
ಬೆಂಗಳೂರು, ಮೇ 08: ಇಂಗ್ಲೆಂಡ್ ಮತ್ತು ವೇಲ್ಸ್ ಆತಿಥ್ಯದಲ್ಲಿ ಮೇ 30ರಿಂದ ನಡೆಯಲಿರುವ ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಆಲ್ರೌಂಡರ್ಗಳು ಮಹತ್ವದ ಪಾತ್ರವಹಿಸಲಿದ್ದು, ಟೀಮ್ ಇಂಡಿಯಾ ಸದ್ಯ ಕ್ರಿಕೆಟ್ ಜಗತ್ತಿನ ಅತ್ಯುತ್ತಮ ಆಲ್ರೌಂಡ್ ಆಟಗಾರನನ್ನು ಹೊಂದಿದೆ ಎಂದು 2011ರ ಕ್ರಿಕೆಟ್ ವಿಶ್ವಕಪ್ನ ಟೂರ್ನಿ ಶ್ರೇಷ್ಠ ಆಟಗಾರ ಯುವರಾಜ್ ಸಿಂಗ್ ಹೇಳಿದ್ದಾರೆ.
ಕಳಪೆ ಫಾರ್ಮ್ನಿಂದಾಗಿ ಭಾರತ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿರುವ 37 ವರ್ಷದ ಅನುಭವಿ ಆಲ್ರೌಂಡರ್ ಯುವರಾಜ್ ಸಿಂಗ್, 2011ರ ಏಕದಿನ ಕ್ರಿಕೆಟ್ ವಿಶ್ವಕಪ್ನಲ್ಲಿ 362 ರನ್ಗಳನ್ನು ಸಿಡಿಸಿದ್ದರಲ್ಲದೆ, ಒಟ್ಟಾರೆ 15 ವಿಕೆಟ್ಗಳನ್ನು ಪಡೆಯುವ ಮೂಲಕ ಆಲ್ರೌಂಡ್ ಪ್ರದರ್ಶನ ನೀಡಿ ತಂಡಕ್ಕೆ ಪ್ರಶಸ್ತಿ ಗೆದ್ದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಇದೀಗ ಈ ಬಾರಿಯ ವಿಶ್ವಕಪ್ನಲ್ಲೂ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲಿಯೂ ಪರಿಣಾಮಕಾರಿ ಪ್ರದರ್ಶನ ನೀಡಬಲ್ಲ ಆಟಗಾರ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಮೇ 30ರಿಂದ ಇಂಗ್ಲೆಂಡ್ ಮತ್ತು ವೇಲ್ಸ್ ಆತಿಥ್ಯದಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ಭಾರತ ತಂಡದ ಪರ ತಾವು 2011ರಲ್ಲಿ ನೀಡಿದ್ದ ಪ್ರದರ್ಶನವನ್ನು ಮರುಕಳಿಸಬಲ್ಲ ಆಟಗಾರ ಎಂದು ಯುವರಾಜ್ ಸಿಂಗ್ ಭವಿಷ್ಯ ನುಡಿದಿದ್ದಾರೆ.
"ಈ ವಿಚಾರ ಕುರಿತಾಗಿ ಹಾರ್ದಿಕ್ ಬಳಿಯೂ ಚರ್ಚಿಸಿದ್ದೇನೆ. ವಿಶ್ವಕಪ್ನಲ್ಲಿ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಅತ್ಯುತ್ತಮ ಪ್ರದರ್ಶನ ನೀಡುವ ಉತ್ತಮ ಅವಕಾಶ ನಿನ್ನ ಕೈಲಿದೆ ಎಂದು ಅವನಿಗೆ ಹೇಳಿದ್ದೇನೆ. ಸದ್ಯ ಅವರ ಫಾರ್ಮ್ ಕೂಡ ಉತ್ತಮವಾಗಿದೆ. ಐಪಿಎಲ್ನಲ್ಲಿ ಅವರ ಬ್ಯಾಟಿಂಗ್ ನಿಜಕ್ಕೂ ಅದ್ಭುತ. ಇದನ್ನೇ ಅವರು ಮುಂದುವರಿಸುತ್ತಾರೆಂದು ಆಶಿಸುತ್ತೇನೆ,'' ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.
"ಇನ್ನು ಬೌಲಿಂಗ್ನಲ್ಲೂ ಉತ್ತಮ ನೇರ ಮತ್ತು ನಿಖರತೆ ಅವರಲ್ಲಿದೆ. ಆದರೆ, ಒತ್ತಡ ನಿಭಾಯಿಸುವುದೇ ಬಹುದೊಡ್ಡ ಸವಾಲು ಎಂದು ತಿಳಿಹೇಳಿದ್ದೇನೆ. ಹಾರ್ದಿಕ್ ಉತ್ತಮ ಟೂರ್ನಿಯನ್ನಾಡಲಿ ಎಂದಷ್ಟೇ ಆಶಿಸುತ್ತೇನೆ,'' ಎಂದಿದ್ದಾರೆ.
25 ವರ್ಷದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮುಂಬಯಿ ಇಂಡಿಯನ್ಸ್ ಪರ ಈ ಬಾರಿಯ ಐಪಿಎಲ್ನಲ್ಲಿ 200 ಸನಿಹ ರನ್ಗಳನ್ನು ಗಳಿಸಿದ್ದು, 14 ವಿಕೆಟ್ಗಳನ್ನು ಉರುಳಿಸಿ ಭರ್ಜರಿ ಆಲ್ರೌಂಡ್ ಆಟವಾಡಿದ್ದಾರೆ.