಲ್ಲಿ ದುಡ್ಡಿಲ್ಲ ಎಂದಿದ್ದರೆ ಕ್ರಿಕೆಟಿಗ ಯಾಕಾಗ್ತಾರೆ, ಪೆಟ್ರೋಲ್ ಬಂಕ್ ಕೆಲಸ ಅಷ್ಟೇ!: ಹಾರ್ದಿಕ್ ಪಾಂಡ್ಯ

ಓರ್ವ ಬಡ ಯುವಕ ಕ್ರಿಕೆಟ್ ಆಡುವ ಮೂಲಕ ಶ್ರೀಮಂತನಾದ ಎಂಬುದಕ್ಕೆ ಉದಾಹರಣೆ ನೀಡುವುದಾದರೆ ಎಲ್ಲರ ಬಾಯಲ್ಲೂ ಮೊದಲು ಬರುವ ಹೆಸರೇ ಭಾರತ ಕ್ರಿಕೆಟ್ ತಂಡದ ಪ್ರತಿಭಾವಂತ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರದ್ದು. ಹೌದು, ಬರೋಡಾ ನಗರದಲ್ಲಿನ ಒಂದು ಪುಟ್ಟ ಮನೆಯಲ್ಲಿ ವಾಸವಿದ್ದ ಹಾರ್ದಿಕ್ ಪಾಂಡ್ಯ ಇಂದು ಮುಂಬೈನಂತಹ ಬೃಹತ್ ನಗರದಲ್ಲಿ ಐಷಾರಾಮಿ ಮನೆ ಹೊಂದಿದ್ದಾರೆ. ಹಾರ್ದಿಕ್ ಪಾಂಡ್ಯ ಜೀವನದಲ್ಲಿ ಇಷ್ಟು ದೊಡ್ಡ ಮಟ್ಟದ ಆರ್ಥಿಕ ಬದಲಾವಣೆಗಳಾಗುತ್ತವೆ ಎಂದು ಯಾರೂ ಊಹಿಸಿರಲಿಲ್ಲ, ಅಷ್ಟೇ ಯಾಕೆ ಸ್ವತಃ ಹಾರ್ದಿಕ್ ಪಾಂಡ್ಯ ಕೂಡ ಈ ಕುರಿತಾಗಿ ಯಾವುದೇ ಯೋಚನೆಯನ್ನು ಕೂಡ ಬಹುಶಃ ಮಾಡಿರಲಿಕ್ಕಿಲ್ಲ. ಹೀಗೆ ಬಡತನವನ್ನು ಎದುರಿಸಿ ಜೀವನ ಸಾಗಿಸುತ್ತಿದ್ದ ಒಂದು ಸಾಮಾನ್ಯ ಕುಟುಂಬದಿಂದ ಬಂದ ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಇಂದು ಐಷಾರಾಮಿ ಜೀವನ ನಡೆಸುತ್ತಿರುವುದರ ಕುರಿತು ಹಲವಾರು ಮಂದಿ ಪ್ರಶಂಸೆ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಈ ಕುರಿತಾಗಿ ಕೊಂಕು ಮಾತುಗಳನ್ನಾಡಿದ್ದಾರೆ. ಅದರಲ್ಲೂ ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ದುಡ್ಡಿಗೋಸ್ಕರ ಕ್ರಿಕೆಟ್ ಆಡುತ್ತಾರೆ ಎಂಬ ಟೀಕೆಗಳು ಪಾಂಡ್ಯ ಬ್ರದರ್ಸ್ ಮುಂಬೈನಲ್ಲಿ ಐಷಾರಾಮಿ ಮನೆ ಖರೀದಿಸಿದ ನಂತರ ಹೆಚ್ಚಾಗತೊಡಗಿದವು.
ಇನ್ನು ಈ ಟೀಕೆಗಳ ಕುರಿತಾಗಿ ಹಾರ್ದಿಕ್ ಪಾಂಡ್ಯ ಆಗಲಿ ಅಥವಾ ಕೃನಾಲ್ ಪಾಂಡ್ಯ ಆಗಲಿ ಇಷ್ಟು ದಿನಗಳಲ್ಲಿ ಪ್ರತಿಕ್ರಿಯೆಯನ್ನು ನೀಡಲು ಮುಂದಾಗಿರಲಿಲ್ಲ. ಆದರೆ ಇದೀಗ ಇದೇ ಮೊದಲ ಬಾರಿ ದುಡ್ಡಿನ ಕುರಿತಾದ ಟೀಕೆಗಳ ವಿರುದ್ಧ ಹಾರ್ದಿಕ್ ಪಾಂಡ್ಯ ಮಾತನಾಡಿದ್ದು ಇಷ್ಟು ದಿನ ತಮ್ಮಲ್ಲಡಗಿದ್ದ ಅಸಮಾಧಾನವನ್ನು ಮತ್ತು ಉತ್ತರಗಳನ್ನು ಹೊರಹಾಕಿದ್ದಾರೆ.
ಹಾರ್ದಿಕ್ ಪಾಂಡ್ಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗಳಲ್ಲಿ ಮುಂಬೈ ಇಂಡಿಯನ್ಸ್ ಪರ ಉತ್ತಮ ಆಟವನ್ನು ಆಡುವ ಮೂಲಕ ಮತ್ತು ಟೀಮ್ ಇಂಡಿಯಾ ಪರ ಸಾಕಷ್ಟು ಉತ್ತಮ ಪ್ರದರ್ಶನಗಳನ್ನು ನೀಡುವುದರ ಮೂಲಕ ಈ ಹಂತಕ್ಕೆ ಬೆಳೆದು ನಿಂತಿದ್ದಾರೆ. ಹೀಗೆ ತಾವು ಕ್ರಿಕೆಟ್ನ್ನು ತಮ್ಮ ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಂಡು, ತಮ್ಮ ಪ್ರತಿಭೆಯಿಂದ ದೊಡ್ಡ ಮಟ್ಟಕ್ಕೆ ಬೆಳೆದು ಆರ್ಥಿಕ ಬೆಳವಣಿಗೆಯನ್ನು ಹೊಂದಿರುವುದರ ಕುರಿತು ಟೀಕೆಗಳನ್ನು ವ್ಯಕ್ತಪಡಿಸಿದ ಹಲವಾರು ಟೀಕಾಕಾರರಿಗೆ ಹಾರ್ದಿಕ್ ಪಾಂಡ್ಯ ಈ ಕೆಳಕಂಡಂತೆ ಉತ್ತರಿಸಿದ್ದಾರೆ.

"ನನ್ನ ಮತ್ತು ನನ್ನ ತಮ್ಮ ಕೃನಾಲ್ ಪಾಂಡ್ಯನದ್ದು ಗಟ್ಟಿತಲೆ!"
"ಸದ್ಯ ಕ್ರಿಕೆಟ್ ಜಗತ್ತು ಯಾವ ರೀತಿ ನಡೆಯುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಗಟ್ಟಿತಲೆ ಇರಬೇಕು. ನಾನು ಮತ್ತು ನನ್ನ ತಮ್ಮ ಕೃನಾಲ್ ಪಾಂಡ್ಯ ಇಬ್ಬರೂ ಗಟ್ಟಿ ತಲೆಯನ್ನು ಹೊಂದಿದ್ದು, ಕ್ರಿಕೆಟ್ನಲ್ಲಿ ಅಪಾರವಾದ ಹಣವಿದೆ ಎಂಬುದನ್ನು ಒಪ್ಪುತ್ತೇವೆ. ಹಲವಾರು ಮಂದಿ ಈ ಇಬ್ಬರಿಗೂ ಹಣ ಸಿಕ್ಕ ಮೇಲೆ ಹೆಚ್ಚು ಹಾರಾಡುತ್ತಾ ಇದ್ದಾರೆ ಎಂದೆಲ್ಲಾ ಟೀಕಿಸಿದರು. ಆದರೆ ಅಂತಿಮವಾಗಿ ನನ್ನ ಮತ್ತು ನನ್ನ ತಮ್ಮನ ಕಾಲು ಇದೇ ಕ್ರಿಕೆಟ್ ಕ್ರೀಡಾಂಗಣದ ನೆಲದ ಮೇಲಿರುತ್ತದೆ" ಎಂದು ಹಾರ್ದಿಕ್ ಪಾಂಡ್ಯ ದುಡ್ಡು ಬಂದ ನಂತರ ಪಾಂಡ್ಯ ಬ್ರದರ್ಸ್ ಸಾಕಷ್ಟು ಬದಲಾಗಿದ್ದಾರೆ ಎನ್ನುವವರಿಗೆ ಚಾಟಿ ಬೀಸಿದ್ದಾರೆ.

ಕ್ರಿಕೆಟ್ನಲ್ಲಿ ದುಡ್ಡಿಲ್ಲದೇ ಇದ್ದಿದ್ದರೆ ಪೆಟ್ರೋಲ್ ಬಂಕ್ ಕೆಲಸ ಮಾಡ್ತಿದ್ದೆ
ಈ ಕುರಿತಾಗಿ ಇನ್ನೂ ಮುಂದುವರಿದು ಮಾತನಾಡಿರುವ ಹಾರ್ದಿಕ್ ಪಾಂಡ್ಯ ಕ್ರಿಕೆಟ್ನಲ್ಲಿ ದುಡ್ಡಿದೆ ಎಂಬುದನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸಿದ್ದಾರೆ. "ಕ್ರಿಕೆಟ್ನಲ್ಲಿ ದುಡ್ಡಿರುವುದು ನಿಜ, ಆ ದುಡ್ಡು ಒಳ್ಳೆಯದು ಕೂಡ ಹೌದು. ಆ ಹಣ ಓರ್ವ ಕ್ರಿಕೆಟಿಗನ ಬದುಕನ್ನೇ ಬದಲಾಯಿಸಿಬಿಡುತ್ತದೆ, ಅದಕ್ಕೆ ನಾನೇ ತಾಜಾ ಉದಾಹರಣೆ. ಕ್ರಿಕೆಟ್ನಲ್ಲಿ ಹಣವಿಲ್ಲ ಎಂದಿದ್ದರೆ ನಾನು ಕ್ರಿಕೆಟಿಗನಾಗುವ ಬದಲು ಯಾವುದಾದರೂ ಪೆಟ್ರೋಲ್ ಬಂಕ್ನಲ್ಲಿ ಕೆಲಸಗಾರನಾಗಿ ದುಡಿಮೆ ಮಾಡುತ್ತಿದ್ದೆ. ನಿಜವಾಗಿಯೂ ನಾನು ತಮಾಷೆ ಮಾಡುತ್ತಿಲ್ಲ, ನನಗೆ ನನ್ನ ಕುಟುಂಬದವರೇ ಮೊದಲ ಆದ್ಯತೆ, ಅವರ ಉತ್ತಮ ಜೀವನಕ್ಕೋಸ್ಕರ ಹಣದ ಅಗತ್ಯತೆ ಇದ್ದೇ ಇರುತ್ತದೆ" ಎಂದು ಹಾರ್ದಿಕ್ ಪಾಂಡ್ಯ ಕ್ರಿಕೆಟ್ನಲ್ಲಿ ಹಣವಿದೆ ಮತ್ತು ಅದರ ಅಗತ್ಯತೆ ಆಟಗಾರರಿಗಿದೆ ಎಂಬುದನ್ನು ಮನದಟ್ಟು ಮಾಡಿದ್ದಾರೆ.

ಕ್ರಿಕೆಟ್ನಲ್ಲಿ ಹಣವಿಲ್ಲ ಎಂದರೆ ಎಷ್ಟು ಜನ ಕ್ರಿಕೆಟ್ ಆಡುತ್ತಾರೋ ಗೊತ್ತಿಲ್ಲ
"2019ರ ಸಮಯದಲ್ಲಿ ವ್ಯಕ್ತಿಯೋರ್ವರು ಯುವ ಕ್ರಿಕೆಟಿಗರು ಹಣಕ್ಕೋಸ್ಕರ ಆಟವನ್ನಾಡಬಾರದು ಎಂದಿದ್ದರು, ಆದರೆ ಅದನ್ನು ನಾನು ಒಪ್ಪಲಿಲ್ಲ. ಒಂದು ಹಳ್ಳಿಯಿಂದ ಅಥವಾ ಸಾಮಾನ್ಯ ಪಟ್ಟಣದಿಂದ ಬಂದ ಬಡ ಕುಟುಂಬದ ಕ್ರಿಕೆಟಿಗನಿಗೆ ದೊಡ್ಡ ಒಪ್ಪಂದಗಳ ಆಫರ್ ಬಂದರೆ ಅದನ್ನು ಆತ ತಿರಸ್ಕರಿಸುವುದಿಲ್ಲ. ತನ್ನ ಕುಟುಂಬದವರಿಗೋಸ್ಕರ ಹಾಗೂ ತನ್ನ ಆಪ್ತರಿಗೋಸ್ಕರ ಆತ ಅದನ್ನು ಸ್ವೀಕರಿಸುತ್ತಾನೆ. ಇನ್ನು ಓರ್ವ ಕ್ರಿಕೆಟಿಗನಿಗೆ ಉತ್ತಮ ಹಣ ದೊರೆತರೆ ಆತ ಇನ್ನೂ ಹೆಚ್ಚಿನ ಉತ್ಸಾಹದೊಂದಿಗೆ ಆಟವನ್ನಾಡುತ್ತಾನೆ. ಹೀಗಾಗಿ ಓರ್ವ ಕ್ರಿಕೆಟಿಗನಿಗೆ ಕೇವಲ ಆಟ ಮಾತ್ರವಲ್ಲದೇ ಸಂಪಾದನೆಯೂ ಕೂಡ ಮುಖ್ಯವಾದದ್ದು. ಒಂದುವೇಳೆ ಕ್ರಿಕೆಟ್ನಲ್ಲಿ ಹಣವಿಲ್ಲ ಎಂದರೆ ಎಷ್ಟು ಜನ ಕ್ರಿಕೆಟ್ ಆಡಲು ಮುಂದೆ ಬರುತ್ತಾರೋ ನನಗಂತೂ ಗೊತ್ತಿಲ್ಲ" ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications